“ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಮಹಿಳೆಯರು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿ” ಎಂದು ಮನವಿ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, “ನಿಮ್ಮ ಪತಿ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪ ಮಾಡಿದರೆ ಅವರಿಗೆ ಊಟ ಬಡಿಸಬೇಡಿ” ಎಂದಿದ್ದಾರೆ.
“ಪ್ರತಿ ಮನೆಯಲ್ಲಿಯೂ ಬಿಜೆಪಿಯ ಬದಲಾಗಿ ಎಎಪಿಗೆ ಬೆಂಬಲ ನೀಡುವಂತೆ ಪುರುಷರನ್ನು ಪ್ರೋತ್ಸಾಹಿಸುವುದು ಮಹಿಳೆಯರ ‘ಜವಾಬ್ದಾರಿ’ಯಾಗಿದೆ” ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದು, “ಹೆಚ್ಚಿನ ಪುರುಷರು ಈಗ ಬರೀ ಮೋದಿ ಜಪ ಮಾಡುತ್ತಿದ್ದಾರೆ. ಅದನ್ನು ಸರಿ ಮಾಡಲು ಮನೆಯಲ್ಲಿರುವ ಮಹಿಳೆಯರಿಗೆ ಮಾತ್ರ ಸಾಧ್ಯ. ನಿಮ್ಮ ಪತಿ ಮೋದಿಗೆ ಮತ ಹಾಕುತ್ತೇನೆ ಎಂದು ಹೇಳಿದರೆ ನೀವು ಪತಿಗೆ ಊಟ ಬಡಿಸಲ್ಲವೆಂದು ಹೇಳಿ,” ಎಂದು ಮಹಿಳೆಯರಿಗೆ ಕರೆ ನೀಡಿದರು.
“ಎಎಪಿಗೆ ಮತ ಹಾಕುವಂತೆ ಪತಿಯಿಂದ ನಿಮ್ಮ ಮೇಲೆ ಆಣೆ ಹಾಕಿಸಿಕೊಳ್ಳಿ. ಎಲ್ಲ ಗಂಡಂದಿರೂ ತಮ್ಮ ಪತ್ನಿಯ ಮಾತನ್ನು ಕೇಳಬೇಕಾಗುತ್ತದೆ. ಹೌದು ಅಲ್ಲವೇ? ಪತ್ನಿಯು ತನ್ನ ಮೇಲೆ ಆಣೆ ಹಾಕಿಸಿ ಏನೇ ಹೇಳಿದರೂ ಆತ ಅದನ್ನು ಪಾಲಿಸಲೇಬೇಕಾಗುತ್ತದೆ” ಎಂದು ಹೇಳಿದರು.
“ನಿಮ್ಮ ಪತಿಯ ಬಳಿ ಕೇಜ್ರಿವಾಲ್ ಉಚಿತ ವಿದ್ಯುತ್ ನೀಡುತ್ತಿದ್ದಾರೆ, ಬಸ್ ಟಿಕೆಟ್ಗಳನ್ನು ಉಚಿತ ಮಾಡಿದ್ದಾರೆ ಮತ್ತು ಈಗ ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ನೀಡುತ್ತಿದ್ದಾರೆ ಎಂದು ತಿಳಿಸಿ. ಬಿಜೆಪಿ ನಿಮಗೆ ಏನು ಮಾಡಿದೆ? ಬಿಜೆಪಿಗೆ ಯಾಕೆ ಮತ ಹಾಕುತ್ತೀರಾ? ಎಂದು ನಿಮ್ಮ ಪತಿಯನ್ನು ಪ್ರಶ್ನಿಸಿ” ಎಂದಿದ್ದಾರೆ.
ಮುಖ್ಯಮಂತ್ರಿ ಮಹಿಳಾ ಸಮ್ಮಾನ ಯೋಜನೆ ಅಡಿಯಲ್ಲಿ ಸದೆಹಲಿ ಸರ್ಕಾರವು ಬಜೆಟ್ನಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೂ ಒಂದು ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ. ಇದನ್ನು ಬಿಜೆಪಿ ಹಣ ವ್ಯರ್ಥ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿದ ದೆಹಲಿ ಸಿಎಂ, “ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ನೀಡುವ ಮೂಲಕ ಕೇಜ್ರಿವಾಲ್ ಹಣ ವ್ಯರ್ಥ ಮಾಡುತ್ತಿದ್ದಾರೆ ಎಂದು ಅವರು (ಬಿಜೆಪಿ) ಹೇಳುತ್ತದೆ. ನೀವು ಬಂಡವಾಳಶಾಹಿಗಳಿಗೆ ಸಾಲ ಮನ್ನಾವನ್ನು ಮಾಡಿದಾಗ ನಿಮ್ಮ ಹಣ ವ್ಯರ್ಥವಾಗಿಲ್ಲವೇ?” ಎಂದು ಪ್ರಶ್ನಿಸಿದರು.
“ಸಬಲೀಕರಣ ವಿಚಾರದಲ್ಲಿ ಈವರೆಗೆ ಬಿಜೆಪಿ ವಂಚನೆ ಮಾಡಿದೆ. ಈವರೆಗೂ ಅವರು ಮಹಿಳಾ ಸಬಲೀಕರಣ ಆಗಬೇಕು ಎನ್ನುತ್ತಿದ್ದರು, ಮಹಿಳೆಯರನ್ನು ಕೊಂಡಾಡುತ್ತಿದ್ದರು. ಆದರೆ ಈಗ ನಮ್ಮ ಸರ್ಕಾರ ಒಂದು ಸಾವಿರ ರೂಪಾಯಿ ಪ್ರತಿ ತಿಂಗಳು ನೀಡಿದರೆ ಅದನ್ನು ವ್ಯರ್ಥ ಎನ್ನುತ್ತಾರೆ. ಬರಿದಾದ ಪರ್ಸ್ನಿಂದಾಗಿ ಸಬಲೀಕರಣ ಆಗಲ್ಲ” ಎಂದು ಕುಟುಕಿದರು.