ರಾಜಸ್ಥಾನದಲ್ಲಿ ಈ ವರ್ಷದ ಕಡೆಯ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಒಂದು ವೇಳೆ, ಅಧಿಕಾರ ಬದಲಾವಣೆಯಾಗಿ ಬಿಜೆಪಿ ಸರ್ಕಾರ ರಚನೆಯಾದರೆ ಮುಖ್ಯಮಂತ್ರಿ ಮುಖ ಯಾರು? ಎಂಬ ಪ್ರಶ್ನೆ ಮುನ್ನೆಲೆಯಲ್ಲಿದೆ. ಆ ರಾಜ್ಯದಲ್ಲಿ ಚುನಾವಣೆಗೂ ಮುನ್ನವೇ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಘೋಷಿಸುತ್ತಿತ್ತು. ಆದರೆ, ಈ ವರ್ಷ ಬಿಜೆಪಿ ಗೆದ್ದರೆ, ಅದರ ಮುಂದಾಳು ಯಾರು ಎಂಬುದನ್ನು ಇನ್ನೂ ಘೋಷಿಸಿಲ್ಲ. ಘೋಷಿಸುವ ಸಾಧ್ಯತೆಯೂ ಇಲ್ಲ. ಚುನಾವಣೆ ಗೆಲ್ಲಲು ರಾಜಸ್ಥಾನದಲ್ಲಿ ಪಕ್ಷವು ಪ್ರಧಾನಿ ಮೋದಿ ಮುಖವನ್ನೇ ನೆಚ್ಚಿಕೊಂಡಿದೆ.
ಆ ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿಯ ಪ್ರಮುಖ ಮುಖವಾಗಿದ್ದ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ವಸುಂಧರಾ ರಾಜೇ ಅವರನ್ನು ಕಣಕ್ಕಿಳಿಸಿಲ್ಲ. ಅವರನ್ನು ಪಕ್ಷವು ಕಡೆಗಣಿಸಿದೆ. ಕರ್ನಾಟಕದಲ್ಲಿಯೂ ಪಕ್ಷದಲ್ಲಿಯೇ ಬೇರು ಬಿಟ್ಟಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನೂ ಇದೇ ರೀತಿ ಪಕ್ಷ ಕಡೆಗಣಿತ್ತು. ಈಗ ರಾಜೇ ಅವರನ್ನೂ ಕಡೆಗಣಿಸುತ್ತಿದೆ. ಅವರ ವಿಚಾರದಲ್ಲಿ ಹೈಕಮಾಂಡ್ ನಿರ್ಲಕ್ಷ್ಯ ಧೋರಣೆ ಸೋಮವಾರ ಮತ್ತಷ್ಟು ಬಹಿರಂಗವಾಗಿದೆ.
ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಪ್ರಧಾನಿ ಮೋದಿಯವರ ಬಹಿರಂಗ ಸಭೆ ನಡೆಸಿದ್ದಾರೆ. ಆ ಕಾರ್ಯಕ್ರಮದಲ್ಲಿ ರಾಜೇ ಮಾತನಾಡಲಿಲ್ಲ. ಇದು ರಾಜಕೀಯ ವಲಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ-ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಹಲವರು ಬಿಜೆಪಿಯ ಬೂಟಾಟಿಕೆಯ ರಾಜಕಾರಣ ಬಹಿರಂಗವಾಗಿದೆ ಎಂದು ಕಿಡಿಕಾರಿದ್ದಾರೆ.
ಈ ಬಾರಿ ರಾಜೇ ಬದಲಿಗೆ ಬಿಜೆಪಿ ಬೇರೆಯವರಿಗೆ ಸಿಎಂ ಸ್ಥಾನ ನೀಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಆ ಹುದ್ದೆ ಯಾರಿಗೆ ದೊರೆಯಬಹುದು ಎಂಬುದರಲ್ಲಿ ಇನ್ನೂ ಸ್ಪಷ್ಟತೆ ಗೋಚರಿಸುತ್ತಿಲ್ಲ. ಆದರೂ, ಜೈಪುರದಲ್ಲಿ ನಡೆದ ಪ್ರಧಾನಿ ಬಹಿರಂಗ ಸಭೆಯಲ್ಲಿ ಇಂತಹ ಕೆಲವು ದೃಶ್ಯಗಳು ಹೊರಬಿದ್ದಿವೆ.
ವಸುಂಧರಾ ರಾಜೇ ಬದಲಿಗೆ ಯಾರು?
ಬಿಜೆಪಿಯಲ್ಲಿ ನಡೆಯುತ್ತಿರುವ ಈ ಜಟಾಪಟಿಯಿಂದ ಯಾರಿಗೆ ಲಾಭವಾಗಲಿದೆ ಎಂಬ ಚರ್ಚೆ ರಾಜಸ್ಥಾನದ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಪಕ್ಷದಿಂದ ಯಾವುದೇ ಸ್ಪಷ್ಟ ಸಂದೇಶಗಳನ್ನು ನೀಡದಿದ್ದರೂ, ಮೋದಿ ಕಾರ್ಯಕ್ರಮದಲ್ಲಿನ ಸನ್ನಿವೇಶಗಳು ಮುಂದೆ ರಾಜೇ ಅವರ ಸ್ಥಾನವನ್ನು ಸಂಸದೆ ದಿಯಾ ಕುಮಾರಿ ಪಡೆಯಬಹುದು ಎಂಬ ಮಾತುಗಳು ಕೇಳಿಬಂದಿವೆ. ಜೈಪುರ ಕಾರ್ಯಕ್ರಮದ ಜವಬ್ದಾರಿಯನ್ನು ದಿಯಾ ಕುಮಾರಿ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಅವರೇ ನಡೆಸಿಕೊಟ್ಟರು. ಹೀಗಾಗಿ, ರಾಜೇ ಅವರಿಗೆ ದಿಯಾ ಪರ್ಯಾಯವಾಗಬಹುದು ಎನ್ನಲಾಗುತ್ತಿದೆ.
ದಿಯಾ ಮಾತ್ರವಲ್ಲದೆ, ಅಲ್ಕಾ ಗುರ್ಜರ್, ಜ್ಯೋತಿ ಮಿರ್ಧಾ ಹಾಗೂ ಇನ್ನೂ ಹಲವರು ರಾಜೇ ಅವರ ಸ್ಥಾನ ತುಂಬುವ ರೇಸ್ನಲ್ಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಮೋದಿ ಕಾರ್ಯಕ್ರಮದಲ್ಲಿ ಸಂಸದೆ ದಿಯಾ ಕುಮಾರಿ, ರಂಜಿತಾ ಕೋಲಿ, ಜಸ್ಕೌರ್ ಮೀನಾ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಕಾ ಗುರ್ಜರ್ ಹಾಗೂ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿ ಮಿರ್ಧಾ ವೇದಿಕೆಯಲ್ಲಿದ್ದರು.
ಈ ಎಲ್ಲ ಮಹಿಳಾ ನಾಯಕರ ಪೈಕಿ, ದಿಯಾ ಕುಮಾರಿ ಮತ್ತು ಅಲ್ಕಾ ಗುರ್ಜರ್ ಪ್ರಮುಖ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈಗ ವಸುಂಧರಾ ರಾಜೇಗೆ ಯಾರು ಪರ್ಯಾಯವಾಗಬಲ್ಲರು? ಎಂಬುದು ಪ್ರಮುಖ ಪ್ರಶ್ನೆಯಾಗಿ ರೂಪುಗೊಂಡಿದೆ. ಮುಂಚೂಣಿಯಲ್ಲಿರುವ ಮುಖಕ್ಕೆ ಮಾತ್ರ ಅವಕಾಶ ನೀಡಬೇಕೆಂದೇನೂ ಇಲ್ಲ. ಏಕೆಂದರೆ, ಬಿಜೆಪಿ ರಾಷ್ಟ್ರೀಯ ನಾಯಕತ್ವವು ಆಗಾಗ್ಗೆ ಆಶ್ಚರ್ಯಕರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅದನ್ನು ಪದೇ ಪದೇ ಸಾಬೀತು ಮಾಡಿದೆ. ಹೀಗಾಗಿ, ಮುನ್ನೆಲೆಯಲ್ಲಿದ್ದರೂ, ಹಿನ್ನೆಲೆಯಲ್ಲಿದ್ದರೂ ಯಾರು ಬೇಕಾದರೂ ಯಾವ ಸ್ಥಾನವನ್ನಾದರೂ ತುಂಬಬಹುದು. ಸದ್ಯ, ರಾಜಸ್ಥಾನದಲ್ಲಿ ಬಿಜೆಪಿ ಗೆದ್ದರೆ, ರಾಜ್ಯದ ನಾಯಕತ್ವ ಮಹಿಳೆಯರ ಪಾಲಿಗೆ ಬರಬಹುದು ಎಂದು ಹೇಳಲಾಗುತ್ತಿದೆ.
ಎಲ್ಲಿದ್ದಾರೆ ರಾಜೇ?
ಬಿಜೆಪಿಯ ಪ್ರಮುಖ ನಾಯಕರು ರಾಜಸ್ಥಾನದಲ್ಲಿ ಚುನಾವಣೆ ಗೆಲ್ಲಲು ಶತಪ್ರಯತ್ನ ನಡೆಸುತ್ತಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಯು ಕೇಂದ್ರ ಸರ್ಕಾರದ ಸಾಧನೆ ಮತ್ತು ಪ್ರಧಾನಿ ಮೋದಿ ಮುಖದ ಮೇಲೆ ಅವಲಂಬಿತವಾಗಿದೆ. ಹಾಗಾದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಈ ಬಗ್ಗೆ ಇನ್ನೂ ಗೊಂದಲದ ಪರಿಸ್ಥಿತಿ ಇದೆ. ಸೋಮವಾರ ಜೈಪುರದಲ್ಲಿ ನಡೆದ ಸಭೆಯಲ್ಲಿ ಕಂಡು ಬಂದ ದೃಶ್ಯಗಳು, ಪಕ್ಷ ವಸುಂಧರಾ ರಾಜೇ ಅವರನ್ನು ಬದಿಗೊತ್ತಿದ್ದೇಕೆ ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಹುಟ್ಟುಹಾಕುತ್ತಿದೆ. ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಜೈಪುರದ ದಾಡಿಯಾ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಹಲವು ನಾಯಕರು ಭಾಗಿಯಾಗಿದ್ದರು. ಈ ವೇಳೆ ವಸುಂಧರಾ ರಾಜೇ ಅವರ ಗೈರು ಹಾಜರಿ ರಾಜೇ ಬೆಂಬಲಿಗರಿಗೆ ನೋವುಂಟು ಮಾಡಿತ್ತು.
ಈ ವರದಿ ಓದಿದ್ದೀರಾ?: ಮಹಿಳಾ ಮೀಸಲಾತಿ | 15 ವರ್ಷಗಳಿಂದ ಮಂಡನೆಯಾಗದ ಮಸೂದೆ; ವಿರೋಧಿಗಳು ಯಾರು?
ಒಂದೆಡೆ ವಸುಂಧರಾ ರಾಜೇ ಅವರನ್ನು ಪಕ್ಷದಿಂದ ಕಡೆಗಣಿಸಲಾಗುತ್ತಿದ್ದರೆ, ಮತ್ತೊಂದೆಡೆ ಪಕ್ಷಾತೀತವಾಗಿ ದೇವದರ್ಶನ ಯಾತ್ರೆಗಳ ಮೂಲಕ ವೈಯಕ್ತಿಕವಾಗಿ ರಾಜೇ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ರಾಜೇ ಅವರು ಕೇಂದ್ರ ನಾಯಕರೊಂದಿಗೆ ಪರಿವರ್ತನ ಯಾತ್ರೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ರಾಜ್ಯದ 200 ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋದ ಪರಿವರ್ತನ ಯಾತ್ರೆಗಳಲ್ಲಿ ರಾಜೇ ಭಾಗವಹಿಸಲಿಲ್ಲ. ಆದರೆ, ಅವರು ತಮ್ಮದೇ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಏಕಾಂಗಿಯಾಗಿ ಜನರನ್ನು ತಲುಪುತ್ತಿದ್ದಾರೆ. ಇದು ಸೆಪ್ಟೆಂಬರ್ 23 ರಂದು ರಾಜೇ ಅವರ ನಿವಾಸದ ಬಳಿ ನೆರೆದಿದ್ದ ಸಾವಿರಾರು ಮಹಿಳೆಯರು ರಾಜೇ ಅವರಿಗೆ ರಕ್ಷಣಾ ದಾರವನ್ನು ಕಟ್ಟಿದ್ದಾರೆ. ಇದು ರಾಜೇ ಅವರ ವರ್ಚಸ್ಸು ರಾಜ್ಯದ ಮೇಲಿದೆ ಎಂಬುದನ್ನು ತೋರಿಸುತ್ತಿದೆ.