- ಕೊಯಮತ್ತೂರಿನಲ್ಲಿ ಮಕ್ಕಳ್ ನೀಧಿ ಮೈಯಂ ಪಕ್ಷದ ಸಭೆಯಲ್ಲಿ ಹೇಳಿಕೆ ನೀಡಿದ ಸ್ಥಾಪಕ
- ಪೆರಿಯಾರ್ ಅವರನ್ನು ತಮಿಳುನಾಡು ತಮ್ಮವರು ಎಂದು ಹೇಳಿಕೊಳ್ಳಲಿ ಎಂದ ನಟ
ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಬಲಪಂಥೀಯ ಸಂಘಟನೆ ಹಾಗೂ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿರುವ ತಮಿಳುನಾಡಿನ ಯುವಜನ ಮತ್ತು ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್ ಹೇಳಿಕೆಯ ವಿಚಾರವಾಗಿ ಮಾತನಾಡಿರುವ ಮಕ್ಕಳ್ ನೀಧಿ ಮೈಯಂ ಪಕ್ಷದ ಸ್ಥಾಪಕಾಧ್ಯಕ್ಷ, ಖ್ಯಾತ ನಟ ಕಮಲ್ ಹಾಸನ್, “ಸನಾತನ’ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಪೂರ್ವಜರು ಕೂಡ ಈ ಹಿಂದೆಯೇ ಮಾತನಾಡಿದ್ದರು” ಎಂದು ಅಭಿಪ್ರಾಯಿಸಿದ್ದಾರೆ.
ಕೊಯಮತ್ತೂರಿನಲ್ಲಿ ಇಂದು ನಡೆದ ಮಕ್ಕಳ್ ನೀಧಿ ಮೈಯಂ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು,”ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಇಂದು ಚಿಕ್ಕ ಮಗು (ಉದಯನಿಧಿ ಸ್ಟಾಲಿನ್) ಅವರನ್ನು ಗುರಿಪಡಿಸಿ, ಬೇಟೆಯಾಡಲಾಗುತ್ತಿದೆ. ಆತನ ಪೂರ್ವಜರು ‘ಸನಾತನ’ದ ಬಗ್ಗೆ ಮಾತನಾಡಿದ್ದಾರೆ. ನಮಗೆಲ್ಲರಿಗೂ ‘ಸನಾತನ’ ಪದದ ಬಗ್ಗೆ ತಿಳಿದಿದ್ದು ಪೆರಿಯಾರ್ ಅವರಿಂದ” ಎಂದು ಹೇಳಿದರು.
VIDEO | "A young kid (Udhayanidhi Stalin) is being hounded today just because he spoke about 'Sanatan'. His forefathers have spoke about 'Sanatan'. All of us got to know about the word 'Sanatan' because of Periyar. He once used to work in the temple. He was doing 'puja' in… pic.twitter.com/KOf6cMoIFa
— Press Trust of India (@PTI_News) September 22, 2023
“ಪೆರಿಯಾರ್ ಅವರು ದೇವಸ್ಥಾನದಲ್ಲಿಯೂ ಕೆಲಸ ಮಾಡುತ್ತಿದ್ದರು. ಹಣೆಯಲ್ಲಿ ತಿಲಕವಿಟ್ಟು ವಾರಣಾಸಿಯಲ್ಲಿ ಪೂಜೆ ಮಾಡುತ್ತಿದ್ದರು. ಅದನ್ನೆಲ್ಲ ದೂರ ಮಾಡಿದ್ದಲ್ಲದೇ, ಜನಸೇವೆಯೇ ಎಲ್ಲಕ್ಕಿಂತ ಅತಿದೊಡ್ಡ ಸೇವೆ ಎಂದು ಅರಿತು ಇಡೀ ಜೀವನಪೂರ್ತಿ ಅದನ್ನೇ ಮಾಡಿಕೊಂಡು ಬಂದವರು. ಅವರಿಗೆ ಎಷ್ಟು ಸಿಟ್ಟು ಬಂದಿರಬಹುದು ಊಹಿಸಿ” ಎಂದ ಕಮಲ್ ಹಾಸನ್, “ಡಿಎಂಕೆ ಅಥವಾ ಯಾವುದೇ ಪಕ್ಷವೇ ಆಗಲಿ ಪೆರಿಯಾರ್ ಅನ್ನು ತಮ್ಮವರು ಎಂದು ಹೇಳಿಕೊಳ್ಳಬೇಡಿ. ಪೆರಿಯಾರ್ ಅವರನ್ನು ತಮಿಳುನಾಡು ತಮ್ಮವರು ಎಂದು ಹೇಳಿಕೊಳ್ಳಲಿ” ಎಂದು ನಟ, ರಾಜಕಾರಣಿ ಹೇಳಿದ್ದಾರೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಉದಯನಿಧಿ ಸ್ಟಾಲಿನ್, “ಕೆಲವು ವಿಷಯಗಳನ್ನು ನಾವು ವಿರೋಧಿಸುವ ಬದಲು ಅವುಗಳನ್ನು ನಿರ್ಮೂಲನೆ ಮಾಡುವುದೇ ಸರಿ. ನಾವು ಕೊರೋನಾ, ಡೆಂಗ್ಯೂ, ಮಲೇರಿಯಾದಂಥ ಸೋಂಕುಗಳನ್ನು ವಿರೋಧಿಸಬಾರದು. ಆರೋಗ್ಯ ಜಾಗೃತಿಯ ಮೂಲಕ ಅವುಗಳನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನ ಧರ್ಮವನ್ನೂ ನಾವು ವಿರೋಧಿಸುವ ಬದಲು ಸಾಮಾಜಿಕ ಜಾಗೃತಿಯ ಮೂಲಕ ನಿರ್ಮೂಲನೆ ಮಾಡಬೇಕು” ಎಂದು ಹೇಳಿಕೆ ನೀಡಿದ್ದರು. ಇದು ಬಲಪಂಥೀಯರು ಹಾಗೂ ಬಿಜೆಪಿಯವರ ಕಣ್ಣು ಕೆಂಪಗಾಗಿಸಿತ್ತು.