ಜನಪರ ಆಡಳಿತ ನಡೆಸುವಂತೆ ಸರ್ಕಾರಕ್ಕೆ ‘ಎದ್ದೇಳು ಕರ್ನಾಟಕ’ ತಾಕೀತು

Date:

Advertisements

“ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ಬಿಜೆಪಿಯ ದುರಾಡಳಿತವು ಜಾರಿಗೊಳಿಸಿರುವ ವಿನಾಶಕಾರಿ ಕ್ರಮಗಳನ್ನು ಸರಿಪಡಿಸಬೇಕು. ಜನತೆಯ ಆಗ್ರಹಗಳಿಗೆ ಸರ್ಕಾರ ಸ್ಪಂದಿಸಬೇಕು. ಜನರಿಗಾಗಿ, ಜನರ ಬದುಕಿಗಾಗಿ ಸರ್ಕಾರ ಕೆಲಸ ಮಾಡಬೇಕು” ಎಂದು ನೂತನ ಕಾಂಗ್ರೆಸ್‌ ಸರ್ಕಾರಕ್ಕೆ “ಎದ್ದೇಳು ಕರ್ನಾಟಕ ಅಭಿಯಾನ” ತಾಕೀತು ಮಾಡಿದೆ.

ಚುನಾವಣಾ ಸಮಯದಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಹಲವಾರು ಸಂಘಟನೆಗಳು ‘ಎದ್ದೇಳು ಕರ್ನಾಟಕ ಅಭಿಯಾನ’ದಡಿ ಶ್ರಮಿಸಿವೆ. ರಾಜ್ಯಾದ್ಯಂತ ಅಭಿಯಾನಕ್ಕಾಗಿ ದುಡಿದ ಕಾರ್ಯಕರ್ತರನ್ನು ಅಭಿನಂದಿಸಲು ಬೆಂಗಳೂರಿನಲ್ಲಿ ಶುಕ್ರವಾರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದಲ್ಲಿ ಅಭಿಯಾನವು ಸರ್ಕಾರದ ಹೊಣೆಗಾರಿಕೆಗಳ ಪತ್ರವನ್ನು ಮಂಡಿಸಿದ್ದು, ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಸಲ್ಲಿಸಿತು.

ಸಮಾವೇಶದಲ್ಲಿ ಅಭಿಯಾನವು ಸರ್ಕಾರದ ಮುಂದಿಟ್ಟ ಹಕ್ಕೊತ್ತಾಯಗಳನ್ನು ಮಂಡಿಸಿ ‘ಕರ್ನಾಟಕ ಜನಶಕ್ತಿ’ಯ ರಾಜ್ಯಾಧ್ಯಾಕ್ಷ ನೂರ್‌ ಶ್ರೀಧರ್ ಮಾತನಾಡಿದರು. “ಚುನಾವಣೆಯಲ್ಲಿನ ಕಾಂಗ್ರೆಸ್‌ ಗೆಲುವು ಕಾಂಗ್ರೆಸ್‌ನ ಗೆಲುವು ಮಾತ್ರವಲ್ಲ. ಅದು, ಜನಸಾಮಾನ್ಯರ ಗೆಲುವು. ಇದನ್ನು ಸರ್ಕಾರದ ಚುಕ್ಕಾಣಿ ಹಿಡಿದಿರುವವರು ಒಪ್ಪಿಕೊಳ್ಳಬೇಕು. ಬಿಜೆಪಿಯ ದುರಾಡಳಿತದ ವಿರುದ್ಧದ ಜನರ ಒಡಲೊಳಗಿನ ಸಿಟ್ಟು ಕಾಂಗ್ರೆಸ್‌ಗೆ ಅಧಿಕಾರ ನೀಡಿದೆ. ಜನರನ್ನು ಜಾಗೃತಗೊಳಿಸಲು, ಕೋಮುವಾದಿಗಳ ವಿರುದ್ಧ ಮತ ಚಲಾಯಿಸುವಂತೆ ಪ್ರೇರೇಪಿಸಲು ಜನಪರ ಸಂಘಟನೆಗಳು, ತಳಸಮುದಾಯದ ಸಂಸ್ಥೆಗಳು, ಸಾಹಿತಿ-ಚಿಂತಕರು ಅವಿರತವಾಗಿ ದುಡಿದಿದ್ದಾರೆ” ಎಂದರು.

Advertisements

“ಎಲ್ಲ ಸಂಘಟನೆಗಳು ಒಗ್ಗೂಡಿ ನಡೆಸಿದ ವಿಶೇಷ ಪ್ರಯತ್ನ ‘ಎದ್ದೇಳು ಕರ್ನಾಟಕ’ ಅಭಿಯಾನವಾಗಿದೆ. ಇದು, ಜನಾಭಿಪ್ರಾಯವನ್ನು ರೂಪಿಸುವ ಹಾಗೂ ಜಾತ್ಯತೀತ ಮತಗಳನ್ನು ಸಂಘಟಿತಗೊಳಿಸುವ– ಎರಡೂ ರೀತಿಯ ಕರ್ತವ್ಯಗಳನ್ನು ನಿಭಾಯಿಸಿದೆ” ಎಂದರು.

“ಸಂವಿಧಾನ ವಿರೋಧಿ, ಸರ್ವಾಧಿಕಾರಿ, ಸಮಾಜಘಾತುಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲೇಬೇಕೆಂಬ ತುಡಿತವೇ ಈ ಅಭಿಯಾನದ ಪ್ರೇರಕ ಶಕ್ತಿಯಾಗಿತ್ತು. ಇದರ ಜೊತೆಗೆ, ಜನರಲ್ಲಿ ಮಡುಗಟ್ಟಿದ್ದ ಸಿಟ್ಟು, ಕಾಂಗ್ರೆಸ್‌ನ ಗ್ಯಾರಂಟಿಗಳು, ಸಾಮಾಜಿಕ ಶಕ್ತಿಗಳು ನಿರ್ವಹಿಸಿದ ಸಕ್ರಿಯ ಪಾತ್ರ ರಾಜ್ಯದಲ್ಲಿ ಬದಲಾವಣೆ ಬಿರುಗಾಳಿಯನ್ನು ಬೀಸುವಂತೆ ಮಾಡಿತು. ಅದರ ಫಲಿತಾಂಶ ನಮ್ಮ ಮುಂದಿದೆ” ಎಂದರು.

“ಇಂತಹ ಬದಲಾವಣೆಯ ಸಮಯದಲ್ಲಿ ಕಾಂಗ್ರೆಸ್‌ ಸರ್ಕಾರ ಹೆಚ್ಚಿನ ಜವಬ್ದಾರಿಗಳನ್ನು ನಿಭಾಯಿಸಬೇಕು. ಮುಖ್ಯವಾಗಿ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಬೇಕಿದೆ. ಜನರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ನಿಜವಾದ ಪರಿಹಾರ ಇರುವುದು ಜನರ ಆದಾಯ ಹೆಚ್ಚಳದಲ್ಲಿ, ಉದ್ಯೋಗ ಖಾತ್ರಿಯಲ್ಲಿ, ಸೌಹಾರ್ದ ಪರಿಸರ ರೂಪಿಸುವುದರಲ್ಲಿ. ಅದಕ್ಕಾಗಿ ಸರ್ಕಾರ ಒತ್ತು ನೀಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ?: ಕಾಂಗ್ರೆಸ್‌-ಬಿಜೆಪಿ ನಡುವಿನ ಹೋರಾಟವಲ್ಲ, ಕೋಮುವಾದ ವಿರುದ್ಧದ ಜನರ ಹೋರಾಟ: ಸಿಎಂ ಸಿದ್ದರಾಮಯ್ಯ

“ಬಿಜೆಪಿಯ ದುರಾಡಳಿತದಿಂದ ಜಾರಿಯಾಗಿರುವ ವಿನಾಶಕಾರಿ ಕ್ರಮಗಳನ್ನು ಸರಿಪಡಿಸಬೇಕು. ಬಂಡವಾಳಶಾಹಿಗಳ ಪರವಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ, ಎನ್‌ಇಪಿ, ಮತಾಂತರ ನಿಷೇಧ ಕಾಯ್ದೆ, ವಿದ್ಯುತ್‌ ಖಾಸಗೀಕರಣ ಕಾಯ್ದೆ, ಪಠ್ಯ ಮನುವಾದೀಕರಣ, ಅಲ್ಪಸಂಖ್ಯಾತರಿಗೆ ಮೀಸಲಾತಿ ರದ್ದತಿ ನೀತಿಗಳನ್ನು ರದ್ದುಗೊಳಿಸಬೇಕು. ಜನಪರ ಕಾಯ್ದೆಗಳನ್ನು ರೂಪಿಸಬೇಕು. ಎಲ್ಲ ವರ್ಗ, ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕು” ಎಂದು ಆಗ್ರಹಿಸಿದರು.

“ಸರ್ಕಾರವು ಜನರು ಏನು ಕೇಳುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಕೆಲಸ ಮಾಡಬೇಕು. ನಾನಾ ರೀತಿಯ ಜನವರ್ಗ ನಾನಾ ರೀತಿಯ ಹಕ್ಕೊತ್ತಾಯಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿವೆ. ಅವರ ಹಕ್ಕೊತ್ತಾಯಗಳೇನೆಂದು ಆಲಿಸಬೇಕು. ಪರಿಹಾರ ಹುಡುಕಬೇಕು. ರೈತರ ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು. ಬಗರ್ ಹುಕುಂ, ರೈತರಿಗೆ ಹಕ್ಕುಪತ್ರ, ವಸತಿಹೀನರಿಗೆ ನಿವೇಶನ, ನರೇಗಾ ಯೋಜನೆಯ ಬಲವರ್ಧನೆ, ಕನಿಷ್ಠ ಕೂಲಿಯ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ನ್ಯಾಯ, ಮಹಿಳೆಯರ ರಕ್ಷಣೆ ಮತ್ತು ಸೂಕ್ತ ಸ್ಥಾನಮಾನ ಸೇರಿದಂತೆ ಹಲವಾರು ಮೂಲಭೂತ ಅಗತ್ಯಗಳನ್ನು ಸರ್ಕಾರ ಪೂರೈಸಬೇಕು. ಅದಕ್ಕಾಗಿ ಕೆಲಸ ಮಾಡಬೇಕು” ಎಂದು ಅಭಿಯಾನದ ಪರವಾಗಿ ಹಕ್ಕೊತ್ತಾಯಗಳನ್ನು ಮಂಡಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X