- 2019 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 18 ಸೀಟು ಗೆದ್ದಿತ್ತು
- 2021ರ ವಿಧಾನಸಭಾ ಚುನಾವಣೆಯಲ್ಲಿ 213 ಸ್ಥಾನ ಗೆದ್ದು ಭರ್ಜರಿ ಬಹುಮತ ಗಳಿಸಿದ್ದ ಟಿಎಂಸಿ
ಮುಂದಿನ 2024ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ 35 ಸೀಟಿಗೂ ಹೆಚ್ಚು ಗೆಲ್ಲಿಸಿದರೆ 2025ರಲ್ಲಿ ಟಿಎಂಸಿ ಸರ್ಕಾರವನ್ನು ಪತನಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಬಿರ್ಭೂಮ್ ಜಿಲ್ಲೆಯ ಸೂರಿ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “2024ರ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕನಿಷ್ಠ 35 ಸ್ಥಾನಗಳನ್ನು ಗೆದ್ದರೆ, ರಾಜ್ಯದಲ್ಲಿ ರಾಮನವಮಿ ಮೆರವಣಿಗೆ ಮೇಲೆ ದಾಳಿ ಮಾಡುವ ಧೈರ್ಯ ಯಾರಿಗೂ ಇರುವುದಿಲ್ಲ. ಆದಕಾರಣ ನರೇಂದ್ರ ಮೋದಿಯವರಿಗೆ ನಿಮ್ಮ ರಾಜ್ಯದಿಂದ 35 ಕ್ಷೇತ್ರಗಳನ್ನು ನೀಡಿ” ಎಂದು ಕರೆ ನೀಡಿದರು.
ಕೇಂದ್ರ ಗೃಹ ಸಚಿವರು ನೇಮಕಾತಿ ಹಗರಣ ಮತ್ತು ತೃಣಮೂಲ ನಾಯಕರ ಬೆಂಬಲಿಗರ ಮನೆಗಳಿಂದ ವಶಪಡಿಸಿಕೊಂಡ ಕೋಟಿಗಟ್ಟಲೆ ನಗದನ್ನು ಉಲ್ಲೇಖಿಸಿ ಮಾತನಾಡಿ, “ಮಮತಾ ಜಿ ಮತ್ತು ಅವರ ಸೋದರಳಿಯರು ಎಷ್ಟೇ ಪ್ರಯತ್ನಿಸಿದರೂ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯುತ್ತದೆ. ಗೋವು ಕಳ್ಳಸಾಗಣೆಯಲ್ಲಿ ಕೇಂದ್ರ ಸರ್ಕಾರದಿಂದ ಬಂಧಿಸಲ್ಪಟ್ಟವರು ಇನ್ನೂ ತೃಣಮೂಲ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ” ಎಂದು ಬಿರ್ಭುಮ್ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರ ವಿರುದ್ಧ ನೇರ ಆರೋಪ ಮಾಡಿದರು.
ಅಮಿತ್ ಶಾ ತಮ್ಮ 20 ನಿಮಿಷದ ಭಾಷಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ ಮತ್ತು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಹೆಸರನ್ನು ಹಲವು ಬಾರಿ ಪ್ರಸ್ತಾಪಿಸಿ ಟೀಕಿಸಿದರು.
“ಮಮತಾ ಬ್ಯಾನರ್ಜಿ ಅವರ ಏಕೈಕ ಉದ್ದೇಶವೆಂದರೆ ತಮ್ಮ ಸೋದರಳಿಯನನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವುದಾಗಿದೆ. ಮುಖ್ಯಮಂತ್ರಿ ತನ್ನ ಸೋದರಳಿಯ ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಿರಬಹುದು. ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿಜೆಪಿಯವರೇ ಆಗುತ್ತಾರೆ ಎಂದು ಜನತೆಗೆ ಭರವಸೆ ನೀಡಲು ಬಯಸುತ್ತೇನೆ” ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಒಳನುಸುಳುವಿಕೆ, ಗೋವು ಕಳ್ಳಸಾಗಣೆ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸಲು ಬಿಜೆಪಿಗೆ ಮತ ನೀಡುವಂತೆ ಬಿಜೆಪಿ ನಾಯಕ ಜನರನ್ನು ಒತ್ತಾಯಿಸಿದರು. ಬಿಜೆಪಿ ಅಧಿಕಾರದಲ್ಲಿರುವ ನೆರೆಯ ರಾಜ್ಯವಾದ ಅಸ್ಸಾಂನ ಉದಾಹರಣೆಯನ್ನು ಉಲ್ಲೇಖಿಸಿದ ಅಮಿತ್ ಶಾ, ರಾಜ್ಯದಲ್ಲಿ ಒಳನುಸುಳುವಿಕೆ ಮತ್ತು ಗೋ ಕಳ್ಳಸಾಗಾಣಿಕೆಯನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ 2021ರಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಅಧಿಕಾರರೂಢ ತೃಣಮೂಲ ಕಾಂಗ್ರೆಸ್ 294 ವಿಧಾನಸಭಾ ಕ್ಷೇತ್ರಗಳ ಪೈಕಿ 213ರಲ್ಲಿ ಗೆಲುವು ಸಾಧಿಸಿ ಬಿಜೆಪಿಯನ್ನು ಮಣಿಸಿದೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯು 2026 ಕ್ಕೆ ನಿಗದಿಯಾಗಿದೆ. ಆದರೆ ಅಮಿತ್ ಶಾ 2025ರಲ್ಲಿ ತೃಣಮೂಲ ಸರ್ಕಾರವನ್ನು ಪತನಗೊಳಿಸುತ್ತೇವೆ ಎಂದು ಹೇಳಿರುವ ಮಾತುಗಳು ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದಾಗಿದೆ ಎಂದು ಟಿಎಂಸಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಗೆ ಹೋಗಿ ನಿಮ್ಮ ಕೆಲಸ ಮಾಡಿ; ಟಿಎಂಸಿ
ಅಮಿತ್ ಶಾ ಭಾಷಣಕ್ಕೆ ತಿರುಗೇಟು ನೀಡಿರುವ ಟಿಎಂಸಿ ವಕ್ತಾರ ಕುನಾಲ್ ಘೋಷ್, “ಅಮಿತ್ ಶಾ ಅವರೆ, ಪಶ್ಚಿಮ ಬಂಗಾಳ ಜನತೆ ರಾಜ್ಯಕ್ಕೆ ಆಗಾಗ ಬರುವ ಋತುಮಾನದ ಹಕ್ಕಿಯನ್ನು ನೋಡಲು ಯಾರೂ ಬಯಸುದಿಲ್ಲ. ದೆಹಲಿಗೆ ಹಿಂತಿರುಗಿ ಮತ್ತು ನಿಮ್ಮ ಕೆಲಸವನ್ನು ಮಾಡಿ. ನಿಸ್ಸಂಶಯವಾಗಿ, ಬಂಗಾಳದಲ್ಲಿ ಯಾರೂ ನಿಮ್ಮ ಕಸದಬುಟ್ಟಿಗೆ ಸೇರುವ ದ್ವೇಷಪೂರಿತ ಮಾತುಗಳನ್ನು, ಸುಳ್ಳುಗಳನ್ನು ಕೇಳಲು ಆಸಕ್ತಿ ಹೊಂದಿಲ್ಲ. ಮುಂದಿನ ಚುನಾವಣೆಯಲ್ಲಿಯೂ ಜನತೆ ನಿಮಗೆ ಸರಿಯಾದ ಪಾಠ ಕಲಿಸುತ್ತಾರೆ” ಎಂದು ತಿರುಗೇಟು ನೀಡಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿನ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಟಿಎಂಸಿ 22 ಸ್ಥಾನಗಳನ್ನು ಜಯಗಳಿಸಿತ್ತು.