ಬಿಜೆಪಿ ಶಾಸಕ ಮುನಿರತ್ನ ಮತ್ತು ಅವರ ಆಪ್ತ ವಸಂತ್ ಕುಮಾರ್ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ರೇಣುಕಾಸ್ವಾಮಿ ರೀತಿಯಲ್ಲೇ ನಿನ್ನ ಕೊಲೆ ಮಾಡುತ್ತೇವೆ ಎಂದು ಹೆದರಿಸಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಗಂಭೀರವಾಗಿ ಆರೋಪಿಸಿದ್ದಾರೆ.
ಹಣ ವಸೂಲಿ ಮಾಡಲು ಜಾತಿ ನಿಂದನೆ ಮಾಡಿ, ಹೆಂಡತಿ ಮತ್ತು ತಾಯಿ ಬಗ್ಗೆ ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಅರೋಪಿಸಿ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಬಿಡುಗಡೆ ಮಾಡಿ ಚೆಲುವರಾಜು ಮಾತನಾಡಿದರು.
“ಮುಂದೆ ನಾನು ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ. ನನ್ನ ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಹೆಂಡತಿ ಫೋಟೋ ತೋರಿಸು ಹೇಗಿದ್ದಾಳೆ ಎನ್ನುತ್ತಾರೆ. ಮನಿರತ್ನ ನನ್ನ ಹೆಂಡತಿಯನ್ನು ಮಂಚಕ್ಕೆ ಕಳುಹಿಸು ಎಂದಿದ್ದಾರೆ. ನನ್ನ ತಾಯಿಯ ಬಗ್ಗೆ ಅಸಹ್ಯವಾಗಿ ಮಾತಾಡಿದ್ದಾರೆ” ಎಂದು ಆರೋಪಿಸಿದರು.
“ನಾನು ಪೌರ ಕಾರ್ಮಿಕನಾಗಿ, ಲಾರಿ ಕ್ಲೀನರ್, ಡ್ರೈವರ್ ಆಗಿ ಕೆಲಸ ಮಾಡಿ, ಈಗ ವಾರ್ಡ್ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಾಸಕ ಮುನಿರತ್ನ ಮತ್ತು ಪಿಎ ವಿ ಜಿ ಕುಮಾರ್ ಫೋನ್ ಮಾಡಿ, ನನಗೆ ತಿಳಿಯದೇ ಆರ್ಡರ್ ಮಾಡಿಸ್ತೀಯಾ ಎಂದು ಆವಾಜ್ ಹಾಕುತ್ತಾರೆ. ಸಭೆ ಕರೆದು ಎಲ್ಲರೆದುರು ನನ್ನ ಬೈದಿದ್ದಾರೆ. 36 ಲಕ್ಷ ಕೊಡು ಎಂದರು. ನಾನು 15 ಲಕ್ಷ ಕೊಡುವೆ ಎಂದೆ. ಆದರೆ ನನಗೆ ಅಷ್ಟು ಹಣ ಕೊಡಲಾಗಲಿಲ್ಲ” ಎಂದರು.
“ಮೂರು ದಿನದ ಮುಂದೆ ಮುನಿರತ್ನ ಆಪ್ತ ವಸಂತಕುಮಾರ್ ಸಿಕ್ಕಿದ್ದರು. ನೀನು ಹಣ ಕೊಟ್ಟಿಲ್ಲ ಅಂದ್ರೆ ರೇಣುಕಾಸ್ವಾಮಿ ತರ ನಿನಗೂ ಆಗುತ್ತೆ ಅಂದರು. ಅದಕ್ಕೆ ನನಗೆ ಭಯ ಆಗಿದೆ. ಮುನಿರತ್ನ ನನ್ನನ್ನು ಏನಾದ್ರೂ ಮಾಡುವಷ್ಟು ಪ್ರಭಾವಿ. ನನ್ನ ಜೀವಕ್ಕೆ ಅಪಾಯವಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಹಾಗೂ ಪೊಲೀಸ್ ಕಮಿಷನರ್ ಅವರನ್ನು ಭೇಟಿ ಆಗಿ ದೂರು ಕೊಡುವೆ” ಎಂದು ತಿಳಿಸಿದರು.