ವಿಧಾನಮಂಡಲ ಅಧಿವೇಶನವನ್ನು ಒಂದು ದಿನದ ಕಾಲ ವಿಸ್ತರಣೆ ಮಾಡಲಾಗಿದ್ದು, ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಸಭಾಧ್ಯಕ್ಷ ಯು ಟಿ ಖಾದರ್ ಮುಂದೂಡಿದರು.
ಅಧಿವೇಶನವನ್ನು ಮುಂದೂಡುವ ತೀರ್ಮಾನವನ್ನು ಕಾರ್ಯ ಕಲಾಪಗಳ ಸಲಹಾ ಸಮಿತಿ ಸಭೆ (ಬಿಎಸಿ)ಯಲ್ಲಿ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನ ಕೈಕೊಳ್ಳಲಾಗಿದೆ.
ಗುರುವಾರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬಜೆಟ್ ಮೇಲೆ ಭಾಷಣ ಮಾಡಿದ್ದರು. ಇನ್ನು ಹಲವು ನಾಯಕರು ಬಜೆಟ್ ಮೇಲೆ ಭಾಷಣ ಮಾಡಬೇಕಿದೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮೇಲೆ ಚರ್ಚೆಗೆ ಉತ್ತರ ನೀಡಬೇಕಿತ್ತು. ಆದರೆ ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಮುಂದುವರಿದ ಧರಣಿ
ತೆರಿಗೆ ಅನ್ಯಾಯ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಿರುವುದನ್ನು ವಿರೋಧಿಸಿd ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಮುಂದುವರಿಸಿದರು. ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಂಧಾನಕ್ಕೆ ಯತ್ನಿಸಿದರು.
ಆದರೆ, ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸಂಧಾನ ಯತ್ನ ವಿಫಲವಾಯಿತು. ಪುನಃ ಕಲಾಪ ಆರಂಭವಾದಾಗಲೂ ವಿರೋಧ ಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು. ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಜನರ ಸುರಕ್ಷತೆಗಾಗಿ ರಾಜಧಾನಿಯ 30 ಕಡೆಗಳಲ್ಲಿ ‘ಸೇಫ್ಟಿ ಐಲ್ಯಾಂಡ್’ ವ್ಯವಸ್ಥೆ ಜಾರಿ: ಸಚಿವ ಪರಮೇಶ್ವರ್
ಎರಡು ಮಸೂದೆಗಳ ಅಂಗೀಕಾರ
ಗದ್ದಲದ ಮಧ್ಯದಲ್ಲೇ ಎರಡು ವರದಿಗಳ ಮಂಡನೆ ಮತ್ತು ಎರಡು ಮಸೂದೆಗಳ ಅಂಗೀಕಾರ ಆಯಿತು. ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಪ್ರತಿ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮನವಿ ಮಾಡಿದರು. ಸ್ಪೀಕರ್ ಒಪ್ಪಲಿಲ್ಲ. ಗದ್ದಲದ ಮಧ್ಯೆಯೇ ತಾವು ತಂದಿದ್ದ ನಿರ್ಣಯದ ಕರಡನ್ನು ಅಶೋಕ ಓದಿದರು. ಗದ್ದಲ ಮತ್ತಷ್ಟು ಜೋರಾಗುತ್ತಿದ್ದಂತೆ ಸ್ಪೀಕರ್ ಸದನದ ಕಲಾಪವನ್ನು ಸೋಮವಾರ ಬೆಳಿಗ್ಗೆ 9.30ಕ್ಕೆ ಮುಂದೂಡಿದರು.
ರಾಜ್ಯಸಭಾ ಚುನಾವಣೆ; ರೆಸಾರ್ಟ್ ರಾಜಕೀಯ
ಮಂಗಳವಾರ ರಾಜ್ಯಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸೋಮವಾರವೇ ಅಧಿವೇಶನವನ್ನು ಮುಗಿಸಬೇಕಾಗಿದೆ. ಬಜೆಟ್ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಸೋಮವಾರ ಉತ್ತರ ನೀಡಲಿದ್ದಾರೆ. ಬಳಿಕ ಅನಿರ್ದಿಷ್ಟಾವಧಿಗಳ ಕಾಲ ಸದನ ಮುಂದೂಡಲಿದೆ.
ರಾಜ್ಯಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಸೋಮವಾರವೇ ರೆಸಾರ್ಟ್ ಸೇರಲಿದ್ದಾರೆ. ಅಧಿವೇಶನ ಮುಗಿದ ಬಳಿಕ ಅವರು ರೆಸಾರ್ಟ್ಗೆ ತೆರಳಲಿದ್ದಾರೆ. ಈ ನಿಟ್ಟಿನಲ್ಲಿ ಬಹುತೇಕ ಮಧ್ಯಾಹ್ನವೇ ಅಧಿವೇಶನ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.
