ಆತ್ಮೀಯ ಈ ದಿನ.ಕಾಮ್ ಓದುಗರೇ, ಒಂದು ‘ಅಸಲೀ’ ಹಗರಣವನ್ನು ಈ ದಿನ.ಕಾಮ್ ಸೆಪ್ಟೆಂಬರ್ 17ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಬಿಚ್ಚಿಡಲಿದೆ.
ಇಬ್ಬರು ಮಾಜಿ ಮುಖ್ಯಮಂತ್ರಿಗಳು (ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ) ಬಹಿರಂಗವಾಗಿ ಪರಸ್ಪರ ಬೈದಾಡಿಕೊಳ್ಳುತ್ತಿದ್ದ ವೇಳೆಯಲ್ಲೇ ಜೊತೆ ಸೇರಿ ನಡೆಸಿದ ಹಸೀ ಹಸೀ ಅಕ್ರಮ ಅದು. ನಾವು ಮುಂದಿಡುತ್ತಿರುವ ಪ್ರತಿಯೊಂದು ಮಾತಿಗೂ ದಾಖಲೆಯಿದೆ.
ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ದಾಖಲಾಗಿ 9 ವರ್ಷ ಆಗಿದೆ. ಹೈಕೋರ್ಟ್ ಯಡಿಯೂರಪ್ಪನವರಿಗೆ ಛೀಮಾರಿ ಹಾಕಿ, ತನಿಖೆಗೆ ಇದ್ದ ಅಡ್ಡಿಗಳನ್ನು ನಿವಾರಿಸಿ 4 ವರ್ಷಗಳಾಗಿವೆ. ಇಲ್ಲಿಯವರೆಗೆ ಯಡಿಯೂರಪ್ಪ, ಕುಮಾರಸ್ವಾಮಿಯವರ ವಿಚಾರಣೆಯನ್ನೂ ನಡೆಸದ ಲೋಕಾಯುಕ್ತ ಯಾರ ಜೊತೆಗೆ ಶಾಮೀಲಾಗಿದೆ? ರಾಜ್ಯ ಸರ್ಕಾರದ ಪಾತ್ರ ಏನಿದೆ? ಎಂಬುದರ ಬಗ್ಗೆ ಎಳೆಎಳೆಯಾಗಿ ಬಿಚ್ಚಿಡಲಿದೆ.
ದೂರು ದಾಖಲಾಗಿ 9 ವರ್ಷ, ಆದರೂ ಇಲ್ಲಿಯವರೆಗೆ ಈ ಇಬ್ಬರು ಮಾಜಿ ಸಿಎಂಗಳಿಂದ ಕನಿಷ್ಠ ಹೇಳಿಕೆ ಪಡೆದುಕೊಂಡಿಲ್ಲ. ಜನರ ಮುಂದೆ ಈ ಭ್ರಷ್ಟಾಚಾರದ ವಿವರಗಳು ಬಂದಿಲ್ಲ. ಈ ಬಗ್ಗೆ ಎಲ್ಲ ದಾಖಲೆ ಸಹಿತ ಈ ದಿನ.ಕಾಮ್ ತನಿಖಾ ವರದಿಯು ನಾಳೆ ಬೆಳಗ್ಗೆ 8 ಗಂಟೆಗೆ ಬಿಚ್ಚಿಡಲಿದೆ.
ನಿಮ್ಮಲ್ಲೊಂದು ಮನವಿ
ಸತ್ಯದ ಪರವಾಗಿರುವ ಸಂಸ್ಥೆಗಳನ್ನು ಹೊರತುಪಡಿಸಿ ಇತರ ಮಾಧ್ಯಮಗಳು ನಮ್ಮ ತನಿಖಾ ವರದಿಯನ್ನು ಕೈಗೆತ್ತಿಕೊಳ್ಳುವುದು ಅನುಮಾನ. ಆದ್ದರಿಂದ, ನೀವೇ ನಾಳೆ ಬೆಳಿಗ್ಗೆ 8 ಗಂಟೆಗೆ ನಿಮಗೆ ಲಿಂಕ್ ಸಿಕ್ಕ ನಂತರ ಎಷ್ಟು ಸಾಧ್ಯವೋ ಅಷ್ಟು ವಿಸ್ತೃತವಾಗಿ ಷೇರ್ ಮಾಡಬೇಕು ಮತ್ತು ಈ ಬಗ್ಗೆ ನೀವೇ ಸಾಮಾಜಿಕ ಜಾಲತಾಣಗಳಲ್ಲಿ ನಾಲ್ಕು ಸಾಲು ಬರೆಯಬೇಕೆಂದೂ ಕೋರುತ್ತೇವೆ.
ಆ ಮೂಲಕ ಮಾತ್ರವೇ ನಾವು ಸತ್ಯವನ್ನು ವಿಸ್ತಾರವಾಗಿ ಹರಡಲು ಸಾಧ್ಯ. ಇದು ʼಅಸಲಿ ಹಗರಣʼ – ಹಾಗಾಗಿ ಹೆಚ್ಚಿನ ಜನರಿಗೆ ತಲುಪಿಸಬೇಕು. ಧನ್ಯವಾದಗಳು.
ಈ ದಿನ.ಕಾಮ್ ತಂಡ



