- ಕೃಷಿ ವಿವಿಗಳಿಂದ ಎಷ್ಟು ಪದವೀಧರರು ಹೊರಗೆ ಬಂದರು ಎಂಬುದು ಮುಖ್ಯವಲ್ಲ
- ವಾತಾವರಣಕ್ಕೆ ತಕ್ಕಂತೆ ರೈತ ಪರವಾದ ಸಂಶೋದನೆಗಳು ನಡೆಯಬೇಕು: ಸಿಎಂ
ಕೃಷಿ ವಿಶ್ವವಿದ್ಯಾಲಯಗಳಿಂದ ಎಷ್ಟು ಪದವೀಧರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹಿರಿಯೂರು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಹಿರಿಯೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಶತಮಾನೋತ್ಸವ ಮತ್ತು ಸಿರಿಧಾನ್ಯ ಮೇಳ ಹಾಗೂ ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
“ಸಂಶೋಧನೆಗಳಿಗೆ ಸಕಲ ನೆರವು ನೀಡಲು ಸರ್ಕಾರ ಸಿದ್ದವಾಗಿದೆ ಮತ್ತು ಬದ್ದವಾಗಿದೆ. ಎಷ್ಟು ತಳಿ, ಎಷ್ಟು ರೋಗಕ್ಕೆ ಔಷಧ ಕಂಡುಹಿಡಿದಿದ್ದೀರಿ, ಎಷ್ಟು ರೋಗನಿರೋಧಕ ಔಷಧಗಳನ್ನು ಕಂಡು ಹಿಡಿದಿದ್ದೀರಿ ಎನ್ನುವುದು ನಿಮ್ಮ ಆದ್ಯತೆಯಾಗಲಿ” ಎಂದು ಕರೆ ನೀಡಿದರು.
“ಬೆಳೆದ ಬೆಳೆಗೆ ಬೆಳೆ ಇಲ್ಲ. ಅತಿವೃಷ್ಟಿ, ಅನಾವೃಷ್ಠಿ, ಬರಗಾಲ ರೈತರನ್ನು ಕಾಡುತ್ತಿದೆ. ಹೀಗಾಗಿ ಬದಲಾದ ವಾತಾವರಣಕ್ಕೆ ತಕ್ಕಂತೆ ರೈತ ಪರವಾದ ಸಂಶೋದನೆಗಳು ನಡೆಯಬೇಕು. ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ” ಎಂದರು.
“80 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಿದ್ದರೆ 42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಹೀಗಾಗಿ ರಾಜ್ಯ ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 4860 ಕೋಟಿ ಪರಿಹಾರ ಕೋರಿ ಕೇಂದ್ರಕ್ಕೆ ನಾವು ಮನವಿ ಮಾಡಿದ್ದರೂ ನಮಗೆ ಆಗಿರುವ ನಷ್ಟದ ಪ್ರಮಾಣ 30 ಸಾವಿರ ಕೋಟಿಗೂ ಅಧಿಕ. ಇದನ್ನೆಲ್ಲಾ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸುತ್ತಿದೆ” ಎಂದರು.
“ಚಿತ್ರದುರ್ಗ ಮೊದಲೇ ಬರ ಪೀಡಿತ ಜಿಲ್ಲೆ. ಈಗ ಇನ್ನಷ್ಟು ಬರಗಾಲಕ್ಕೆ ತುತ್ತಾಗಿದೆ. ಕೇಂದ್ರ ಸರ್ಕಾರ ಎಷ್ಟಾದರೂ ಪರಿಹಾರ ನೀಡಲಿ. ನಮ್ಮ ಸರ್ಕಾರ ಮಾತ್ರ ಜನರಿಗೆ, ರೈತರಿಗೆ, ರಾಸುಗಳಿಗೆ, ಗೋವುಗಳಿಗೆ ಏನೂ ತೊಂದರೆ ಆಗದಂತೆ ನೋಡಿಕೊಳ್ಳಲು ಬದ್ದವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧ್ಯಕ್ಷತೆ ವಹಿಸಿದ್ದರು. ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಬಿಡುಗಡೆಗೊಳಿಸಿದರು. ಶಾಸಕರಾದ ಟಿ. ರಘುಮೂರ್ತಿ, ಡಾ.ಎ. ಚಂದ್ರಪ್ಪ, ಕೆ.ಸಿ. ವೀರೇಂದ್ರ ಪಪ್ಪಿ, ಎನ್.ವೈ. ಗೋಪಾಲಕೃಷ್ಣ, ಬಿ.ಜೆ. ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ. ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಮಾಜಿ ಲೋಕಸಭಾ ಸದಸ್ಯ ಎಂ.ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಕೃಷಿ ತಜ್ಞ ಏಕಾಂತಯ್ಯ, ಸೇರಿದಂತೆ ಇತರರು ಇದ್ದರು.