ಯುವಕನೋರ್ವನಿಗೆ ಲೈಂಗಿಕ ದೌರ್ಜನ್ಯಗೈದ ಪ್ರಕರಣದಲ್ಲಿ ಸೂರಜ್ ರೇವಣ್ಣ ಪರವಾಗಿ ನಿಂತು ಸಂತ್ರಸ್ತನ ವಿರುದ್ಧ ದೂರು ನೀಡಿದ್ದ ಶಿವಕುಮಾರ್ ಪತ್ತೆಯಾಗಿದ್ದು, ಸೂರಜ್ ರೇವಣ್ಣ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಸಂತ್ರಸ್ತನ ವಿರುದ್ಧ ಬ್ಲ್ಯಾಕ್ ಮೇಲ್ ದೂರು ನೀಡಿದ್ದ ಶಿವಕುಮಾರ್, ಸೂರಜ್ ರೇವಣ್ಣ ಬಂಧನವಾಗುತ್ತಿದ್ದಂತೆಯೇ ದಿಢೀರ್ ನಾಪತ್ತೆಯಾಗಿದ್ದ. ಆದರೆ, ಇಂದು (ಜೂನ್ 25) ಶಿವಕುಮಾರ್ ಏಕಾಏಕಿ ಪ್ರತ್ಯಕ್ಷರಾಗಿದ್ದು, ಹೊಳೆನರಸೀಪುರ ಪೊಲೀಸ್ ಠಾಣೆಗೆ ಭೇಟಿ ನೀಡಿ ಸೂರಜ್ ರೇವಣ್ಣ ವಿರುದ್ಧವೇ ದೂರು ನೀಡಿದ್ದಾರೆ.
ಜೆಡಿಎಸ್ ಕಾರ್ಯಕರ್ತನೋರ್ವ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಸೂರಜ್ ರೇವಣ್ಣ ವಿರುದ್ಧ ಸಿಎಂ, ಗೃಹ ಸಚಿವ ಕಚೇರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಇತ್ತ ಸೂರಜ್ ರೇವಣ್ಣನ ಆಪ್ತರಾಗಿದ್ದ ಶಿವಕುಮಾರ್ ಅವರು ಸಂತ್ರಸ್ತನ ವಿರುದ್ಧವೇ ಬ್ಲ್ಯಾಕ್ ಮೇಲ್ ದೂರು ದಾಖಲಿಸಿದ್ದರು. ಬಳಿಕ ಸಂತ್ರಸ್ತ, ಶಿವಕುಮಾರ್ ವಿರುದ್ಧವೇ ದೂರು ದಾಖಲಿಸಿದ್ದರು. ಅಲ್ಲಿಂದ ಅವರು ನಾಪತ್ತೆಯಾಗಿದ್ದರು.
ಇದೀಗ ಶಿವಕುಮಾರ್ ತಮ್ಮ ನಿಲುವು ಬದಲಾಯಿಸಿ ಸೂರಜ್ ವಿರುದ್ಧವೇ ದೂರು ದಾಖಲಿಸಿದ್ದು, “ಸೂರಜ್ ರೇವಣ್ಣ ನನ್ನನ್ನು ಬೆದರಿಸಿ ಸಂತ್ರಸ್ತನ ವಿರುದ್ಧ ದೂರು ಕೊಡಿಸಲಾಗಿತ್ತು” ಎಂದು ಶಿವಕುಮಾರ್ ಆರೋಪಿಸಿದ್ದಾರೆ. ಅಲ್ಲದೇ, ಸೂರಜ್ ರೇವಣ್ಣ ನನ್ನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ಸೂರಜ್ ವಿರುದ್ಧ 2ನೇ FIR
ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಲೈಂಗಿಕ ದೌರ್ಜನ್ಯ ಕೇಸು ದಾಖಲಾಗಿದೆ. ಕೊರೋನಾ ಸಂದರ್ಭದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಹಿನ್ನೆಲೆಯಲ್ಲಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೂರಜ್ ರೇವಣ್ಣ ವಿರುದ್ಧ 377, 342 ಹಾಗೂ 506 ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಶಿವಕುಮಾರ್ ವಿರುದ್ಧವೂ ದೂರು
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ.ಸೂರಜ್ ರೇವಣ್ಣ ಆಪ್ತ, ನಾಪತ್ತೆಯಾಗಿರುವ ಶಿವಕುಮಾರ್ ವಿರುದ್ಧವೂ ಸಂತ್ರಸ್ತ ದೂರು ದಾಖಲಿಸಿದ್ದಾರೆ.
“ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ, ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ” ಎಂದು ಸಂತ್ರಸ್ತ ಆರೋಪಿಸಿದ್ದಾರೆ. ಹೀಗಾಗಿ ಸೂರಜ್ ಪ್ರಕರಣದಲ್ಲಿ ಶಿವಕುಮಾರ್ ಎರಡನೇ ಆರೋಪಿಯಾಗಿದ್ದಾನೆ.
ಯುವಕನಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಎಂಎಲ್ಸಿ ಸೂರಜ್ ರೇವಣ್ಣನನ್ನು 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಬುಧವಾರ ಆದೇಶ ಹೊರಡಿತ್ತು.
ಪ್ರಕರಣ ವಿಚಾರಣೆ ನಡೆಸಿದ್ದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರಾದ ಕೆ.ಎನ್.ಶಿವಕುಮಾರ್ ಅವರು ಸೂರಜ್ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ. ಹೀಗಾಗಿ ಸಿಐಡಿ ಅಧಿಕಾರಿಗಳು ನಿನ್ನೆ (ಜೂನ್ 24) ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.
