- ಹಿಂದಿನ ಸರ್ಕಾರದ ಜನಪರ ಯೋಜನೆ ಮುಂದುವರೆಸಲು ಸಿಎಂಗೆ ಮನವಿ
- ಸಿದ್ದರಾಮಯ್ಯಗೆ ಪತ್ರ ಮೂಲಕ ಕೋರಿಕೊಂಡ ಮಾಜಿ ಸಿಎಂ ಬೊಮ್ಮಾಯಿ
ಕಾಂಗ್ರೆಸ್ನ ಗ್ಯಾರಂಟಿ ಜಾರಿ ಸಲುವಾಗಿನ ಆರ್ಥಿಕತೆ ಹೊಂದಾಣಿಕೆ ಮಾಡಿಕೊಳ್ಳಲು, ಸರ್ಕಾರ ಇತರೆ ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕದಿರುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಈ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಬಸವರಾಜ ಬೊಮ್ಮಾಯಿ, ಹಳೆಯ ಸರ್ಕಾರ ರೂಪಿಸಿದ್ದ ಯೋಜನೆಗಳನ್ನೂ ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಇತರೆ ಯೋಜನೆಗಳ ಅನುದಾನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಕೇಳಿಕೊಂಡಿದ್ದಾರೆ.
ಅವರ ಪತ್ರ ಸಾರಾಂಶ ಹೀಗಿದೆ:
ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್ ಪಿ ಅನುದಾನವನ್ನು ಕಡಿತಗೊಳಿಸಬಾರದು, ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಹಾಸ್ಟೆಲ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಅದಕ್ಕೆ ಅನುದಾನ ಕಡಿತಗೊಳಿಸಬಾರದು.
ಹಾಗೂ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಗಳಾದ ಜಲಜೀವನ ಮಿಷನ್, ಗೃಹ ನಿರ್ಮಾಣ, ನೀರಾವರಿ ಯೋಜನೆಗಳು ಹಾಗೂ ಪಂಚಾಯತಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳಬೇಕು.
ಅದೇ ರೀತಿ ರಾಜ್ಯ, ಜಿಲ್ಲಾ ರಸ್ತೆಗಳ ನಿರ್ಮಾಣ ಪ್ರಗತಿ ಮೊಟಕುಗೊಳಿಸಬಾರದು ಹಾಗೂ ಕೇಂದ್ರ ರಾಜ್ಯ ಸಹಭಾಗಿತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸುವುದು, ರಾಜ್ಯದ ಹಿತದೃಷ್ಟಿಯಿಂದ ಅತ್ಯಂತ ಅವಶ್ಯವಿದೆ.
ನಗರ ಪ್ರದೇಶಗಳಲ್ಲಿ ನಗರೋತ್ಥಾನ ಸ್ಮಾರ್ಟ್ ಸಿಟಿ ಯೋಜನೆ ಮೆಟ್ರೊ, ಸಬರಬನ್ ಯೋಜನೆಗಳನ್ನು
ಮುಂದುವರೆಸುವುದು ಬೆಂಗಳೂರಿನ ಅಭಿವೃದ್ಧಿಗೆ ಅತಿ ಅವಶ್ಯವಿರುತ್ತದೆ. ಕಾಣಿಸಿದ ವಿಷಯಗಳ ಜೊತೆಗೆ ಇತರ ಇಲಾಖೆಗಳ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವುದು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕತೆ ಇದೆ.
ಇದು ರಾಜ್ಯ ಸರ್ಕಾರದ ಜವಾಬ್ದಾರಿ, ಈ ಬಗ್ಗೆ ಅನುದಾನವನ್ನು ಖಚಿತ ಪಡಿಸುವುದು ಹಾಗೂ ಸಮಗ್ರ ಮಾಹಿತಿಯನ್ನು ರಾಜ್ಯದ ಜನತೆಗೆ ಕೊಡಬೇಕಾಗಿ ನಾನು ಆಗ್ರಹ ಮಾಡುತ್ತೇನೆ.
ಈ ಸುದ್ದಿ ಓದಿದ್ದೀರಾ?: ಕೇಂದ್ರ ಸರ್ಕಾರ ಅಕ್ಕಿ ನೀಡದಿದ್ದರೆ ನಾವೇ ಖರೀದಿಸುತ್ತೇವೆ: ಸಚಿವ ಮುನಿಯಪ್ಪ
ತಾವು ಕೊಡುತ್ತಿರುವ ಗ್ಯಾರಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂ. ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಾರದು ಹಾಗೂ ರಾಜ್ಯದ ಜನತೆಯ ಮೇಲೆ ಅಪರೋಕ್ಷವಾಗಿ ಹೆಚ್ಚಿನ ಭಾರ ಬೀಳಬಾರದೆಂದು ಈ ಪತ್ರ ಬರೆಯುತ್ತಿದ್ದು ಸಿಎಂ ಸೂಕ್ತ ಕ್ರಮ ಜರುಗಿಸುವ ವಿಶ್ವಾಸ ಇಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತ ರಾಜ್ಯ ಸರ್ಕಾರ ಮಾಜಿ ಸಿಎಂ ಪತ್ರಕ್ಕೆ ಯಾವ ಪ್ರತಿಕ್ರಿಯೆ ನೀಡಲಿದೆ ಎನ್ನುವ ಕುತೂಹಲವೀಗ ಜನರನ್ನು ಕಾಡಲಾರಂಭಿಸಿದೆ.