ತಮ್ಮ ಹಾಲಿ ಕ್ಷೇತ್ರ ವಯನಾಡ್ನಲ್ಲಿ ಸ್ಪರ್ಧಿಸಿರುವ ರಾಹುಲ್ ಗಾಂಧಿ ಈಗ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿಯೂ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ರಾಹುಲ್ಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಎರಡನೇ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ರಾಹುಲ್ ಅಮೇಥಿಗೆ ಬರುತ್ತಾರೆಂಬ ಬಿಜೆಪಿಯ ಊಹೆ ಮತ್ತು ಪಂಥಾಹ್ವಾನಕ್ಕೆ ಕಾಂಗ್ರೆಸ್ ತಂತ್ರ ಶಾಕ್ ಕೊಟ್ಟಿದ್ದರೂ, ರಾಹುಲ್ ವಿರುದ್ಧ ಮೇಲ್ದಾಳಿಯಲ್ಲಿ ಟೀಕಿಸುತ್ತಿದೆ.
ತಮ್ಮ ಹಿಂದಿನ ಕ್ಷೇತ್ರ ಅಮೇಥಿಗೆ ಬದಲಾಗಿ ರಾಯ್ ಬರೇಲಿಯನ್ನು ರಾಹುಲ್ ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ನಡುವೆ, ರಾಹುಲ್ 2ನೇ ಸ್ಪರ್ಧೆಗೆ ವಯನಾಡ್ನಲ್ಲಿ ಮಿತ್ರ ಪ್ರತಿಕ್ರಿಯೆಗಳು ಬರುತ್ತಿವೆ. ರಾಹುಲ್ ಎರಡರಲ್ಲೂ ಗೆದ್ದರೂ, ವಯನಾಡ್ಅನ್ನು ಅವರು ಬಿಡಬಾರದು ಎಂಬ ಮಾತುಗಳೂ ಕೇಳಿಬಂದಿವೆ. ಈ ನಡುವೆ, ಕೇರಳದ ಕಾಂಗ್ರೆಸ್ ಘಟಕ ತನ್ನದೇ ಆದ ಸವಾಲುಗಳನ್ನು ಎದುರಿಸುತ್ತಿದೆ.
ಕೇರಳ ಕಾಂಗ್ರೆಸ್ ವಯನಾಡಿನಲ್ಲಿ ತಮ್ಮ ಮತದಾರರಿಗೆ ಭರವಸೆ ನೀಡಬೇಕು. ರಾಯ್ ಬರೇಲಿಯಲ್ಲಿ ರಾಹುಲ್ ಗೆದ್ದರೆ, ವಯನಾಡಿಗೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕು. ವಯನಾಡಿನಲ್ಲಿ ರಾಹುಲ್ಗೆ ಬೆಂಬಲ ನೀಡಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಅನ್ನು ಸಮಾಧಾನಪಡಿಸಬೇಕು. ಜೊತೆಗೆ, ನಾನಾ ಪ್ರಶ್ನೆಗಳಿಗೆ ಉತ್ತರ ನೀಡಬೇಕು.
2019ರ ಚುನಾವಣೆಯಲ್ಲಿ ವಯನಾಡ್ನಲ್ಲಿ ಮೊದಲಿಗೆ ಕಾಂಗ್ರೆಸ್ ನಾಯಕ ಟಿ ಸಿದ್ದಿಕ್ ಕಣದಲ್ಲಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅಮೇಥಿ ಜೊತಗೆ, ವಯನಾಡ್ನಲ್ಲಿಯೂ ರಾಹುಲ್ ಅವರನ್ನು ಕಣಕ್ಕಿಳಿಸಿತು. ಆಗ ಸಿದ್ದಿಕ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡರು. 4.31 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು.
ವಯನಾಡ್ ಜೊತೆ ರಾಹುಲ್ ಬಾಂಧವ್ಯ
2029ರಲ್ಲಿ, ಬಿಜೆಪಿ ಮತ್ತು ಮೋದಿ ಎರಡನೇ ಅವಧಿಗೆ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾಗ, ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ರಾಹುಲ್ ಪ್ರಧಾನಿ ಆಗಬಹುದು ಎಂಬ ಚರ್ಚೆಗಳು ಮುನ್ನೆಲೆಯಲ್ಲಿದ್ದವು. ಆ ಭಾವನೆ ಮತದಾರರನ್ನು ಪ್ರಭಾವಿಸಿತ್ತು. ಪರಿಣಾಮವಾಗಿ ಎಡರಂಗವು ಕೇರಳದ 20 ಲೋಕಸಭಾ ಸ್ಥಾನಗಳಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಯಿತು. ಕೇರಳದ ಮತದಾರರು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಗೆ 19 ಸ್ಥಾನಗಳಲ್ಲಿ ಗೆಲುವು ನೀಡಿದರು. ಕಾರಣವಿಷ್ಟೆ, ತಮ್ಮ ರಾಜ್ಯವನ್ನು ಪ್ರತಿನಿಧಿಸುವ ರಾಹುಲ್ ಅವರನ್ನು ಭಾರತದ ಪ್ರಧಾನಿಯಾ ನೋಡಬೇಕು ಎಂಬುದಾಗಿತ್ತು.
ಕಾಂಗ್ರೆಸ್ ಮಿತ್ರಪಕ್ಷ ಐಯುಎಂಎಲ್ ಆ ಚುನಾವಣೆಯಲ್ಲಿ ಮುಸ್ಲಂಇ ಪ್ರಾಬಲ್ಯವಿದ್ದ ವಯನಾಡ್ನಲ್ಲಿ ರಾಹುಲ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತ್ತು.
ಇಷ್ಟೊಂದು ಭರಪೂರ ಬೆಂಬಲ ನೀಡಿದ್ದ ವಯನಾಡ್ ಮತ್ತು ಕೇರಳದಿಂದ ಈಗ ರಾಹುಲ್ ಒಂದು ಕಾಲನ್ನು ಹೊರಗಿಟ್ಟಿದ್ದಾರೆ. ರಾಯ್ ಬರೇಲಿಯಲ್ಲಿಯೂ ರಾಹುಲ್ ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ರಾಯ್ಬರೇಲಿಯಲ್ಲಿ ರಾಹುಲ್ ಸ್ಪರ್ಧೆಯನ್ನು ಐಯುಎಂಎಲ್ ನಾಯಕತ್ವ ಸ್ವಾಹತಿಸಿದೆ. ‘ರಾಯ್ ಬರೇಲಿಯಲ್ಲಿ ರಾಹುಲ್ ಸ್ಪರ್ಧೆಯು ‘ಇಂಡಿಯಾ’ ಒಕ್ಕೂಟದ ಭವಿಷ್ಯವನ್ನು ಹೆಚ್ಚಿಸುತ್ತದೆ’ ಎಂದು ಐಯುಎಂಎಲ್ ನಾಯಕ ಪಿಕೆ ಕುನ್ಹಾಲಿಕುಟ್ಟಿ ಹೇಳಿದ್ದಾರೆ.
ಅವರ ಈ ಹೇಳಿಕೆಯು ಕೇರಳದ ಕಾಂಗ್ರೆಸ್ಗೆ ಸಮಾಧಾನವನ್ನು ತರಬಹುದು. ಆದಾಗ್ಯೂ, ರಾಹುಲ್ ವಯನಾಡ್ ತೊರೆದರೆ, ಅಲ್ಲಿನ ಮತದಾರರ ಆತಂಕವನ್ನು ಪರಿಹರಿಸುವ ಒತ್ತಡ ಕೇರಳದ ಕಾಂಗ್ರೆಸ್ ನಾಯಕತ್ವಕ್ಕೆ ಎದುರಾಗಲಿದೆ.
ಮತ್ತೊಂದು ವಿಚಾರ, ಅಮೇಥಿಗಿಂತ ಭಿನ್ನವಾಗಿ, ರಾಹುಲ್ ವಯನಾಡಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮತದಾರರೊಂದಿಗೆ ಬಲವಾದ ಬಾಂಧವ್ಯ ಬೆಳೆಸಿಕೊಂಡಿದ್ದರು. ಮಾನವ-ಪ್ರಾಣಿ ಸಂಘರ್ಷ ಅಥವಾ ಇತರ ಸಮಸ್ಯೆಗಳು ಎದುರಾದಾಗ, ರಾಹುಲ್ ವಯನಾಡ್ನಲ್ಲಿ ಕಾಣಸಿಗುತ್ತಿದ್ದರು. ಇದು ವಯನಾಡ್ ಮತದಾರರಲ್ಲಿ ರಾಹುಲ್ ನಿಜವಾಗಿಯೂ ತಮ್ಮದೇ ನಾಯಕನೆಂಬ ಭಾವನೆ ಬೆಳಸಿದೆ. ರಾಹುಲ್ ರಯ್ಬರೇಲಿಯಲ್ಲಿ ಗೆದ್ದರೆ, ಅವರು ವಯನಾಡನ್ನು ಯಾಕೆ ಖಾಲಿ ಮಾಡಬೇಕಾಗಿದೆ ಎಂಬುದನ್ನು ವಿವರಿಸಲು ಕೇರಳ ಕಾಂಗ್ರೆಸ್ ಈ ಬಾಂಧವ್ಯವು ಹೆಚ್ಚು ಕಷ್ಟಕರ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.
ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ
ಈಗ ರಾಹುಲ್ ರಾಯ್ ಬರೇಲಿ ಗೆದ್ದು ವಯನಾಡ್ ತೊರೆದರೆ ಕೇರಳದಲ್ಲಿ ಕಾಂಗ್ರೆಸ್ ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಬಹುದು. ಕೇರಳದಲ್ಲಿ ಕಾಂಗ್ರೆಸ್ನಲ್ಲಿ ಕಿತ್ತಾಟವೂ ಶುರುವಾಗಬಹುದು. ವಯನಾಡಅನ್ನು ರಾಹುಲ್ ತೊರೆದರೆ, ಆ ಕ್ಷೇತ್ರವನ್ನು ಭದ್ರವಾಗಿ ಇಟ್ಟುಕೊಳ್ಳಲು ಕಾಂಗ್ರೆಸ್ನ ಪ್ರಮುಖ ನಾಯಕರು ಸ್ಪರ್ಧೆಗಿಳಿಯಲು ಮುಂದಾಗಬಹುದು. ಕಳೆದ ಎಂಟು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಿಂದ ಹೊರಗುಳಿದಿದ್ದರೂ, ಕೇರಳ ಕಾಂಗ್ರೆಸ್ ಗುಂಪುಗಾರಿಕೆಯಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಪಕ್ಷದೊಳಗಿನ ವಿವಿಧ ಬಣಗಳು ವಯನಾಡ್ಗಾಗಿ ಕಿತ್ತಾಡುವ ಸಾಧ್ಯತೆಗಳೂ ಇವೆ.
ಆದರೆ, ಪ್ರಿಯಾಂಕಾ ಗಾಂಧಿ ವಯನಾಡ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರೆ, ಆ ತೊಂದರೆ ತಪ್ಪಿಸಬಹುದು ಎಂದು ಕಾಂಗ್ರೆಸ್ ಒಳಗಿನವರು ಹೇಳುತ್ತಾರೆ. ಭಾರತದಾದ್ಯಂತ ಕಾಂಗ್ರೆಸ್ ಚುನಾವಣಾ ಪ್ರಚಾರಗಳಲ್ಲಿ ಮುಂಚೂಣಿಯಲ್ಲಿರುವ ಪ್ರಿಯಾಂಕಾ ಅವರು ವಯನಾಡ್ಗೆ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಗಳೂ ಇವೆ. ಪ್ರಿಯಾಂಕ ಸ್ಪರ್ಧೆಗೂ ಐಯುಎಂಎಲ್ ಬೆಂಬಲ ನೀಡಲಿದೆ ಎನ್ನಲಾಗಿದ್ದು, ಅವರ ಗೆಲುವು ಸುಗಮವಾಗಲಿದೆ ಎಂಬ ಮಾತುಗಳೂ ಇವೆ.
ಕಾಂಗ್ರೆಸ್ ಒಳಗಿನವರ ಪ್ರಕಾರ, ವಯನಾಡ್ನಲ್ಲಿ ಪ್ರಿಯಾಂಕಾ ಸ್ಪರ್ಧೆಯಿಂದ ರಾಹುಲ್ ವಯನಾಡನ್ನು ಖಾಲಿ ಮಾಡಿದರ ಕುರಿತು ಮತದಾರರಲ್ಲಿ ಮೂಡುವ ಬೇಸರವನ್ನು ತಗ್ಗಿಸುತ್ತದೆ. ಕಾಂಗ್ರೆಸ್ನ ಗುಂಪುಗಾರಿಕೆಯನ್ನು ನಿಯಂತ್ರಿಸುತ್ತದೆ. 2026ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು ನೆರವಾಗಲಿದೆ.
ಈ ವರದಿ ಓದಿದ್ದೀರಾ?: ಜಾತಿ ಅಸಮಾನತೆ ತೀವ್ರ ಹೆಚ್ಚಳ; ಮೋದಿ ಆಳ್ವಿಕೆಯ ನಿಜಬಣ್ಣ ತೆರೆದಿಟ್ಟ ಬಹುತ್ವ ಕರ್ನಾಟಕ ವರದಿ
ಆದಾಗ್ಯೂ, ಎಡಪಕ್ಷಗಳನ್ನು ಮತ್ತು ಕೇರಳದ ಮಾಧ್ಯಮಗಳ ನಿರೂಪಣೆಗಳನ್ನು ನಿರ್ವಹಿಸುವಲ್ಲಿ ಕಾಂಗ್ರೆಸ್ಗೆ ಸವಾಲು ಎದುರಾಗಬಹುದು. ರಾಷ್ಟ್ರೀಯವಾಗಿ ಎಡಪಕ್ಷಗಳು ‘ಇಂಡಿಯಾ’ ಒಕ್ಕೂಟದ ಭಾಗವಾಗಿದ್ದರೂ, ಕೇರಳದಲ್ಲಿ ಕಾಂಗ್ರೆಸ್ನೊಂದಿಗೆ ಭಿನ್ನಾಭಿಪ್ರಾಯ ಹೊಂದಿವೆ. ಒಂದೇ ಮೈತ್ರಿಕೂಟದ ಭಾಗವಾಗಿದ್ದರೂ, ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಅನ್ನಿ ರಾಜಾಗೆ ಪ್ರತಿಸ್ಪರ್ಧಿಯಾಗಿದ್ದಕ್ಕೆ ರಾಹುಲ್ ಅವರನ್ನು ಕೇರಳದ ಎಡಪಕ್ಷಗಳು ಲೇವಡಿ ಮಾಡಿದ್ದವು.
ವಯನಾಡ್ ಮತ್ತು ರಾಯ್ ಬರೇಲಿಯಲ್ಲಿನ ರಾಹುಲ್ ಸ್ಪರ್ಧೆಗೆ ಸಂಬಂಧಿಸಿದಂತೆ ಎದುರಾಗುವ ವಿವಿಧ ಪ್ರಶ್ನಗಳನ್ನು ಕೇರಳದ ಕಾಂಗ್ರೆಸ್ ನಿಭಾಯಿಸಬಹುದು. ಆದರೆ, ಕೇರಳದಲ್ಲಿ ಮಾಧ್ಯಮಗಳ ನಿರೂಪಣೆಗಳ ಸವಾಲು ಎದುರಾಗುವ ಸಾಧ್ಯತೆಗಳಿವೆ. ಶುಕ್ರವಾರ, ಕೇರಳದ ಎಲ್ಲ ಪ್ರಮುಖ ಸುದ್ದಿ ವಾಹಿನಿಗಳು ರಾಹುಲ್ ಅವರನ್ನು ಗುರಿಯಾಗಿಸಿಕೊಂಡಿದ್ದವು. ‘ಕಾಂಗ್ರೆಸ್ ಯುವರಾಜ (ರಾಹುಲ್ ಗಾಂಧಿ) ವಯನಾಡಿನಿಂದ ಪಲಾಯನ ಮಾಡಿದ್ದಾರೆ’ ಎಂಬ ಮೋದಿ ಭಾಷಣದ ಆಧಾರದ ಮೇಲೆ ರಾಹುಲ್ ವಿರುದ್ಧ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಲೇ ಇವೆ.
ಅನೇಕ ಟಿವಿ ಚರ್ಚಾಕಾರರು ಮೋದಿಯವರ ಹೇಳಿಕೆಯನ್ನು ಪ್ರತಿಧ್ವನಿಸಿದರು. ರಾಹುಲ್ ಅಮೇಥಿಗಿಂತ ರಾಯ್ ಬರೇಲಿಯನ್ನು ಏಕೆ ಆಯ್ಕೆ ಮಾಡಿದರು. ರಾಯ್ ಬರೇಲಿಯಲ್ಲಿ ಗೆಲ್ಲುವುದಕ್ಕಿಂತ ಅಮೇಥಿಯಲ್ಲಿ ರಾಹುಲ್ ಸೋಲುವುದೇ ಮೇಲು ಎಂಬಂತೆ ಕೆಲವು ಟಿವಿ ಆ್ಯಂಕರ್ಗಳು ವಾದಿಸಿದರು. ಈ ನಿರೂಪಣೆಗಳು ಕೇರಳದಲ್ಲಿ ಕಾಂಗ್ರೆಸ್ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಜೂನ್ 4 ರವರೆಗೆ ಮತ್ತು ಬಹುಶಃ ಅದರ ನಂತರವೂ ಕೇರಳದ ಕಾಂಗ್ರೆಸ್ ನಾಯಕರು ಈ ನಿರೂಪಣೆಗಳನ್ನು ಎದುರಿಸಬೇಕಾಗುತ್ತದೆ.
ಅದಂಹಾಗೆ, ರಾಹುಲ್ ಅಮೇಥಿಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಮುನ್ನೆಲೆಯಲ್ಲಿತ್ತು. ಕೇಂದ್ರ ಸಚಿವ ಸೃತಿ ಇರಾನಿ ತಮ್ಮ ವಿರುದ್ಧ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಅವರನ್ನು ಅಮೇಥಿಗೆ ಕರೆಯುತ್ತಲೇ ಇದ್ದರು. ಇದೆಲ್ಲದರ, ನಡುವೆ ರಾಹುಲ್ ರಾಯ್ಬರೇಲಿಯಲ್ಲಿ ಸ್ಪರ್ಧಿಸಿದ್ದು, ಅಮೇಥಿಯಲ್ಲಿ ಪಕ್ಷದ ಹಿರಿಯ ಕಾರ್ಯಕರ್ತ ಕೆ.ಎಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಇದು, ಬಿಜೆಪಿಗೆ ದೊಡ್ಡ ಶಾಕ್ ಆಗಿದೆ. ಅಮೇಥಿಗೆ ರಾಹುಲ್ ಬಂದರೆ, ಅವರ ವಿರುದ್ಧ ನಿರೂಪಣೆ ಕಟ್ಟಲು ಬಿಜೆಪಿ ತಂತ್ರ ಎಣೆದಿತ್ತು. ಅದರೆ, ರಾಯ್ಬರೇಲಿಯಲ್ಲಿ ಕಾಂಗ್ರೆಸ್ ವಿರುದ್ಧದ ಹೋರಾಟಕ್ಕೆ ಬಿಜೆಪಿ ಬಳಿ ಯಾವುದೇ ತಂತ್ರ ಇರಲಿಲ್ಲ. ಅಲ್ಲದೆ, ಅಮೇಥಿಯಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸಿರುವುದೂ ಕೂಡ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆಗಳನ್ನು ಎತ್ತಿ ತೋರಿಸುತ್ತಿದೆ.