- 2023ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನ
- ಗಾಂಧಿ ಜನ್ಮದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ
ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಎಂಬ ಹಿರಿಮೆ ಹೊಂದಿರುವ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು 2023ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನವಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನ ಅಕ್ಟೋಬರ್ 2ರಂದು ಸಂಜೆ 4.30 ಕ್ಕೆ ನಗರದ ಭಗವಾನ್ ಮಹಾವೀರ (ಇನ್ಫೆಂಟ್ರಿ) ರಸ್ತೆಯ ವಾರ್ತಾ ಸೌಧದ ಸುಲೋಚನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ ಐದು ಲಕ್ಷ ರೂಪಾಯಿ ನಗದು ಒಳಗೊಂಡ ರಾಜ್ಯ ಸರ್ಕಾರದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.
ಗರಗ ಕ್ಷೇತ್ರೀಯ ಸೇವಾ ಸಂಘದ ಹಿನ್ನೆಲೆ
ಧಾರವಾಡದಿಂದ 17 ಕಿ.ಮಿ.ದೂರದ ಗರಗ ಗ್ರಾಮಮದಲ್ಲಿರುವ ಗರಗ ಕ್ಷೇತ್ರೀಯ ಸೇವಾ ಸಂಘ ಹಲವು ದಶಕಗಳಿಂದ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಇತ್ತೀಚೆಗೆ ರಾಷ್ಟ್ರಧ್ವಜ ತಯಾರಿಸುವ ಪರವಾನಗಿಯನ್ನು ಕೂಡ ಪಡೆದಿದೆ.
ಇದುವರೆಗೆ ಖಾದಿ ಗ್ರಾಮೋದ್ಯೋಗ ಆಯೋಗದ ಪ್ರಮಾಣಿತ ಗರಗ ಕೇಂದ್ರದಲ್ಲಿ ತಿರಂಗಾಕ್ಕೆ ಬಟ್ಟೆ ತಯಾರು ಮಾಡಿ ಬಣ್ಣಕ್ಕಾಗಿ ಮುಂಬೈಯ ಖಾದಿ ಡೈಯರ್ ಆಂಡ್ ಪ್ರಿಂಟರ್ಗೆ ಕಳುಹಿಸಿ, ಅಲ್ಲಿಂದ ವರ್ಣಮಯಗೊಂಡು ಸಿದ್ಧವಾಗುತ್ತಿದ್ದ ರಾಷ್ಟ್ರಧ್ವಜಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. 2023 ರ ಜೂನ್ 3 ರಂದು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) 2:3 ಅಡಿ ತ್ರಿವರ್ಣ ಧ್ವಜ ತಯಾರಿಕೆಗೆ ಅನುಮತಿ ನೀಡಿದೆ. ಇದರಿಂದಾಗಿ ಗರಗ ಕೇಂದ್ರದಲ್ಲಿಯೇ ನೂಲುವುದು, ನೇಯುವುದು, ಬಟ್ಟೆ ತಯಾರಿಕೆ ಜೊತೆಗೆ ಬಣ್ಣಗಳ ಮುದ್ರಣ ಮಾಡುವ ಕಾರ್ಯದೊಂದಿಗೆ ಸಂಪೂರ್ಣ ತಿರಂಗಾ ಧ್ವಜ ಇಲ್ಲಿಯೇ ರೂಪುಗೊಳ್ಳಲಿದೆ.
1956 ರಲ್ಲಿ ಧಾರವಾಡ ತಾಲೂಕು ಸೇವಾ ಸಂಘವೆಂದು ಆರಂಭವಾಗಿ ನಿರಂತರವಾಗಿ ಖಾದಿ ಉತ್ಪನ್ನ ಮತ್ತು ಖಾದಿ ಮಾರಾಟವನ್ನು ಮಾಡುತ್ತಾ ಬರಲಾಗಿದೆ. 1989-90 ರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದವರ ಆದೇಶದಂತೆ ಮಾತೃ ಸಂಘವನ್ನು ನಾಲ್ಕು ಸಣ್ಣ ಸಂಸ್ಥೆಗಳಾಗಿ ವಿಕೇಂದ್ರೀಕರಿಸಲಾಯಿತು. ಅದರಂತೆ ಮಾತೃಸಂಸ್ಥೆ ಧಾರವಾಡ ತಾಲೂಕು ಸೇವಾ ಸಂಘ, ಗರಗ ಕ್ಷೇತ್ರೀಯ ಸೇವಾ ಸಂಘ, ಹೆಬ್ಬಳ್ಳಿ ಕ್ಷೇತ್ರೀಯ ಸೇವಾ ಸಂಘ ಮತ್ತು ಅಮ್ಮಿನಬಾವಿ ಕ್ಷೇತ್ರೀಯ ಸೇವಾ ಸಂಘವೆಂದು ನಾಮಕರಣಗೊಳಿಸಲಾಯಿತು.
ರಾಷ್ಟ್ರಧ್ವಜವನ್ನು ಧಾರವಾಡ ಜಿಲ್ಲೆಯ ಗರಗ, ಹೆಬ್ಬಳ್ಳಿ, ಬೆಂಗೇರಿ ಗ್ರಾಮಗಳಲ್ಲಿ ತಯಾರಿಸಲಾಗುತ್ತದೆ. ರಾಷ್ಟ್ರಧ್ವಜಕ್ಕೆ ಬೇಕಾಗುವ ಖಾದಿ ಬಟ್ಟೆಯನ್ನು ತಯಾರಿಸುವ ಭಾರತದ ಪ್ರಪ್ರಥಮ ಖಾದಿ ಗ್ರಾಮೋದ್ಯೋಗ ಘಟಕ ಇರುವ ಗ್ರಾಮ ಗರಗ. ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ.