ಜಾರ್ಖಂಡ್ನ ಸಂತಾಲ್ ಪರಗಣದ ಮೂರು ಲೋಕಸಭಾ ಸ್ಥಾನಗಳ ಚುನಾವಣೆ ನಡೆಯುತ್ತಿದ್ದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಧ್ಯಕ್ಷ ಶಿಬು ಸೊರೇನ್ ಅವರ ಇಬ್ಬರು ಸೊಸೆಯಂದಿರ ನಡುವೆ ಲೋಕಸಭೆ ಚುನಾವಣೆ ಜಿದ್ದಾಜಿದ್ದಿ ನಡೆಯುತ್ತಿದೆ.
ಜೆಎಂಎಂನ ಭದ್ರಕೋಟೆಯನ್ನು ಮುರಿದು ಹಾಕಲು ಬಿಜೆಪಿ ಸರ್ವಪ್ರಯತ್ನ ಮಾಡುತ್ತಿದೆ. ಜಾರಿ ನಿರ್ದೇಶನಾಲಯವು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ನಂತರ ಜೆಎಂಎಂ ಅನ್ನು ದುರ್ಬಲಗೊಳಿಸಿ ಬಿಜೆಪಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಇದನ್ನು ಓದಿದ್ದೀರಾ? ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ನಾದಿನಿ ಬಿಜೆಪಿ ಸೇರ್ಪಡೆ
ದುಮ್ಕಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸೊರೇನ್ ಕುಟುಂಬದ ಹೊರಗಿನವರನ್ನು ಜೆಎಂಎಂ ಕಣಕ್ಕಿಳಿಸಿದೆ. ಶಿಬು ಸೊರೇನ್ ಅವರ ಸೊಸೆ ಸೀತಾ ಸೊರೇನ್ ಅವರು ಬಿಜೆಪಿ ಟಿಕೆಟ್ನಿಂದ ಜೆಎಂಎಂನ ನಳಿನ್ ಸೊರೇನ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ನಳಿನ್ ಸೊರೇನ್ ಅವರು ದುಮ್ಕಾದಿಂದ ಸ್ಪರ್ಧಿಸಿದ್ದರೂ ಕೂಡಾ ಸೊಸೆಯಂದಿರು ಕಲ್ಪನಾ ಸೊರೇನ್ ಮತ್ತು ಸೀತಾ ಸೊರೇನ್ ನಡುವೆ ನಿಜವಾದ ಸ್ಪರ್ಧೆ ನಡೆಯುತ್ತಿದೆ.
ಪತಿಯ ಅನುಪಸ್ಥಿತಿಯಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ಅವರು ಸ್ಟಾರ್ ಪ್ರಚಾರಕರಾಗಿದ್ದಾರೆ. ಸಂತಾಲ್ ಪರಗಣದಲ್ಲಿ ಮಾತ್ರ 15ಕ್ಕೂ ಹೆಚ್ಚು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇದನ್ನು ಓದಿದ್ದೀರಾ? ಭೂಹಗರಣ ಪ್ರಕರಣ | ಫೆ.22ರವರೆಗೆ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ಗೆ ನ್ಯಾಯಾಂಗ ಬಂಧನ
ಮೂರು ಅವಧಿಯ ಜೆಎಂಎಂ ಶಾಸಕಿ ಸೀತಾ ಸೊರೆನ್ ಅವರು ತಮ್ಮ ಪತಿ ನಿಧನವಾದ ನಂತರ ಜೆಎಂಎಂನಲ್ಲಿ ತನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಜೆಎಂಎಂ ತೊರೆದು ಬಿಜೆಪಿ ಸೇರಿದ್ದಾರೆ. ಇದಾದ ಒಂದು ದಿನದಲ್ಲೇ ಕಲ್ಪನಾ ಸೊರೇನ್ ‘ಎಕ್ಸ್’ ಪೋಸ್ಟ್ನಲ್ಲಿ “ತಲೆ ಬಾಗುವುದು ಜಾರ್ಖಂಡ್ ಜನರ ಡಿಎನ್ಎಯಲ್ಲಿಲ್ಲ” ಎಂದು ಬರೆದುಕೊಂಡಿದ್ದಾರೆ. ಅಂದಿನಿಂದ ಸೊಸೆಯಂದಿರ ನಡುವೆ ಜಿದ್ದಾಜಿದ್ದಿ ಆರಂಭವಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಾಬುಲಾಲ್ ಮರಾಂಡಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿದ್ದಾರೆ. ದುಮ್ಕಾದಲ್ಲಿ ಸೀತಾ ಸೋರೆನ್, ಗೊಡ್ಡಾದಲ್ಲಿ ನಿಶಿಕಾಂತ್ ದುಬೆ ಮತ್ತು ರಾಜಮಹಲ್ನಲ್ಲಿತಾಲಾ ಮರಾಂಡಿ ಪರವಾಗಿ ಬಾಬುಲಾಲ್ ಮರಾಂಡಿ ಪ್ರಚಾರ ನಡೆಸಿದ್ದಾರೆ.
ದುಮ್ಕಾದಲ್ಲಿ ಬಾಬುಲಾಲ್ ಮರಾಂಡಿ ಅವರು 1998 ಮತ್ತು 1999ರಲ್ಲಿ ಶಿಬು ಸೊರೆನ್ ಅವರನ್ನು ಸೋಲಿಸಿ ಸಂತಾಲ್ ಪರಗಣದಲ್ಲಿ ತಮ್ಮನ್ನು ತಾವು ಬುಡಕಟ್ಟು ನಾಯಕರನ್ನಾಗಿಸಿದದಾರೆ. ಹೀಗಾಗಿ ಈ ಚುನಾವಣೆ ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ.