ತೆರಿಗೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ವಿರುದ್ಧ ದೆಹಲಿಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿದ್ದ ಐತಿಹಾಸಿಕ ಪ್ರತಿಭಟನೆ ಕೆಲವು ಕಾರಣಗಳಿಗೆ ಗಮನ ಸೆಳೆಯಿತು.
ಅತ್ಯಂತ ಶಿಸ್ತುಬದ್ಧವಾಗಿ ನಡೆದ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ರಾಜ್ಯಕ್ಕಾಗಿರುವ ಅನ್ಯಾಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಕಾಂಗ್ರೆಸ್ನ ದೆಹಲಿ ಚಲೋನಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ಹಾಗೂ ಕಾಂಗ್ರೆಸ್ನ ಪ್ರಮುಖ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ವಿಶಾಲವಾಗಿ ಹಾಕಿರುವ ಪೆಂಡಾಲ್ನಲ್ಲಿ ಸೇರಿರುವ ರಾಜ್ಯದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಗಮನಾರ್ಹ ಸಂಗತಿ ಎಂದರೆ ಪ್ರತಿಭಟನಾ ಸ್ಥಳದಲ್ಲಿ ತ್ರಿವರ್ಣ ಧ್ವಜ ಮತ್ತು ಕನ್ನಡ ಧ್ವಜಗಳು ಮಾತ್ರ ಇದ್ದವು. ಕಾಂಗ್ರೆಸ್ ಪಕ್ಷದ ಧ್ವಜ ಇರಲಿಲ್ಲ. ಇದು ಇಡೀ ಪ್ರತಿಭಟನೆಯ ಘನತೆಯನ್ನು ಹೆಚ್ಚಿಸಿತ್ತು. ಈ ಪ್ರತಿಭಟನೆ ರಾಜಕೀಯ ಕಾರಣ, ಚುನಾವಣೆಯ ಉದ್ದೇಶ ಹೊಂದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಪುಷ್ಠಿ ನೀಡುವಂತಿತ್ತು.
ಮೇಲ್ನೋಟಕ್ಕೆ ಕಾಂಗ್ರೆಸ್ ಪ್ರತಿಭಟನೆ ಎಂದು ಕಂಡರೂ ದೆಹಲಿ ನೋಡುಗರ ಕಣ್ಣಲ್ಲಿ ಕರ್ನಾಟಕದ ಪ್ರತಿಭಟನೆ ಎಂಬಂತೆ ಕಂಡಿತು. ಪ್ರತಿಭಟನೆಯಲ್ಲಿ ಬಳಿಸಿದ ಘೋಷಣಾ ಫಲಕಗಳು ಕೂಡ ರಾಜ್ಯದ ಸಾಂಕೇತಿಕ ಬಣ್ಣದಲ್ಲೇ ಎದ್ದುಕಂಡವು.
ಲಕ್ಷ್ಮಣ ಸವದಿ ನಮ್ಮವ!
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಮುಂಭಾಗದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಬಲಭಾಗದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಕುಳ್ಳಿರಿಸಿಕೊಂಡು ಪ್ರತಿಭಟಸಿದರು.
ಲಕ್ಷ್ಮಣ ಸವದಿ ಬಿಜೆಪಿ ಸೇರಲಿದ್ದಾರೆ ಎನ್ನುವ ಊಹಾಪೋಹದ ನಡುವೆ ದೆಹಲಿಯಲ್ಲಿ ನಡೆದ ಈ ಬೆಳವಣಿಗೆ ಲಕ್ಷ್ಮಣ ಸವದಿ ಪೂರ್ಣವಾಗಿ ಕಾಂಗ್ರೆಸ್ ಅನ್ನು ಒಪ್ಪಿಕೊಂಡಂತೆ ಕಂಡಿತು. ಜೊತೆಗೆ ಬಿಜೆಪಿಯ ಹೈಕಮಾಂಡ್ನವರಿಗೂ ಈ ಮೂಲಕ ಸಿದ್ದರಾಮಯ್ಯ ಅವರು “ಲಕ್ಷ್ಮಣ ಸವದಿ ನಮ್ಮವ” ಎನ್ನುವ ಸಂದೇಶ ಸಾರಿದಂತಿತ್ತು.
ಜಗದೀಶ್ ಶೆಟ್ಟರ್ ಕಳೆದ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಮುನಿಸಿಕೊಂಡು ಪಕ್ಷ ತೊರೆದು ಕಾಂಗ್ರೆಸ್ ಸೇರಿ, ಚುನಾವಣೆಯಲ್ಲಿ ಸೋತರೂ ವಿಧಾನಪರಿಷತ್ ಸದಸ್ಯರನ್ನಾಗಿ ಕಾಂಗ್ರೆಸ್ ಮಾಡಿತ್ತು. ಇದೀಗ ಶೆಟ್ಟರ್ ಬಿಜೆಪಿಗೆ ವಾಪಸಾಗಿದ್ದಾರೆ. ಆ ನಂತರ ಸವದಿ ಬಿಜೆಪಿಗೆ ಮರಳುತ್ತಾರೆ ಎಂಬ ಚರ್ಚೆ ಜೋರಾಗಿತ್ತು.