ಕೊರೋನ ಸೃಷ್ಟಿಸಿದ್ದ ಭೀಕರ ಅವಧಿಯನ್ನು ಅದೊಂದು ಕನಸು ಮಾತ್ರವೇ ಎಂಬಂತೆ ದೇಶದ ಜನರು ಮರೆತು ಹೋಗಿದ್ದಾರೆ. ಆದರೆ, ಆ ಅವಧಿ ಕೇವಲ ಒಂದು ನೈಸರ್ಗಿಕ ಪ್ರಕೋಪವಾಗಿರಲಿಲ್ಲ. ಇದರಲ್ಲಿ ಮನುಷ್ಯ ನಿರ್ಮಿತ, ರಾಜಕೀಯ ನಿರ್ಮಿತ, ಆಳುವವರ ನಿರ್ಲಜ್ಜ ಬೇಜವಾಬ್ದಾರಿತನ ಲೂಟಿ ಹಾಗೂ ದುಷ್ಟತನಗಳ ಹಲವು ಆಯಾಮಗಳಿದ್ದವು. ಮತ್ತೆ ಅವೆಲ್ಲವೂ ನೆನಪಾದದ್ದು ಕನ್ನಡದ ಯುವ ಚಿಂತನಶೀಲ ನಿರ್ದೇಶಕ ಹೊರತಂದಿರುವ ‘ಫೋಟೋ’ ಎಂಬ ಚಲನಚಿತ್ರದಿಂದ….
ಇತ್ತೀಚೆಗೆ, ಕನ್ನಡದ ‘ಫೋಟೋ’ ಸಿನಿಮಾ ನೋಡಿದೆ. ಆದರೆ, ನಾನಿಲ್ಲಿ ಸಿನಿಮಾದ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ, ಆ ಸಿನಿಮಾ ನೆನಪಿಸಿದ, ಕೊರೋನ ಎಂಬ ದುರಿತ ಕಾಲದ ಬಗ್ಗೆ ಮಾತನಾಡುತ್ತಿದ್ದೇನೆ. ಅಂದಹಾಗೆ, ನಾವು ಈ ದುರಿತ ಕಾಲವನ್ನು ಎದುರಿಸಲು ಆರಂಭಿಸಿ 10 ವರ್ಷಗಳೇ ಆಗಿವೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಸರ್ಕಾರ ರಚಿಸಿದಾಗಲೇ, ದೇಶಕ್ಕೆ ದುರಿತ ಕಾಲ ಆರಂಭವಾಗಿತ್ತು. ಅಂತಹ ಕಾಲವನ್ನು ಮತ್ತಷ್ಟು ಭೀಕರಗೊಳಿಸಿದ್ದು, ಕೊರೋನ ಸೋಂಕಿನ 3 ಅಲೆಗಳು.
ದೇಶದಲ್ಲಿ ಈವರೆಗೆ ಸರಿಸುಮಾರು 30ರಿಂದ 50 ಲಕ್ಷ ಜನರು ಕೊರೋನಗೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಅಂದಾಜಿಸಿದೆ. ಆದರೆ, ಕೇಂದ್ರ ಸರ್ಕಾರ ಮಾತ್ರ, 5.33 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಂಡಿದೆ. ಅಂದರೆ, ಡಬ್ಲ್ಯೂಎಚ್ಒ ಅಂದಾಜಿಗೂ ಕೇಂದ್ರದ ಅಂಕಿಅಂಶಕ್ಕೂ ಕನಿಷ್ಠ ಐದಾರು ಪಟ್ಟು ವ್ಯತ್ಯಾಸವಿದೆ. ಇನ್ನು, ಜನರು ಆರಂಭದಲ್ಲಿ ಕೊರೋನ ಸೋಂಕಿಗಿಂತ ಲಾಕ್ಡೌನ್ ಎಂಬ ಭೂತದಿಂದಲೇ ಹೆಚ್ಚು ತತ್ತರಿಸಿ ಹೋಗಿದ್ದರು ಎಂಬುದು ಮರೆಯಲಾಗದ ವಿಚಾರ.
ವಲಸೆ ಕಾರ್ಮಿಕರನ್ನು ಬಲಿ ಪಡೆದ ಲಾಕ್ಡೌನ್ ಭೂತ
ಆರಂಭದಲ್ಲಿ, ದೇಶದಲ್ಲಿ ಕೊರೋನ ಕಾಣಿಸಿಕೊಂಡಾಗ, ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇನ್ನು, ಮಾಧ್ಯಮಗಳಂತೂ ತಬ್ಲಿಗಿಗಳೇ ಕೊರೋನ ಹರಡಲು ಕಾರಣವೆಂದು ಬೊಬ್ಬೆ ಹೊಡೆದು, ಸಮುದಾಯಗಳ ನಡುವೆ ದ್ವೇಷ ಬಿತ್ತುವಲ್ಲಿ ನಿರತವಾಗಿದ್ದವು. ಕೊರೋನದ ಹರಡುವಿಕೆ ಹೆಚ್ಚಾದಂತೆ, ಪ್ರಧಾನಿ ಮೋದಿ ಅವರ ಸರ್ಕಾರ, ಜನತಾ ಕರ್ಫ್ಯೂ ಹೇರಿತು. ಆ ನಂತರ, ಇದ್ದಕ್ಕಿದ್ದಂತೆ ಕ್ಯಾಮೆರಾ ಮುಂದೆ ಬಂದ ಮೋದಿ ಅವರು 2020ರ ಮಾರ್ಚ್ 24ರಿಂದ 21 ದಿನಗಳ ಕಾಲ ದಿಢೀರ್ ಲಾಕ್ಡೌನ್ ಹೇರಿದರು. ಕೊರೋನ ಹೆಚ್ಚಾಗುತ್ತಿದ್ದರೂ ಚುನಾವಣಾ ಪ್ರಚಾರವನ್ನಾಗಲೀ, ಟ್ರಂಪ್ ಬಂದ ನೆಪದಲ್ಲಿ ಬೃಹತ್ ನಮಸ್ತೆ ಟ್ರಂಪ್ ಕಾರ್ಯಕ್ರಮವನ್ನು ನಿಲ್ಲಿಸದೇ ಇದ್ದ ನರೇಂದ್ರ ಮೋದಿಯವರು ಇದ್ದಕ್ಕಿದ್ದಂತೆ ಇಡೀ ದೇಶವನ್ನು ಸ್ತಬ್ಧಗೊಳಿಸಿದರು.
ಲಾಕ್ಡೌನ್ ಜಾರಿಗೂ ಮುಂಚೆ ಇದ್ದ 4 ಗಂಟೆಗಳ ಕಾಲಾವಕಾಶದಲ್ಲಿ ಜನರು ತಮ್ಮೂರುಗಳಿಗೆ ಓಡಲಾರಂಭಿಸಿದರು. ಆದರೆ, ಎಲ್ಲಿ ಹೋಗುವುದೆಂದು ಅರಿಯದೆ, ಸಂಕಷ್ಟಕ್ಕೆ ಸಿಲುಕಿದ್ದರು. ಲಾಕ್ಡೌನ್ ಹೇರಿದ ಸರ್ಕಾರ ವಲಸೆ ಕಾರ್ಮಿಕರಿಗೆ, ನಿರ್ಗತಿಕರಿಗೆ, ನಿರಾಶ್ರಿತರಿಗೆ ಯಾವುದೇ ಸೌಲಭ್ಯಗಳನ್ನು ಒದಗಿಸಲಿಲ್ಲ. ಎಲ್ಲರಿಗೂ ಮೂಲಸೌಕರ್ಯ ದೊರೆಯುವಂತೆ ಮಾಡಲು ಯಾವುದೇ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ.
ಪರಿಣಾಮವಾಗಿ, ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ನಡೆದೇ ಹೊರಟರು. ಸಾವಿರಾರು ಕಿ.ಮೀಗಳನ್ನು ದೂರದ ತಮ್ಮ ರಾಜ್ಯ, ಊರುಗಳಿಗೆ ಬರಿಗಾಲಿನಲ್ಲಿ, ಹಸಿದ ಹೊಟ್ಟೆಯಲ್ಲಿ, ಪುಟ್ಟ ಕಂದಮ್ಮಗಳನ್ನು ಹೊತ್ತು ಕಾರ್ಮಿಕರು ರಸ್ತೆಯಲ್ಲಿ ನಡೆದರು. ಹಲವಾರು ದಿನಗಳು ರಸ್ತೆಯಲ್ಲೇ ಬದುಕಿದರು. ಸಂಕಷ್ಟದ ಹಾದಿಯಲ್ಲಿ ನೂರಾರು ಕಾರ್ಮಿಕರು ಹಾದಿ ನಡುವೆಯೇ ದುರಂತವಾಗಿ ಅಂತ್ಯ ಕಂಡರು.
ರಸ್ತೆಯಲ್ಲಿ ನಡೆದು ಹೊರಟವರ ಮೇಲೆ ಪೊಲೀಸರು ದರ್ಪ ಮೆರೆದರು. ಕಾರ್ಮಿಕರನ್ನು ಅಮಾನವೀಯವಾಗಿ ಥಳಿಸಿದರು. ಕಾರ್ಮಿಕರ ಮೇಲೆ ಹಲ್ಲೆ ಮಾಡದೆ, ಅವರು ಸುರಕ್ಷಿತವಾಗಿ ಕಳಿಸುವಂತೆ ಪೊಲೀಸರಿಗೆ ಸರ್ಕಾರ ಸೂಚನೆ ನೀಡಬಹುದಿತ್ತು. ಆದರೆ ಅಂತಹ ಯಾವುದೇ ಮಾತುಗಳನ್ನು ಸರ್ಕಾರ ಆಡಲಿಲ್ಲ.
ಅಂಕಿಅಂಶಗಳ ಪ್ರಕಾರ, ನಡೆದು ಹೊರಟಿದ್ದ ಹಾದಿಯಲ್ಲಿ ಸುಮಾರು 971 ಮಂದಿ ಕಾರ್ಮಿಕರು ಹಸಿವು, ಬಳಲಿಕೆ, ಅಪಘಾತದಲ್ಲಿ ಸಾವನ್ನಪ್ಪಿದರು. ಆದರೆ, ಕೇಂದ್ರ ಸರ್ಕಾರ, ವಲಸೆ ಕಾರ್ಮಿಕರ ಸಾವಿನ ಅಂಕಿಅಂಶವನ್ನೇ ನಾವು ನಿರ್ವಹಿಸಿಲ್ಲವೆಂದು ಹೇಳಿತು.
ಸಾವನ್ನಪ್ಪಿದ ಕಾರ್ಮಿಕರಲ್ಲಿ, ಮಹಾರಾಷ್ಟ್ರದ ಔರಂಗಾಬಾದ್ ಬಳಿ ರೈಲ್ವೆ ಹಳಿಗಳ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ 16 ಮಂದಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು, ಅವರ ಮೃತದೇಹಗಳು ಛಿದ್ರವಾಗಿ ಬಿದ್ದಿದ್ದವು. ರೈಲ್ವೆ ಹಳಿಗಳ ಮೇಲೆ ಮಲಗಿದ್ದು, ಕಾರ್ಮಿಕರದ್ದೇ ತಪ್ಪು, ಅವರು ಪರಿಹಾರಕ್ಕೆ ಅರ್ಹರಲ್ಲವೆಂದು ರೈಲ್ವೆ ಇಲಾಖೆ ಹೇಳಿತು.
ಉತ್ತರ ಪ್ರದೇಶದಲ್ಲಿ 2020ರ ಮೇ 16ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಸಾವನ್ನಪ್ಪಿದರು. 47 ಕಾರ್ಮಿಕರು ಆಯಾಸದಿಂದ ರಸ್ತೆಯ ನಡುವೆ ಪ್ರಾಣ ಬಿಟ್ಟರು. ಆಹಾರವಿಲ್ಲದೆ, ಹಸಿವಿನಿಂದ 96 ಮಂದಿ ಕಾರ್ಮಿಕರು ಅಸುನೀಗಿದರು. ಇನ್ನು, ಶ್ರಮಿಕ್ ರೈಲಿನಲ್ಲಿ ತೆರಳುವಾಗ, ರೈಲಿನಲ್ಲೇ 80ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಜೀವ ತೆತ್ತರು.
ಇವಷ್ಟೇ ಅಲ್ಲದೆ, ಕೆಲವೆಡೆ ನಡೆದು ಹಳ್ಳಿಗಳಿಗೆ ಹೋದ ವಲಸೆ ಕಾರ್ಮಿಕರನ್ನು ನಡು ರಸ್ತೆಯಲ್ಲಿ ಕೂರಿಸಿ, ಅವರ ಮೇಲೆ ಸ್ಥಳೀಯ ಆಡಳಿತಗಳು ಕೀಟನಾಶಕಗಳನ್ನು ಸಿಂಪಡಿಸಿ ಅಮಾನವೀಯತೆ ಮೆರೆದವು. ಇವು, ಅಂದು ದೇಶವೇ ಕಣ್ಣೀರು ಹಾಕಿದ್ದ ಕೆಲವು ಘಟನೆಗಳು.
ವಲಸೆ ಕಾರ್ಮಿಕರು ಸಂಕಷ್ಟ, ಹಸಿವು, ಬಾಯಾರಿಕೆಯಿಂದ ಬಳಲುತ್ತಿದ್ದಾಗ, ಪ್ರಾಣ ಕಳೆದುಕೊಳ್ಳುತ್ತಿದ್ದಾಗ, ಪ್ರಧಾನಿ ಮೋದಿ ಅವರು ತಟ್ಟೆ, ಲೋಟ ಹಿಡಿದು ಗಂಟೆ ಬಾರಿಸಿ, ದೀಪ ಹಚ್ಚಿ ಕೊರೋನ ಓಡಿಸಿ ಎಂಬ ಉಡಾಫೆ ಕರೆ ಕೊಡುತ್ತಾ, ತಮಾಷೆ ನೋಡುತ್ತಿದ್ದರು.
ಕಾರ್ಮಿಕರ ಸಂಕಷ್ಟವನ್ನು ಕಂಡು ನಟ ಸೋನು ಸೂದ್ ರಂತಹ ಕೆಲವು ಮಾನವೀಯ ಜೀವಗಳು ಮರುಗಿದವು. ತಮ್ಮ ಹಣದಿಂದ ಬಸ್ ವ್ಯವಸ್ಥೆ ಮಾಡಿ, ಕಾರ್ಮಿಕರು ತಮ್ಮೂರುಗಳಿಗೆ ತಲುಪಲು ನೆರವಾದರು. ಆದರೆ, ಸರ್ಕಾರದ ಮನಸ್ಸು ಮಾತ್ರ ಕರಗಲಿಲ್ಲ. ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕ, ಶ್ರಮಿಕ್ ರೈಲುಗಳನ್ನು ಸರ್ಕಾರ ಆರಂಭಿಸಿತು. ಆದರೆ, ಆ ವೇಳೆಗಾಗಲೇ ಬಹುತೇಕ ಕಾರ್ಮಿಕರು ತಮ್ಮೂರು ತಲುಪಿದ್ದರು.
ಬೀದಿ ಶವವಾಗಿ ನದಿಗಳಲ್ಲಿ ತೇಲಿದ ಮೃತದೇಹಗಳು
ಕೊರೋನ ಮೊದಲ ಅಲೆಯಲ್ಲಿ ಕೊರೋನದಿಂದ ಜನರು ಹೆಚ್ಚು ಸಂಕಷ್ಟ ಅನುಭವಿಸದೇ ಇದ್ದರೂ, ಲಾಕ್ಡೌನ್ನಿಂದ ತೀವ್ರ ಕಷ್ಟಗಳನ್ನು ಎದುರಿಸಿದ್ದರು. ಆದರೆ, ಎರಡನೇ ಅಲೆಯು ದೇಶದಲ್ಲಿ ಮಾರಣಹೋಮವನ್ನೇ ನಡೆಸಿತು. ಆಮ್ಲಜನಕ ಕೊರತೆಯಿಂದಾಗಿ ಲಕ್ಷಾಂತರ ಜನರು ಸಾವನ್ನಪ್ಪಿದರು. ಆಮ್ಲಜನಕ ಪೂರೈಕೆ ಮಾಡುವ ಪೈಪ್ ಕೆಟ್ಟಿದ್ದರಿಂದ, ಆಮ್ಲಜನಕ ದೊರೆಯದ ಕಾರಣ, ವೆಂಟಿಲೇಟರ್ಗಳು ಲಭ್ಯವಾಗದ ಕಾರಣ ಜನರು ಜೀವ ಕಳೆದುಕೊಂಡರು.
ಕರ್ನಾಟಕದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ಪೂರೈಕೆಯಾಗದ ಕಾರಣ ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನ 24 ಕೊರೋನ ರೋಗಿಗಳು ಸಾವನ್ನಪ್ಪಿದರು. ಆಗಲೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮವಾಗಿ, ಆಮ್ಲಜನಕದ ಕೊರತೆ ಎಲ್ಲೆಡೆ ವ್ಯಾಪಿಸಿತು.
ಕೊರೋನ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯಲಿಲ್ಲ. ಕೊರೋನದಿಂದ ಸಾವನ್ನಪ್ಪಿದವರಿಗೆ ಸ್ಮಶಾನದಲ್ಲಿ ಜಾಗವೂ ದೊರೆಯಲಿಲ್ಲ. ಎಲ್ಲ ಚಿತಾಗಾರಗಳ ಬಳಿ ಆಂಬುಲೆನ್ಸ್ಗಳು ಮೃತದೇಹಗಳನ್ನು ಹೊತ್ತು ನಿಂತಿದ್ದವು.
ಇನ್ನು, ಉತ್ತರ ಪ್ರದೇಶದಲ್ಲಂತೂ, ಗಂಗಾ ನದಿಯ ತೀರದಲ್ಲಿ ಕೊರೋನ ಸೋಂಕಿತ ಮೃತ ದೇಹಗಳನ್ನು ಮರಳಿನಲ್ಲಿ ಹೂಳಲಾಗಿತ್ತು. ಆ ಮೃತದೇಹಗಳು ನದಿಯ ನೀರಿನಲ್ಲಿ ತೇಲುತ್ತಿದ್ದವು. ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳ ಕೊರತೆಯ ಬಗ್ಗೆ ಮಾತನಾಡಿದ್ದಕ್ಕಾಗಿ, ತಾನೇ ಸ್ವಂತ ಖರ್ಚಿನಲ್ಲಿ ಆಮ್ಲಜನಕ ಒದಗಿಸಿ ಮಕ್ಕಳ ಜೀವಿ ಉಳಿಸಿದ್ದ ಡಾ. ಕಫಿಲ್ ಖಾನ್ ಅವರು ಮುಸ್ಲಿಮರೆಂಬ ಕಾರಣದಿಂದ ಜೈಲಿಗಟ್ಟಲಾಯಿತು.
ಅಲ್ಲದೆ, ಹಲವು ರಾಜ್ಯಗಳಲ್ಲಿ ಕೋವಿಡ್ ಕಿಟ್ ಖರೀದಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ, ಹಗರಣಗಳೂ ನಡೆದವು. ಹಾಗೆಯೇ ಜನರು ಬೀದಿಗಳಲ್ಲಿ ಸತ್ತು, ಹೆಣವಾದರು.
ಆತ್ಮ ನಿರ್ಭರದ 20 ಲಕ್ಷ ಕೋಟಿ ರೂ. ಏನಾಯಿತು?
ಕೊರೋನ ಸಂದರ್ಭದ ಆರ್ಥಿಕ ಕುಸಿತ ತಡೆಯಲು ವಿವಿಧ ದೇಶಗಳು ಹಲವು ಆರ್ಥಿಕ ಪ್ಯಾಕೇಜ್ ಘೋಷಿಸಿದ್ದವು. ಯಾವೆಲ್ಲಾ ದೇಶಗಳು ಆ ನಿಟ್ಟಿನಲ್ಲಿ ಅರ್ಥಶಾಸ್ತ್ರಜ್ಞರ ನೆರವಿನಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಂಡವೋ ಅವೆಲ್ಲವೂ ಅಷ್ಟೇನೂ ಆರ್ಥಿಕ ಹಿಂಜರಿತ ಇಲ್ಲದೇ ಸದೃಢವಾಗಿದ್ದವು. ಭಾರತವೂ ಇದನ್ನು ಮಾಡಬೇಕೆಂದು ಪದೇ ಪದೆ ಒತ್ತಾಯ ಬಂದ ಎಷ್ಟೋ ಕಾಲದ ನಂತರ ಪ್ರಧಾನಿ ಮೋದಿ ಅವರು 2020ರ ಮೇ 21ರಂದು 20 ಲಕ್ಷ ಕೋಟಿಯ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದರು. ಲಾಕ್ಡೌನ್ನಿಂದ ತತ್ತರಿಸಿದ್ದ ಬೀದಿಬದಿ ವ್ಯಾಪಾರಿ, ತೆರಿಗೆ ಪಾವತಿಸುವ ಮಧ್ಯಮ ವರ್ಗ, ಕಾರ್ಖಾನೆಗಳು, ಕುಶಲಕರ್ಮಿಗಳಿಗೆ ಈ ಪ್ಯಾಕೇಜ್ ಮೂಲಕ ನೆರವು, ಸಾಲ ನೀಡಲಾಗುತ್ತದೆ ಎಂದು ಘೋಷಿಸಿದ್ದರು.
ಆದರೆ, ಅಗಿದ್ದೇನು? ಬಡವರಿಗೆ ಯಾವುದೇ ಪ್ರಯೋಜವೂ ಆಗಲಿಲ್ಲ. 20 ಲಕ್ಷ ಕೋಟಿ ರೂ.ಗಳಲ್ಲಿ ಬೀದಿಯಲ್ಲಿ ನಡೆದು ಹೋದ, ಹಾದಿಯಲ್ಲೇ ಪ್ರಾಣಬಿಟ್ಟ ವಲಸೆ ಕಾರ್ಮಿಕರಿಗೆ ಅಥವಾ ಅವರ ಕುಟುಂಬಸ್ಥರಿಗೆ ಯಾವುದೇ ಪರಿಹಾರ ದೊರೆಯಲಿಲ್ಲ. ನೆರವೂ ಸಿಗಲಿಲ್ಲ. ಬೀದಿ ಬದಿ ವ್ಯಾಪಾರಿಗಳಿಗೆ, ಸಣ್ಣ ಉದ್ಯಮಗಳಿಗೂ ಯಾವ ಪ್ರಯೋಜನವೂ ಆಗಲಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ, ಬಾಡಿಗೆದಾರರು, ಕೃಷಿ ಮತ್ತು ಸಣ್ಣ ಉದ್ಯಮಕ್ಕಾಗಿ ಸಾಲ ಮಾಡಿದ್ದವರ ಬಡ್ಡಿಯನ್ನೂ ಕೂಡ ಸರ್ಕಾರ ಮನ್ನಾ ಮಾಡಲಿಲ್ಲ. 2/3 ತಿಂಗಳಷ್ಟೇ ಬಡ್ಡಿ ಪಾವತಿಯನ್ನು ಮುಂದೂಡಿತು. ಆದರೂ, ಸಾಲ ಕೊಟ್ಟವರು ಬಡ್ಡಿ-ಅಸಲು ಪಾವತಿಗಾಗಿ ಸಾಲಗಾರರ ಮೇಲೆ ದಬ್ಬಾಳಿಕೆ ನಡೆಸಿದರು.
ಇನ್ನೊಂದು ಅಸಲಿ ವಿಚಾರ ಅಂದರೆ, ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಎಂದು ಪ್ಯಾಕೇಜ್ ಘೋಷಿಸಿದರೂ, ಅದರ ಅಸಲಿ ಮೊತ್ತ 10.25 ಲಕ್ಷ ಕೋಟಿ ರೂ.ಗಳಾಗಿದ್ದವು. ಇದು, ದೇಶದ ಜಿಡಿಪಿಯ 10%ರಷ್ಟು ಎಂದು ಬಿಜೆಪಿ ಸರ್ಕಾರ ಜಾಹೀರಾತು ನೀಡಿತು. ಆದರೆ, ವಾಸ್ತವವಾಗಿ ಅದು ಜಿಡಿಪಿಯ 5% ಮಾತ್ರವೇ ಅಗಿತ್ತು. ಅದರಲ್ಲೂ ಜನರ ಕೈಗೆ ನೇರವಾಗಿ ತಲುಪಿದ ಹಣ 85,000 ಕೋಟಿ ರೂ.ಗಳಾಗಿದ್ದವು. ಒಂದು ರೀತಿಯಲ್ಲಿ ಜನರ ಬದುಕನ್ನು ಅಪಹಾಸ್ಯ ಮಾಡುತ್ತಲೇ ಆರ್ಥಿಕ ಪ್ಯಾಕೇಜಿನ ಪ್ರಹಸನ ನಡೆದು ಹೋಯಿತು.
ಈ ಪ್ಯಾಕೇಜ್ ಘೋಷಣೆಯನ್ನು ವಿಪಕ್ಷಗಳು ‘ಜುಮ್ಲಾ’ ಎಂದು ಕರೆದವು. ಅಂದಹಾಗೆ, 2020ರಲ್ಲಿ ಬೃಹತ್ ಮೊತ್ತದ ಪ್ಯಾಕೇಜ್ ಘೋಷಿಸಿದರೂ, ನಂತರದ ದಿನಗಳಲ್ಲಿ ಎದುರಾದ ಕೊರೋನ 2ನೇ ಅಲೆಯನ್ನು ಸರ್ಕಾರ ಸರಿಯಾಗಿ ನಿರ್ವಹಿಸಲಿಲ್ಲ. ಆಮ್ಲಜನಕ ಖರೀದಿ, ಮಾಸ್ಕ್ ಪೂರೈಕೆ, ವೆಂಟಿಲೇಟರ್ಗಳನ್ನೂ ಖರೀದಿಸಲಿಲ್ಲ. ಜನರ ನೆರವಿಗೆ ಬರಲಿಲ್ಲ.
ಪಿಎಂ ಕೇರ್ಸ್ ಏನಾಯ್ತು?
ಕೊರೋನ ಹೋರಾಟಕ್ಕೆ ಘೋಷಿಸಿದ 20 ಲಕ್ಷ ಕೋಟಿ ರೂ. ಮಾತ್ರವಲ್ಲದೆ, ಮೋದಿ ಅವರು ‘ಪಿಎಂ-ಕೇರ್ಸ್’ ಎಂಬ ನಿಧಿಯನ್ನೂ ತೆರೆದರು. ಕೊರೋನ ವಿರುದ್ಧ ಹೋರಾಟಕ್ಕಾಗಿ ಜನರು ದೇಣಿಗೆ ನೀಡಬೇಕೆಂದು ಕೇಳಿಕೊಂಡರು. ಮಾಹಿತಿಯ ಪ್ರಕಾರ, ‘ಪಿಎಂ-ಕೇರ್ಸ್’ಗೆ ಬರೋಬ್ಬರಿ 12,691.82 ಕೋಟಿ ರೂ. ಹಣ ಹರಿದುಬಂದಿತು.
ಈ ಮೊತ್ತದಲ್ಲಿ, ಹಣಕಾಸು ವರ್ಷದಲ್ಲಿ ವಿವಿಧ ಕೋವಿಡ್-19 ಸಂಬಂಧಿತ ಯೋಜನೆಗಳಿಗಾಗಿ 2020-21ರಲ್ಲಿ 3,976.17 ಕೋಟಿ ರೂ. ಹಾಗೂ 2021-22ನೇ 3,716.29 ಕೋಟಿ ರೂ.ಗಳನ್ನು ಸರ್ಕಾರ ಖರ್ಚು ಮಾಡಲಾಗಿದೆ. ಅಲ್ಲದೆ 5,415.65 ಕೋಟಿ ರೂ.ಗಳು ಸರ್ಕಾರದ ಬಳಿ ಇದೆ ಎಂದು ವರದಿಯಾಗಿದೆ.
ಆ ಎರಡು ವರ್ಷಗಳಲ್ಲಿ ಖರ್ಚಾಗಿರುವ ಹಣವನ್ನು ವೆಂಟಿಲೇಟರ್ ಖರೀದಿ, ಆಮ್ಲಜನಕ ಘಟಕ ಸ್ಥಾಪನೆ, ಲಸಿಕೆ ಸಂಗ್ರಹ ಹಾಗೂ ಪ್ರಯೋಗಾಲಯಗಳ ನಿರ್ಮಾಣಕ್ಕೆ ವ್ಯಯಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಅಂದಹಾಗೆ, ಪಿಎಂ-ಕೇರ್ಸ್ ಸಾರ್ವಜನಿಕ ನಿಧಿಯಲ್ಲ. ಅದರ ಬಗ್ಗೆ ಮಾಹಿತಿಯನ್ನು ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಎಂದೂ ಇದೇ ಮೋದಿ ಅವರ ಸರ್ಕಾರ ಹೇಳಿಕೊಂಡಿತ್ತು. ಆ ಹಣದ ಮಾಹಿತಿಯನ್ನು ಗೌಪ್ಯವಾಗಿ ಇರಿಸಿತ್ತು. ಇನ್ನೊಂದು ವಿಚಾರ, ಪಿಎಂ-ಕೇರ್ಸ್ನಲ್ಲಿ ಉಳಿಸಿದ್ದ 5,415 ಕೋಟಿ ರೂ. ಏನಾಯಿತು? ಈ ಪ್ರಶ್ನೆಗೆ ಈವರೆಗೆ ಉತ್ತರ ದೊರೆತಿಲ್ಲ.
ರಾಜ್ಯ ಸರ್ಕಾರದ 40,000 ಕೋಟಿ ರೂ. ಹಗರಣ
ಕೊರೋನ ಸಮಯದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ 40,000 ಕೋಟಿ ರೂ. ಹಗರಣ ನಡೆಸಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು.
”45 ರೂ.ಗಳ ಮಾಸ್ಕ್ ಗೆ 485 ರೂಪಾಯಿ ಬಿಲ್ ಹಾಕಿದ್ದಾರೆ. ಬೆಡ್ಗಳಿಗೆ ಒಂದು ದಿನಕ್ಕೆ 10 ಸಾವಿರ ರೂಪಾಯಿ ಬಾಡಿಗೆ ನೀಡಿದ್ದಾರೆ. ಬೆಡ್ಗಳನ್ನು ಖರೀದಿ ಮಾಡಿದ್ರೆ ಒಂದು ದಿನದ ಬಿಲ್ನಲ್ಲಿ ಎರಡು ಬೆಡ್ ಬರ್ತಿದ್ದವು. ಮಾಸ್ಕ್, ಬೆಡ್ಗಳಲ್ಲೂ ಭ್ರಷ್ಟಾಚಾರ ನಡೆದಿದೆ. ವೆಂಟಿಲೇಟರ್ ಖರೀದಿಯಲ್ಲಿಯೂ ದುಪ್ಪಟ್ಟು ಹಣ ನೀಡಲಾಗಿದೆ” ಎಂದು ಆರೋಪಿಸಿದ್ದರು.
ಈ ಹಗರಣದ ಬಗ್ಗೆ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ವರದಿ ನೀಡಿತ್ತು. ಹಗರಣದ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಅದು ಅಲ್ಲಿಯೇ ನಿಂತುಹೋಗಿದೆ.
ಇಡೀ ದೇಶಕ್ಕೆ ದೇಶವೇ ತತ್ತರಿಸಿದ, ಸಾವು-ನೋವುಗಳನ್ನು ಕಂಡ, ಆರ್ಥಿಕ ಸಂಕಷ್ಟ ಎದುರಿಸಿದ ಸಂದರ್ಭದಲ್ಲೇ ಇನ್ನೊಂದು ವಿಸ್ಮಯವೂ ನಡೆದು ಹೋಯಿತು. ಪ್ರಧಾನಿಯವರ ಇಬ್ಬರು ಸ್ನೇಹಿತರಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯವರ ಶ್ರೀಮಂತಿಕೆ ಹಲವು ಪಟ್ಟು ಹೆಚ್ಚಾಯಿತು. ಮೋದಿಯವರ ಪ್ರಾಕ್ಸಿ (ಬೇನಾಮಿ) ಎಂದೇ ಪರಿಗಣಿತವಾಗಿರುವ ಗೌತಮ್ ಅದಾನಿ ವಿಶ್ವದ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರಾದದ್ದು ಇದೇ ಅವಧಿಯಲ್ಲಿ!
ಇಷ್ಟೆಲ್ಲಾ ಭೀಕರವಾಗಿ ನಡೆದು ಹೋದ ಈ ಅವಧಿಯನ್ನು ಅದೊಂದು ಕನಸು ಮಾತ್ರವೇ ಎಂಬಂತೆ ದೇಶದ ಜನರು ಮರೆತು ಹೋದರು. ದುಸ್ವಪ್ನದಲ್ಲೇ ಬದುಕನ್ನು ಕಳೆಯುತ್ತಾ ಹೋಗುವುದು ಯಾರಿಗಾದರೂ ಕಷ್ಟವೇ. ಆದರೆ, ಇದು ಕೇವಲ ಒಂದು ನೈಸರ್ಗಿಕ ಪ್ರಕೋಪವಾಗಿರಲಿಲ್ಲ. ಇದರಲ್ಲಿ ಮನುಷ್ಯ ನಿರ್ಮಿತ, ರಾಜಕೀಯ ನಿರ್ಮಿತ, ಆಳುವವರ ನಿರ್ಲಜ್ಜ ಬೇಜವಾಬ್ದಾರಿತನ ಲೂಟಿ ಹಾಗೂ ದುಷ್ಟತನಗಳ ಹಲವು ಆಯಾಮಗಳಿದ್ದವು. ಮತ್ತೆ ಅವೆಲ್ಲವೂ ನೆನಪಾದದ್ದು ಕನ್ನಡದ ಯುವ ಚಿಂತನಶೀಲ ನಿರ್ದೇಶಕ ಹೊರತಂದಿರುವ ʼಫೋಟೋʼ ಎಂಬ ಚಲನಚಿತ್ರದಿಂದ…
ನೀವಿನ್ನೂ ನೋಡಿರದಿದ್ದರೆ ಒಮ್ಮೆ ನೋಡಿ. ದುಸ್ವಪ್ನವನ್ನೂ ಆಗಾಗ ನೆನೆಯಬೇಕು. ಅದರಲ್ಲೂ ಚುನಾವಣೆ ಸಮೀಪವಿದ್ದಾಗ.