ಬೆಳಗಾವಿಯ ಸುವರ್ಣ ಸೌಧದಲ್ಲಿ ಇಂದು ಮುಕ್ತಾಯಗೊಂಡ ಚಳಿಗಾಲ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ನಲ್ಲಿ ಮೂರು ವಿಧೇಯಕಗಳಿಗೆ ಅಂಗೀಕಾರ ನೀಡಲಾಯಿತು.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಎರಡನೆ ತಿದ್ದುಪಡಿ) ವಿಧೇಯಕ 2023 ಸೇರಿದಂತೆ ವಿವಿಧ ಮೂರು ವಿಧೇಯಕಗಳು ಡಿ.15ರಂದು ವಿಧಾನ ಪರಿಷತ್ನಲ್ಲಿ ಅಂಗೀಕಾರಗೊಂಡವು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಎರಡನೆ ತಿದ್ದುಪಡಿ) ವಿಧೇಯಕ 2023ನ್ನು ಸಿಎಂ ಪರವಾಗಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಸದನದ ಪರ್ಯಾಲೋಚನೆಗೆ ಸೂಚಿಸಿದರು.
ಸದಸ್ಯರಾದ ಪಿ.ಹೆಚ್.ಪೂಜಾರ, ಕೆ.ಎ.ತಿಪ್ಪೇಸ್ವಾಮಿ, ಕೇಶವ ಪ್ರಸಾದ್, ನಾಗರಾಜ್ ಯಾದವ್, ಪ್ರತಾಪ್ ಸಿಂಹ ನಾಯಕ್, ಉಮಾಶ್ರೀ, ನಜೀರ್, ರವಿಕುಮಾರ್, ಕೆ.ಪಿ.ನಂಜುಂಡಿ, ಅಡಗೂರು ವಿಶ್ವನಾಥ್, ಮರಿತಿಬ್ಬೇಗೌಡ, ಸೀತಾರಾಂ, ಹೇಮಲತಾ ನಾಯಕ್ ಅವರು ವಿಧೇಯಕದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಬೆಂಬಲ ವ್ಯಕ್ತಪಡಿಸಿದರು. ಬಳಿಕ ವಿಧೇಯಕವು ವಿಧಾನ ಪರಿಷತ್ತಿನ ಸರ್ವಾನುಮತದ ಅಂಗೀಕಾರ ಪಡೆಯಿತು.
ವಿಧಾನಸಭೆಯಿಂದ ಅಂಗಿಕೃತ ರೂಪದಲ್ಲಿರುವ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023 ನ್ನು ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆಯನ್ನು ಸಚಿವ ಹೆಚ್.ಕೆ. ಪಾಟೀಲ್ ಮಂಡಿಸಿದರು.
ಈ ಬಗ್ಗೆ ಸದಸ್ಯರಾದ ಅರುಣ್, ಕೆ.ಎ.ತಿಪ್ಪೇಸ್ವಾಮಿ, ಕೇಶವ ಪ್ರಸಾದ್, ತೇಜಸ್ವಿನಿ ಗೌಡ, ಶಶಿಲ್ ನಮೋಶಿ, ನಿರಾಣಿ ಹನುಮಂತ ರುದ್ರಪ್ಪ, ನಾಗರಾಜ್ ಯಾದವ್, ಕೋಟ ಶ್ರೀನಿವಾಸ ಪೂಜಾರಿ, ಪಿ.ಹೆಚ್. ಪೂಜಾರ್, ಪ್ರತಾಪ್ ಸಿಂಹ ನಾಯಕ್, ಅಡಗೂರು ವಿಶ್ವನಾಥ್, ಬಿ.ಕೆ. ಹರಿಪ್ರಸಾದ್, ಮರಿತಿಬ್ಬೇಗೌಡ, ಪ್ರದೀಪ್ ಶೆಟ್ಟರ್, ರವಿಕುಮಾರ್, ಎಸ್.ವಿ.ಸಂಕನೂರ್, ಜಗದೀಶ್ ಶೆಟ್ಟರ್ ವಿಧೇಯಕದ ಕುರಿತು ಮಾತನಾಡಿ, ಬೆಂಬಲ ವ್ಯಕ್ತಪಡಿಸಿದರು. ವಿಧೇಯಕವು ವಿಧಾನ ಪರಿಷತ್ತಿನ ಸರ್ವಾನುಮತದ ಅಂಗೀಕಾರ ಪಡೆಯಿತು.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ(ತಿದ್ದುಪಡಿ) ವಿಧೇಯಕ 2023 ಅನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಂಡಿಸಿದರು. ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ತೇಜಸ್ವಿನಿಗೌಡ, ಪಿ.ಹೆಚ್.ಪೂಜಾರ್, ಜಗದೀಶ್ ಶೆಟ್ಟರ್ ವಿಧೇಯಕದ ಕುರಿತು ಮಾತನಾಡಿ, ಬೆಂಬಲ ವ್ಯಕ್ತಪಡಿಸಿದರು. ವಿಧೇಯಕವು ವಿಧಾನ ಪರಿಷತ್ತಿನಲ್ಲಿ ಸರ್ವಾನುಮತದ ಅಂಗೀಕಾರ ಪಡೆಯಿತು.
ವಿಧಾನ ಪರಿಷತ್ನಲ್ಲಿ 57 ಗಂಟೆ ಕಾರ್ಯ ಕಲಾಪ: ಸಭಾಪತಿ ಬಸವರಾಜ ಹೊರಟ್ಟಿ
ಡಿ.4ರಿಂದ 15ರವರೆಗೆ 10 ದಿನಗಳ ಕಾಲ ನಡೆದ ಕರ್ನಾಟಕ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಒಟ್ಟು 57 ಗಂಟೆ 45 ನಿಮಿಷಗಳ ಆರೋಗ್ಯಕರ ಕಾರ್ಯಕಲಾಪ ನಡೆದಿದೆ. ಆ ಪೈಕಿ ಗದ್ದಲ ಹಾಗೂ ಧರಣಿಗಾಗಿ ಒಟ್ಟು 4 ಗಂಟೆ 30 ನಿಮಿಷಗಳನ್ನು ವ್ಯಯ ಆಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮಾಹಿತಿ ನೀಡಿದರು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಒಟ್ಟು 17 ವಿಧೇಯಕಗಳಿಗೆ ವಿಧಾನ ಪರಿಷತ್ತು ತನ್ನ ಸಹಮತಿಯನ್ನು ನೀಡಿದೆ. ಒಂದು ಅಧಿಕೃತ ನಿರ್ಣಯವು ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದರು.
ಈ ಅಧಿವೇಶನದಲ್ಲಿ ಒಟ್ಟು 1219 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ 150 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಿದ್ದು ಅವುಗಳ ಪೈಕಿ 103 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು ಹಾಗೂ 41 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು. ಲಿಖಿತ ಮೂಲಕ ಉತ್ತರಿಸುವ ಒಟ್ಟು 1057 ಪ್ರಶ್ನೆಗಳ ಪೈಕಿ 970 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಗಿದೆ ಎಂದು ತಿಳಿಸಿದರು.
ಕಳೆದ ಅಧಿವೇಶನದಿಂದೀಚೆಗೆ ನಿಧನರಾದ ಒಟ್ಟು 11 ಗಣ್ಯರುಗಳಿಗೆ ಹಾಗೂ ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾಗಿದ್ದ ಗಜರಾಜ ವೀರ ಅರ್ಜುನನಿಗೆ ಸದನವು ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಶೂನ್ಯ ವೇಳೆ ಪ್ರಸ್ತಾವನೆಯ ಒಟ್ಟು 90ಕ್ಕೂ ಅಧಿಕ ಸೂಚನೆಗಳ ಪೈಕಿ 52 ಸೂಚನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಯಿತು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿ, ಉತ್ತರಿಸಲಾಯಿತು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.