ರಾಜ್ಯದ ದಲಿತ ಉದ್ಯಮಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಭಾರೀ ಮತ್ತು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ಖನಿಜ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಧ್ಯಕ್ಷತೆಯ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಸದಸ್ಯರ ಜತೆ ನಡೆದ ಸಭೆಯಲ್ಲಿ ಸಚಿವರು ಈ ಘೋಷಣೆ ಮಾಡಿದರು.
“ದಲಿತ ಉದ್ದಿಮೆದಾರರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯುವ ಕೆಲಸವನ್ನು ಈ ಸಮಿತಿ ಮಾಡಲಿದೆ. ನಿಯಮಗಳ ಪ್ರಕಾರ ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ದಿಮೆದಾರರಿಗೆ ಶೇಕಡ 24.10ರಷ್ಟು ಕೈಗಾರಿಕಾ ನಿವೇಶನ ಗಳನ್ನು ಹಂಚಲು ಸರಕಾರ ಬದ್ಧವಾಗಿದೆ. ಇದರಂತೆ, ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನೂ 391 ಎಕರೆಯಷ್ಟು ಜಾಗವನ್ನು ಪರಿಶಿಷ್ಟರಿಗೆ ಹಂಚುವುದು ಬಾಕಿ ಇದನ್ನು ಆದಷ್ಟು ಬೇಗ ಹಂಚಿಕೆ ಮಾಡಲಾಗುವುದು” ಎಂದರು.
ಕೋವಿಡ್ ಪೂರ್ವದಲ್ಲಿ ಹಂಚಿಕೆಯಾಗಿರುವ ಫಲಾನುಭವಿಗಳಿಗೆ ಯೋಜನೆ ಜಾರಿ ಮತ್ತು ಹಣ ಪಾವತಿಗೆ ಈ ಹಿಂದೆ ಒಂದು ವರ್ಷ ನೀಡಿದ್ದ ವಿನಾಯಿತಿಯನ್ನು ಸಚಿವರು ಉದ್ದಿಮೆದಾರರ ಮನವಿ ಮೇರೆಗೆ ಎರಡು ವರ್ಷಗಳ ವಿನಾಯಿತಿ ನೀಡಿದರು.
“ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಹಂಚಿಕೆಯಾಗದೆ ಉಳಿದಿರುವ ನಿವೇಶನಗಳ ಪೈಕಿ ಶೇ 25ರಷ್ಟು ನಿವೇಶನಗಳನ್ನು ಪರಿಶಿಷ್ಟರಿಗೆ ಹಂಚಿಕೆ ಮಾಡಲಾಗುವುದು. ಕೆಲವು ಸಂದರ್ಭಗಳಲ್ಲಿ ದಲಿತ ಉದ್ದಿಮೆದಾರರ ಯೋಜನಾ ಪ್ರಸ್ತಾವನೆಗಳ ಸ್ವರೂಪ ಬದಲಾದಂತೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಕೈಗಾರಿಕಾ ನಿವೇಶನ ಕೊಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಹೂಡಿಕೆಯು 15 ಕೋಟಿ ರೂ.ಗಳಿಗಿಂತ ಕಡಿಮೆಯಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ವಹಿಸುವ ಬಗ್ಗೆ ಕ್ರಮವಹಿಸಲಾಗುವುದು” ಎಂದು ಮಾಹಿತಿ ನೀಡಿದ್ದಾರೆ.
ದಾಬಸ್ ಪೇಟೆ, ಹಾಸನ, ಬಿಡದಿ ಸೇರಿದಂತೆ ಹಲವೆಡೆಗಳಲ್ಲಿ ಪರಿಶಿಷ್ಟರಿಗೆ ಕೊಟ್ಟಿರುವ ನಿವೇಶನಗಳಲ್ಲಿ ಸಮಸ್ಯೆ ಇದ್ದು ಅದನ್ನು ಆದಷ್ಟು ಬೇಗ ಪರಿಹರಿಸುವ ಬಗ್ಗೆ ಕ್ರಮವಹಿಸಲಾಗಿದೆ. ಸಚಿವರು ನಮ್ಮ ಬಹುತೇಕ ಎಲ್ಲ ಬೇಡಿಕೆಗಳನ್ನು ಈಡೇರಿಸಿದ್ದಾರೆ. ಹೀಗಾಗಿ ಸಚಿವರಿಗೆ ನನ್ನ ಅಭಿನಂದನೆಗಳು” ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಉಪಾಧ್ಯಕ್ಷ ಶ್ರೀನಿವಾಸನ್ ತಿಳಿಸಿದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಕೆಐಎಡಿಬಿ ಸಿಇಒ ಡಾ.ಆರ್. ಮಹೇಶ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಇಂದೂಧರ ಹೊನ್ನಾಪುರ ಸೇರಿದಂತೆ ಇತರರು ಇದ್ದರು.
