- ಜತಿನ್ ಮೆಹ್ತಾ ಮೇಲೆ ₹7 ಸಾವಿರ ಕೊಟಿ ವಂಚನೆ ಆರೋಪ
- ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸುಪ್ರಿಯಾ ಮಾಹಿತಿ
ವಂಚಕ ಜತಿನ್ ಮೆಹ್ತಾ ಅವರನ್ನು ಕರೆತರುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಬುಧವಾರ (ಏಪ್ರಿಲ್ 19) ಆರೋಪಿಸಿದೆ.
ವಜ್ರದ ಉದ್ಯಮಿ ಜತಿನ್ ಭಾರತದಲ್ಲಿ ವಂಚನೆ ಆರೋಪ ಎದುರಿಸುತ್ತಿದ್ಧಾನೆ. ಈ ಹಿನ್ನೆಲೆ ಆತ ಇಲ್ಲಿಂದ ಪರಾರಿಯಾಗಿದ್ದಾನೆ. ಆತ ಗೌತಮ್ ಅದಾನಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆ ಆತನಿಗೆ ಕೇಂದ್ರ ರಕ್ಷಣೆ ನೀಡುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಅವರು ದೆಹಲಿಯ ಪಕ್ಷದ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
“ಜತಿನ್ ಭಾರತೀಯ ಬ್ಯಾಂಕುಗಳಿಗೆ ₹7 ಸಾವಿರ ಕೋಟಿ ವಂಚನೆ ಮಾಡಿದ್ದು ದೇಶದಿಂದ ಪರಾರಿಯಾಗಿದ್ದಾನೆ.ಆತ ದೇಶದಿಂದ ಪರಾರಿಯಾಗಿರುವುದು ಮಾತ್ರವಲ್ಲದೆ ಸೇಂಟ್ ಕಿಟ್ಸ್ ಮತ್ತು ನೆವಿಸ್, ಕೆರಿಬಿಯನ್ ದೇಶಗಳ ಪೌರತ್ವ ಪಡೆದಿದ್ದಾನೆ. ಆದರೂ ಆತನ ಬಂಧನಕ್ಕೆ ಯಾವ ಪ್ರಯತ್ನಗಳೂ ಆಗಿ” ಎಂದು ಸುಪ್ರಿಯಾ ಅವರು ಆಕ್ರೋಶ ವ್ಯಕ್ತಪಡಿಸಿದರು.
“ಜತಿನ್ನನ್ನು ಹಿಡಿಯುವ, ಆತನ ವಿರುದ್ಧ ತನಿಖೆ, ಆತ ಈ ದೇಶದ ಕಾನೂನಿಗೆ ಒಳಪಡಿಸುವಂತೆ ಮಾಡುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಜತಿನ್ ಹಾಗೂ ಈಗ ಮುನ್ನೆಲೆಗೆ ಬಂದಿರುವ ಅದಾನಿ ಹಗರಣಕ್ಕೆ ಇರುವ ಸಾಮ್ಯತೆಯನ್ನು ತಳುಕು ಹಾಕಬಹುದು” ಎಂದು ಹೇಳಿದ್ದಾರೆ.
“ಜತಿನ್ ಭಾರತೀಯ ಬ್ಯಾಂಕುಗಳಿಂದ ಸಾಲದ ಪತ್ರಗಳ ಮೂಲಕ ಚಿನ್ನವನ್ನು ಆಮದು ಮಾಡಿಕೊಳ್ಳುವ ತಂತ್ರದ ರೀತಿಯಲ್ಲಿ ವಂಚನೆ ಎಸಗಿದ್ದ. ಆಮದು ಮಾಡಿಕೊಂಡ ಚಿನ್ನವನ್ನು ಆಭರಣಗಳಾಗಿ ಪರಿವರ್ತಿಸಿ ಅವುಗಳನ್ನು ದುಬೈಗೆ ರಫ್ತು ಮಾಡುತ್ತಿದ್ದ. ದುಬೈನಿಂದ ರಫ್ತು ಮಾಡುತ್ತಿದ್ದ 13 ಕಂಪನಿಗಳು ಜತಿನ್ ಹಾಗೂ ಆತನ ಕುಟುಂಬಕ್ಕೆ ಸೇರಿದ್ದವು” ಎಂದು ಸುಪ್ರಿಯಾ ಆರೋಪಿಸಿದರು.
“ಈ ಕಂಪನಿಗಳು ರಫ್ತಿಗಾಗಿ ಪಾವತಿ ಮಾಡಲು ನಿರಾಕರಿಸಿದವು. ಈ ಹಣ ನಷ್ಟಕ್ಕೆ ತಿರುಗಿತು. ಈ ಹಣವನ್ನು ಜತಿನ್ ಹಾಗೂ ಕುಟುಂಬ ವಂಚನೆ ಮಾಡಿದ್ದರು. ಈ ಹಣ ಈ ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸೇರಿದೆ. ಆದರೆ ಆತನನ್ನು ಹಿಡಿಯುವ ಪ್ರಯತ್ನವಾಗಿಲ್ಲ” ಎಂದು ಸುಪ್ರಿಯಾ ಬೇಸರ ವ್ಯಕ್ತಪಡಿಸಿದರು.
ಜತಿನ್ ಮೆಹ್ತಾ ಪ್ರಕರಣಕ್ಕೂ ಅದಾನಿ ಹಗರಣಕ್ಕೂ ಸಂಬಂಧವಿದೆ. ಅದಾನಿ ಹಣವನ್ನು ವಹಿವಾಟು ನಡೆಸುವ ಮಾರಿಷಿಯಸ್ನ ಕೆಲವು ಕಂಪನಿಗಳ ಜೊತೆ ಜತಿನ್ ಸಂಪರ್ಕ ಹೊಂದಿದ್ದಾನೆ. ಈತ ಕಂಪನಿಗಳ ಮೂಲಕ ಅದಾನಿ ಸಮೂಹದಲ್ಲಿ ₹20 ಸಾವಿರ ಕೋಟಿ ಹೂಡಿಕೆ ಮಾಡಿದ್ದಾನೆ ಎಂದು ಸುಪ್ರಿಯಾ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸ್ಟಾಲಿನ್ ಜೊತೆ ಮಮತಾ ಬ್ಯಾನರ್ಜಿ ಮಾತುಕತೆ; ಪ್ರಜಾಪ್ರಭುತ್ವ ವಿರೋಧಿ ರಾಜ್ಯಪಾಲರ ವಿರುದ್ಧ ಹೋರಾಟಕ್ಕೆ ಸಹಮತ
ಅದಾನಿ ಸಮೂಹದ ಅಕ್ರಮ ವ್ಯವಹಾರದ ಕುರಿತು ಅಮೆರಿಕ ಮೂಲದ ಹಿಂಡನ್ಬರ್ಗ್ ಸಂಶೋಧನಾ ವರದಿ ಪ್ರಕಟಗೊಂಡ ನಂತರ ಅದಾನಿ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಅದಾನಿ ಸಮೂಹ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದು, ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದೆ.