ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ತವರು ರಾಜ್ಯ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದು ಪ್ರತಿಷ್ಠೆ ವಿಷಯವಾಗಿದೆ. ಅಂತೆಯೇ, ಈದಿನ.ಕಾಮ್ ಸೇರಿದಂತೆ ನಾನಾ ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ 17ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳುತ್ತಿವೆ. 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗುಲ್ಬರ್ಗ ಲೋಕಸಭಾ ಕ್ಷೇತ್ರವನ್ನೇ ಗೆಲ್ಲಲೇಬೇಕೆಂಬುದು ಪ್ರತಿಷ್ಠೆಯ ವಿಷಯವಾಗಿದೆ.
ಗುಲ್ಬರ್ಗ (ಕಲಬುರಗಿ) ಜಿಲ್ಲೆಯನ್ನು ದೀರ್ಘಕಾಲ ಪ್ರತಿನಿಧಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದರು. ಆದರೆ, 2019ರಲ್ಲಿ ಅವರು ಮೊದಲ ಸೋಲು ಕಂಡರು. ಈ ಚುನಾವಣೆಯಲ್ಲಿ ಅವರು ಸ್ಪರ್ಧಿಸಿಲ್ಲ. ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಗುಲ್ಬರ್ಗದಿಂದ 10 ಬಾರಿ ವಿಧಾನಸಭೆ ಮತ್ತು 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಖರ್ಗೆ ಅವರು ಈಗ ತಮ್ಮ ಅಳಿಯನನ್ನು ಕ್ಷೇತ್ರದಲ್ಲಿ ಗೆಲ್ಲಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರು ಕಳೆದ ಒಂದು ತಿಂಗಳಲ್ಲಿ ಕಲಬುರಗಿಯಲ್ಲಿ ಎರಡು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ, ಮಾತನಾಡಿದ್ದಾರೆ. ಇದೀಗ, ಏಪ್ರಿಲ್ 24ರ ಬುಧವಾರ ಮತ್ತೊಮ್ಮೆ ಜಿಲ್ಲೆಗೆ ಬರಲಿದ್ದಾರೆ. ಅಲ್ಲದೆ, ಖರ್ಗೆ ಅವರ ಮಗ, ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಬೆಂಬಲಿಗ ಡಾ. ಶರಣ ಪ್ರಕಾಶ ಪಾಟೀಲ್ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ರಾಧಾಕೃಷ್ಣ ಅವರ ಗೆಲುವಿಗಾಗಿ ಬೇಸಿಗೆಯ ಬಿಸಿಲಿನಲ್ಲಿ ಬೆವರು ಸುರಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕವನ್ನು 371-ಜೆ ಅಡಿಯಲ್ಲಿ ತಂದಿದ್ದರ ಬಗ್ಗೆ, ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಹೆಚ್ಚಾಗಿ ಮಾತನಾಡುತ್ತಿದೆ. ಅಲ್ಲದೆ, ಜಾತಿ ಸಮುದಾಯಗಳು ಹಾಗೂ ಕಾರ್ಮಿಕರ ಮತಗಳನ್ನು ಕಾಂಗ್ರೆಸ್ಗೆ ತರಲು ಪ್ರಿಯಾಂಕ್ ಮತ್ತು ಶರಣಪ್ರಕಾಶ್ ಶತ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ, ರಾಧಾಕೃಷ್ಣ ಅವರು ಮೃದು ಸ್ವಭಾವವೂ ಜನರ ಸಹಾನುಭೂತಿ ಗಳಿಸಿದೆ.
ಇನ್ನೊಂದೆರೆ, 2019ರಲ್ಲಿ ಖರ್ಗೆ ಅವರನ್ನು ಸೋಲಿಸಿದ ಹಾಲಿ ಸಂಸದ ಉಮೇಶ್ ಜಾಧವ್ ಅವರು ಕ್ಷೇತ್ರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಮಣ್ಣು ಮುಕ್ಕಿದ ಬಿಜೆಪಿಗೂ ಕ್ಷೇತ್ರ ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಖರ್ಗೆ ಅವರಿಗೆ ಸೆಡ್ಡು ಹೊಡೆಯಲು ಯತ್ನಿಸುತ್ತಿರುವ ಪ್ರಧಾನಿ ಮೋದಿ, ಮಾರ್ಚ್ 16ರಂದು ಕರ್ನಾಟಕದಲ್ಲಿ ಬಿಜೆಪಿ ಪ್ರಚಾರವನ್ನು ಕಲಬುರಗಿಯಿಂದಲೇ ಆರಂಭಿಸಿದರು.
ಈ ಸುದ್ದಿ ಓದಿದ್ದೀರಾ?: ಮೋದಿ ಟೀಕೆ | ‘ಕಾಂಗ್ರೆಸ್ ಪ್ರಣಾಳಿಕೆ ಕುರಿತು ಚರ್ಚಿಸೋಣ ಬನ್ನಿ’; ಮೋದಿ ಭೇಟಿಗೆ ಸಮಯ ಕೇಳಿದ ಖರ್ಗೆ
ಆದರೂ, ಜಾಧವ್ ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಹೆಸರು ಕಳೆದುಕೊಂಡಿದ್ದಾರೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಕಲಬುರಗಿಗೆ ಯೋಜನೆಗಳನ್ನು ತರುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಜನರು ದೂರುತ್ತಿದ್ದಾರೆ. ಇಂತಹ ಆರೋಪಗಳನ್ನು ಗ್ರಹಿಸಿ ಮೋದಿ, ಕಳೆದ ವರ್ಷ, ಜಿಲ್ಲೆಯಲ್ಲಿ ಮೆಗಾ ಜವಳಿ ಪಾರ್ಕ್ ಆರಂಭಿಸುವುದಾಗಿ ಘೊಷಿಸದರು. ಅಲ್ಲದೆ, ಇತ್ತೀಚೆಗೆ ಬೆಂಗಳೂರು ಮತ್ತು ಕಲಬುರಗಿ ನಡುವೆ ಎರಡು ರೈಲುಗಳನ್ನು ಪ್ರಾರಂಭಿಸಿದರು.
ಇಬ್ಬರೂ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ನಡೆಸುತ್ತಿದ್ದಾರೆ. ಮೇ 7ರಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಮತದಾರರು ಯಾರಿಗೆ ಮತ ಹಾಕಲಿದ್ದಾರೆ. ಯಾರು ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ ಎಂಬುದು ಜೂನ್ 4 ಮತ ಎಣಿಕೆ ಮತ್ತು ಫಲಿತಾಂಶದಲ್ಲಿ ಗೊತ್ತಾಗಲಿದೆ.