- ದೇಶ, ನಾಡನ್ನು ಮುನ್ನಡೆಸಲು ವೈಜ್ಞಾನಿಕ ಮನೋಭಾವ ಅಗತ್ಯ
- ವಿಶ್ವವಿದ್ಯಾಲಯಗಳ ಉಪಕುಲಪತಿಗಳೊಂದಿಗೆ ಮುಖ್ಯಮಂತ್ರಿ ಸಭೆ
ವೈಜ್ಞಾನಿಕತೆ ಮತ್ತು ವೈಚಾರಿಕತೆ ಇಲ್ಲದೆ ತಲೆ ತುಂಬ ಕೇವಲ ಮೌಢ್ಯವನ್ನೇ ತುಂಬಿಕೊಂಡ ಪದವೀಧರರು ವಿಶ್ವ ವಿದ್ಯಾಲಯಗಳಿಂದ ಕಲಿತು ಬಂದರೆ ದೇಶಕ್ಕೆ, ನಾಡಿಗೆ ಹಾಗೂ ಈ ಸಮಾಜಕ್ಕೆ ಏನು ಪ್ರಯೋಜನ? ಆದ್ದರಿಂದ ವೈಜ್ಞಾನಿಕ ಮನೋಭಾವದ ಪದವೀಧರರನ್ನು ಸಜ್ಜುಗೊಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಲಪತಿಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರ್ಕಾರದ ವ್ಯಾಪ್ತಿಯ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಮತ್ತು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
“ದೇಶವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ, ಆರ್ಥಿಕವಾಗಿ ಮತ್ತು ನಾಗರಿಕವಾಗಿ ಮುನ್ನಡೆಸುವ ಪದವೀಧರರನ್ನು ವಿಶ್ವವಿದ್ಯಾಲಯಗಳು ಸಜ್ಜುಗೊಳಿಸಬೇಕು. ಅದನ್ನು ಬಿಟ್ಟು ಕೇವಲ ಮೌಢ್ಯವನ್ನು ತುಂಬಿಕೊಂಡು ಹೊರಗೆ ಬಂದರೆ ಅದರಿಂದ ದೇಶಕ್ಕೂ, ನಾಡಿಗೂ ಪ್ರಯೋಜನವಿಲ್ಲ. ಪದವೀಧರರ ಭವಿಷ್ಯಕ್ಕೂ ಉಪಯೋಗವಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಲ್ಲಿ ನೆಮ್ಮದಿಯಿಂದ ಕೆಲಸ ಮಾಡಲು ಕೆಲವರು ಬಿಟ್ಟಿಲ್ಲ: ಎಸ್ ಟಿ ಸೋಮಶೇಖರ್
“ಜಿಇಆರ್ ಪ್ರಮಾಣ ಸರ್ಕಾರಿ ಕಾಲೇಜುಗಳಲ್ಲಿ ಎಷ್ಟು? ಖಾಸಗಿ ಕಾಲೇಜುಗಳಲ್ಲಿ ಎಷ್ಟು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಅಲ್ಪಸಂಖ್ಯಾತರದ್ದು ಎಷ್ಟು ಎಂದು ಮಾಹಿತಿ ಇಟ್ಟುಕೊಂಡಿರಬೇಕು. ಯುಯುಸಿಎಂಎಸ್ ನಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ. ಜಿಇಆರ್ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಾದ ಚಾಮರಾಜನಗರ, ಯಾದಗಿರಿ, ಹಾಸನ, ಕೊಪ್ಪಳ, ಕೊಡಗು ಮೊದಲಾದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಮತ್ತು ಸಂಶೋಧನೆಗಳನ್ನು ಹೆಚ್ಚಿಸಬೇಕು” ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಇದೇ ವೇಳೆ ರಾಜ್ಯದ ಅತ್ಯಂತ ಹಳೆಯ ಮತ್ತು ಮೊದಲ ವಿವಿ ಆಗಿರುವ ಮೈಸೂರು ವಿವಿಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.