ಎಂಎಸ್ಪಿ ಕುರಿತು ಪದೇ ಪದೇ ಭರವಸೆ ನೀಡಿರುವ ಕೇಂದ್ರ ಸರ್ಕಾರ, ಎಂಎಸ್ಪಿಗೆ ಕಾನೂನು ಖಾತರಿ ನೀಡದೆ ಯಾಕೆ ಓಡಿಹೋಗುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಮೋದಿ ನೇತೃತ್ವದ ಸರ್ಕಾರದ ಮೇಲೆ ರೈತರು ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.
ಪಂಜಾಬ್-ಹರಿಯಾಣ ರೈತರು ದೆಹಲಿಗೆ ಟ್ರ್ಯಾಕ್ಟರ್ ಮೆರವಣಿಗೆ ಹೊರಟಿದ್ದಾರೆ. ಅವರನ್ನು ಹರಿಯಾಣದ ಬಿಜೆಪಿ ಸರ್ಕಾರ ತಡೆದು, ಹಿಂಸಿಸುತ್ತಿದೆ. ರೈತರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ದಾಳಿಯಲ್ಲಿ ಗಾಯಗೊಂಡ ರೈತನೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ. ‘ದೇಶಕ್ಕೆ ಆಹಾರ ನೀಡುತ್ತಿರುವ ರೈತರ ಬಗ್ಗೆ ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ಹೊಂದಿದೆ’ ಎಂದು ಕಿಡಿಕಾರಿದ್ದಾರೆ.
“ಎಂಎಸ್ಪಿ ಬಗ್ಗೆ ಪದೇ ಪದೇ ಭರವಸೆ ನೀಡಿದರೂ, ಎಂಎಸ್ಪಿಗೆ ಕಾನೂನಾತ್ಮಕ ಗ್ಯಾರಂಟಿ ನೀಡದೆ ಮೋದಿ ಸರ್ಕಾರ ಯಾಕೆ ಓಡಿಹೋಗುತ್ತಿದೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
“2011 ರಲ್ಲಿ, ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅಲ್ಲದೆ, ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ವರದಿಯನ್ನು ಸಲ್ಲಿಸಿದ್ದರು. ವರದಿಯಲ್ಲಿ, ‘ರೈತರ ಹಿತಾಸಕ್ತಿಗಳನ್ನು ರಕ್ಷಿಸಲು, ನಾವು ಕಾನೂನು ನಿಬಂಧನೆಗಳ ಮೂಲಕ ಖಾತ್ರಿ ನೀಡಬೇಕು. ರೈತರು ಮತ್ತು ವ್ಯಾಪಾರಿಗಳ ನಡುವೆ ಯಾವುದೇ ವ್ಯವಹಾರವು ಎಂಎಸ್ಪಿಗಿಂತ ಕಡಿಮೆ ಇರಬಾರದು’ ಎಂದಿದ್ದರು. ಆದರೆ, ಈಗ ಅವರದ್ದೇ ಸರ್ಕಾರ ಎಂಎಸ್ಪಿ ನೀಡಲು ಹಿಂದೇಟು ಹಾಕುತ್ತಿದೆ” ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
“2014ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿಯವರು ತಮ್ಮ ಅನೇಕ ಭಾಷಣಗಳು ಮತ್ತು ಚುನಾವಣಾ ರ್ಯಾಲಿಗಳಲ್ಲಿ, ‘ಸ್ವಾಮಿನಾಥನ್ ಸಮಿತಿಯ ಸೂತ್ರದ ಪ್ರಕಾರ ಎಲ್ಲ ವೆಚ್ಚಗಳನ್ನು ಮತ್ತು 50% ಲಾಭದೊಂದಿಗೆ ಎಲ್ಲ ಬೆಳೆಗಳನ್ನು ಎಂಎಸ್ಪಿಯಲ್ಲಿ ಖರೀದಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ, ಎಂಎಸ್ಪಿಗೆ ಕಾನೂನುಬದ್ಧ ಗ್ಯಾರಂಟಿ ಇಲ್ಲ ಅಥವಾ ಸಿ2 + 50%ನ ಸ್ವಾಮಿನಾಥನ್ ಸೂತ್ರವನ್ನು ಆಧರಿಸಿಲ್ಲ” ಎಂದು ಅವರು ದೂರಿದ್ದಾರೆ.
“ಸ್ವಾಮಿನಾಥನ್ ಆಯೋಗದ ಪ್ರಕಾರ, ಗೋಧಿಗೆ ಎಂಎಸ್ಪಿ ಅಡಿಯಲ್ಲಿ ಕ್ವಿಂಟಲ್ಗೆ 2,478 ರೂ. ನೀಡಬೇಕು. ಆದರೆ, ಪ್ರಸ್ತುತ ಕ್ವಿಂಟಲ್ಗೆ ಕೇವಲ 2,275 ರೂ ಇದೆ. ಅದೇ ರೀತಿ ಭತ್ತಕ್ಕೆ ಎಂಎಸ್ಪಿ ಪ್ರತಿ ಕ್ವಿಂಟಲ್ಗೆ 2,866 ರೂ. ಇರಬೇಕು. ಆದರೆ, ಕೇವಲ 2,183 ರೂ. ಇದೆ” ಎಂದು ರಮೇಶ್ ಹೇಳಿದ್ದಾರೆ.
“ಮೋದಿ ಜೀ, 2011ರ ನಿಮ್ಮ ಸ್ವಂತ ವರದಿಯ ಫಲಿತಾಂಶಗಳನ್ನು ನೀವೇಕೆ ಜಾರಿಗೆ ತರಲಿಲ್ಲ? ಎಂಎಸ್ಪಿ ಭರವಸೆ ನೀಡಿ ರೈತರಿಗೆ ಯಾಕೆ ಸುಳ್ಳು ಹೇಳಿದ್ದೀರಿ? ಇಂದು ಭಾರತದ ರೈತರು ಮೋದಿ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ನ ‘ಕಿಸಾನ್ ನ್ಯಾಯ್ ಗ್ಯಾರಂಟಿ’ ಮಾತ್ರ ಸ್ವಾಮಿನಾಥನ್ ಸೂತ್ರದ ಆಧಾರದ ಮೇಲೆ ರೈತರಿಗೆ ಎಂಎಸ್ಪಿಗೆ ಕಾನೂನು ಖಾತರಿ ನೀಡುತ್ತದೆ” ಎಂದು ರಮೇಶ್ ಪ್ರತಿಪಾದಿಸಿದ್ದಾರೆ.
बार-बार वादा करने के बावजूद मोदी सरकार एमएसपी को कानूनी गारंटी देने से क्यों भाग रही है?
▪️2011 में मुख्यमंत्री और एक कार्यकारी ग्रुप के अध्यक्ष के रूप में नरेंद्र मोदी ने तत्कालीन प्रधानमंत्री मनमोहन सिंह को एक रिपोर्ट सौंपा था, जिसमें कहा गया था कि *”हमें किसान के हितों की… pic.twitter.com/O2q9DdXwZ5
— Jairam Ramesh (@Jairam_Ramesh) February 14, 2024
ವಾಟ್ಸಾಪ್ ಚಾನೆಲ್ನಲ್ಲಿ ಪೋಸ್ಟ್ ಬರೆದಿರುವ ರಾಹುಲ್ ಗಾಂಧಿ, “ರೈತ ಚಳವಳಿಯ ಸಂದರ್ಭದಲ್ಲಿ ಪೊಲೀಸ್ ದೌರ್ಜನ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸೈನಿಕ ಗುರ್ಮೀತ್ ಸಿಂಗ್ ಅವರೊಂದಿಗೆ ಫೋನ್ನಲ್ಲಿ ಮಾತನಾಡಿದ್ದೇನೆ” ಎಂದು ಹೇಳಿದ್ದಾರೆ.
“ಗುರ್ಮೀತ್ ಸಿಂಗ್ ಅವರ ಕೈ ಮತ್ತು ಕಣ್ಣಿಗೆ ಗಾಯವಾಗಿದೆ. ಅವರು ದೇಶದ ರಕ್ಷಕ ಮತ್ತು ಆಹಾರ ಪೂರೈಕೆದಾರ. ಅವರನ್ನು ಹೊಗಳುವ ಬದಲು ಅವರ ಬಗ್ಗೆ ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ಹೊಂದಿದೆ. ಇದು ಪ್ರಜಾಪ್ರಭುತ್ವವನ್ನು ನಾಚಿಕೆಗೀಡುಮಾಡಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಫೆಬ್ರವರಿ 13ರಂದು ದೆಹಲಿ ಚಲೋಗೆ ಕರೆ ಕೊಟ್ಟಿದ್ದ ಪಂಜಾಬ್ ರೈತರು ದೆಹಲಿಯತ್ತ ಹೊರಟಿದ್ದರು. ಅವರನ್ನು ಹಣಯಾಣದ ಅಂಬಾಲಾ ಗಡಿಯಲ್ಲಿ ಪೊಲೀಸರು ತಡೆದಿದ್ದು, ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ. ರೈತರು ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಿದಾಗ, ಅವರ ಮೇಲೆ ಪೊಲೀಸರು ಅಶ್ರುವಾಯು ಮತ್ತು ಜನ ಫಿರಂಗಿಗಳ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 60 ಮಂದಿ ರೈತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 24 ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಮತ್ತು ಹರಿಯಾಣದ ಬಿಜೆಪಿ ಸರ್ಕಾರಗಳು ದೆಹಲಿಗೆ ಹೊರಟಿದ್ದ ರೈತರ ಪ್ರತಿಭಟನಾ ಮೆರವಣಿಗೆಯನ್ನು ತಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ವಿವಿಧ ಬೆಳೆಗಳಿಗೆ ಎಂಎಸ್ಪಿ ಖಾತರಿಪಡಿಸುವ ಕಾನೂನಿನ ಪ್ರಮುಖ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದೆ.