ಬಾಲಕೋಟ್ನಲ್ಲಿ ನಾವು ಬಾಂಬ್ ದಾಳಿ ಮಾಡಿದ್ದೇವೆ ಅಂತ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನಿರ್ದಿಷ್ಟವಾಗಿ ಎಲ್ಲಿ ದಾಳಿ ಮಾಡಲಾಗಿದೆ, ಆ ಬಾಂಬ್ ದಾಳಿಯಿಂದಾಗಿ ಏನಾದರೂ ಆಗಿದೆಯೇ ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ. ನಾವು ಬಾಲಕೋಟ್ ದಾಳಿ ಮಾಡಿದ್ವಿ ಎಂದು ಹೇಳಿ 2019ರಲ್ಲಿ ಚುನಾವಣೆಯಲ್ಲಿ ಗೆದ್ದಿರುವುದು ಮಾತ್ರ ಸತ್ಯ.
ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ಸುಳ್ಳಿನ ಸಾಧನೆಗಳನ್ನು ಎತ್ತಿ ತೋರಿಸಿದರು. ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಕುರಿತು ಮತದಾರರಲ್ಲಿ ದ್ವೇಷ ಹುಟ್ಟಿಸುವಂತಹ ಭಾಷಣಗಳನ್ನು ಮಾಡುತ್ತಾ ಇಡೀ ದೇಶದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ.
25:43 “ತಮ್ಮ ನಾಯಕತ್ವದಲ್ಲಿ 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಪಡಿಸಿರುವುದು ಮಹತ್ವದ ಮೈಲಿಗಲ್ಲುಗಳು” ಎಂದೆಲ್ಲ ಎದೆಯುಬ್ಬಿಸಿ ಮಾತನಾಡಿರುವ ಮೋದಿಯ ಸುಳ್ಳಿನ ಹಿಂದೆ ಕರಾಳತೆಯೇ ಇದೆ.
ಆರ್ಟಿಕಲ್ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎಂದು ಘೋಷಿಸಿದರು. ಆದರೆ ಅದರಿಂದ ಲಾಭವಾಗಿದ್ದು ಸ್ಥಳೀಯರಿಗಲ್ಲ, ದೇಶದ ಜನರಿಗಲ್ಲ, ಮೋದಿಯ ಆಪ್ತ ಕಾರ್ಪೊರೇಟ್ ಕುಳಗಳಿಗೆ. ಗಣಿಗಾರಿಕೆ, ಚೀನಾದ ಅತಿಕ್ರಮಣದಿಂದಾಗಿ ಲಡಾಖ್ ನಲುಗಿಹೋಗಿದೆ. ಮೋದಿ ಮಾತ್ರ ಏನೂ ಆಗಿಯೇ ಇಲ್ಲವೆಂದು ಮೌನಕ್ಕೆ ಜಾರಿದ್ದಾರೆ.
ಭಾರತದ ನೆತ್ತಿಯಲ್ಲಿರುವ ಲಡಾಖ್, ಚೀನಾ ಮತ್ತು ಪಾಕಿಸ್ತಾನ ದೇಶಗಳ ಗಡಿಗಳಿಗೆ ಹೊಂದಿಕೊಂಡಿರುವ; ಅತ್ಯಂತ ಸೂಕ್ಷ್ಮ ಜೀವವೈವಿಧ್ಯವನ್ನು, ಬೆಲೆಬಾಳುವ ಖನಿಜ ನಿಕ್ಷೇಪಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಪರ್ವತ ಶ್ರೇಣಿ. ಉತ್ತರ ಭಾರತದ ಹಲವು ನದಿಗಳಿಗೆ, ವೈವಿಧ್ಯ ಜೀವರಾಶಿಗಳಿಗೆ, ಬುಡಕಟ್ಟು ಜನಾಂಗಗಳಿಗೆ ಆಶ್ರಯ ನೀಡಿದ ಅಪರೂಪದ ತಾಣ.
ಈ ತಾಣವೀಗ ಅಧಿಕಾರದಾಹಿ ರಾಜಕಾರಣಿಗಳ ಮತ್ತು ಧನದಾಹಿ ಕಾರ್ಪೊರೇಟ್ ಕುಳಗಳ ಕಾಕದೃಷ್ಟಿ ಬಿದ್ದಿದೆ. ಅಭಿವೃದ್ಧಿಯ ಅಧ್ವಾನಕ್ಕೆ ಒಳಗಾಗಿದೆ. ಜೊತೆಗೆ ಚೀನಾದ ಅತಿಕ್ರಮಣದಿಂದ ಬುಡಕಟ್ಟು ಜನಾಂಗದ ಕುರಿಗಾಹಿಗಳು ನೆಲೆ ಕಳೆದುಕೊಂಡು ಬದುಕುವುದೇ ಕಷ್ಟವಾಗಿದೆ. ಇಡೀ ಲಡಾಖ್ ಸಂಕಷ್ಟಕ್ಕೆ ಸಿಲುಕಿದೆ.
ಮೋದಿಯ ಮೊಂಡಾಟಕ್ಕೆ ಉತ್ತರ ಕೊಡಲು ಮತ್ತು ಲಡಾಖ್ನ ಸುಮಾರು 4 ಸಾವಿರ ಚದರ ಕಿ.ಮೀ ಅನ್ನು ಚೀನಾ ಆಕ್ರಮಿಸಿಕೊಂಡಿರುವುದನ್ನು ಸಾಕ್ಷ್ಯ ಸಮೇತ ಜಗತ್ತಿಗೆ ತೋರಲು, ಅಲೆಮಾರಿ ಬುಡಕಟ್ಟು ಜನಾಂಗದವರು ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ನೇತೃತ್ವದಲ್ಲಿ ಕಳೆದ ಏಪ್ರಿಲ್ 7ರಂದು ಲಡಾಖ್ನ ಸಂಘ ಸಂಸ್ಥೆಗಳ ಸಂಘಟಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳೊಂದಿಗೆ ಸೇರಿ ʼಗಡಿ ಮೆರವಣಿಗೆʼ ಆಯೋಜಿಸಿದ್ದರು.
ಆದರೆ, ಮೋದಿಯವರ ಕೇಂದ್ರ ಸರ್ಕಾರ, ಮೆರವಣಿಗೆ ನಡೆಸದಂತೆ ನಿಷೇಧಾಜ್ಞೆ ಹೇರಿತು. ಪೂರ್ವಾನುಮತಿ ಇಲ್ಲದೆ ಪ್ರತಿಭಟನೆ, ಮೆರವಣಿಗೆ, ಭಾಷಣ ನಡೆಸುವಂತಿಲ್ಲ ಎಂದು ನಿರ್ಬಂಧ ವಿಧಿಸಿತು. ತಮ್ಮ ನೋವು, ಸಂಕಟಗಳನ್ನು ಜಗತ್ತಿಗೆ ತಿಳಿಸಲು ಬಂದಿದ್ದ ಲಡಾಖ್ನ ಹತ್ತು ಸಾವಿರಕ್ಕೂ ಹೆಚ್ಚು ಜನರ ಒಡಲುರಿ ಒಡಲೊಳಗೇ ಉಳಿಯಿತು. ದೇಶಕ್ಕೆ ನಷ್ಟವುಂಟು ಮಾಡುವುದು, ಬಡವರ ಬದುಕುಗಳನ್ನು ಕಸಿದು ಉದ್ಯಮಿಗಳ ಪಾಲು ಮಾಡುವುದೇ ಮೋದಿ ಸಾಧನೆ. ವಾಸ್ತವತೆಯನ್ನು ಮುಚ್ಚಿಟ್ಟು ಸುಳ್ಳುಗಳನ್ನು ಹೇಳುತ್ತಲೇ ಭಂಡತನ ಮೆರೆಯುತ್ತಿದ್ದಾರೆ.
30:1 “ಹತ್ತು ವರ್ಷಗಳ ಹಿಂದೆ, ದೇಶವು ಭಯೋತ್ಪಾದನೆಯಿಂದ ಬಳಲುತ್ತಿತ್ತು. ಭಯೋತ್ಪಾದನೆಯ ಮೂಲವನ್ನು ತಿಳಿದಿದ್ದರೂ, ಕಾಂಗ್ರೆಸ್ ಪಾಕಿಸ್ತಾನಕ್ಕೆ ಪ್ರೇಮ ಪತ್ರ ಕಳುಹಿಸುತ್ತಿತ್ತು. ಇಂದು, ಭಾರತವು ಭಯೋತ್ಪಾದನೆಯ ಮಾಸ್ಟರ್ಗಳಿಗೆ ಯಾವುದೇ ದಾಖಲೆಗಳನ್ನು, ದಸ್ತಾವೇಜನ್ನು ಕಳುಹಿಸುವುದಿಲ್ಲ. ಆದರೆ ಅವರಿಗೆ ಒಂದು ವರದಿ ನೀಡಿ ಅವರ ತವರು ನೆಲದಲ್ಲಿ ಕೊಲ್ಲಲಾಗುತ್ತಿದೆ” ಎಂದು ಹಸಿ ಸುಳ್ಳುಗಳನ್ನು ಹರಡುತ್ತಿದ್ದಾರೆ.
ವಾಸ್ತವವಾಗಿ “ಬಾಲಕೋಟ್ನಲ್ಲಿ ನಾವು ಬಾಂಬ್ ದಾಳಿ ಮಾಡಿದ್ದೇವೆ ಅಂತ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ನಿರ್ದಿಷ್ಟವಾಗಿ ಎಲ್ಲಿ ದಾಳಿ ಮಾಡಲಾಗಿದೆ, ಆ ಬಾಂಬ್ ದಾಳಿಯಿಂದಾಗಿ ಏನಾದರೂ ಆಗಿದೆಯೇ ಎಂಬ ಮಾಹಿತಿ ಯಾರಿಗೂ ತಿಳಿದಿಲ್ಲ. ನಾವು ಬಾಲಕೋಟ್ ದಾಳಿ ಮಾಡಿದ್ವಿ ಎಂದು ಹೇಳಿ 2019ರಲ್ಲಿ ಚುನಾವಣೆಯಲ್ಲಿ ಗೆದ್ದಿರುವುದು ಮಾತ್ರ ಸತ್ಯ. ಈ ಮಾತನ್ನೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್, ಬಿಜೆಪಿಯ ಸತ್ಯಪಾಲ್ ಮಲಿಕ್ ಅವರು ಹೇಳಿದ್ದರು. ಈ ಜನರು ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಿಸುತ್ತಾರೆಂದು ಹೇಳಿದ್ದರು. ಅದು ನಿಜವೆಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳುತ್ತಾರೆ.
“ಅಷ್ಟಕ್ಕೂ ಈ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನ ನಾವು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಈ ದಾಳಿ ಮಾಡುವುದಲ್ಲ. ಬಾಲಕೋಟ್ ದಾಳಿ ಮಾಡಿ ‘ನಾವು ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ಮಾಡಿದ್ವಿ’ ಅಂತ ತೋರಿಸಲು ಪ್ರಯತ್ನ ಹೇಗೆ ಮಾಡಿದ್ದರೋ ಅದೇ ರೀತಿ ನಾವು ಪಿಒಕೆ ಮೇಲೆ ದಾಳಿ ಮಾಡಿದ್ವಿ ಅಂತ ತೋರಿಸಲು ಮಾತ್ರ ಈ ಬಾಲಕೋಟ್ ರೀತಿಯ ದಾಳಿ ಮಾಡಿಸಲಾಗುತ್ತದೆ” ಎಂದು ಕೇಂದ್ರ ಬಿಜೆಪಿ ಸರ್ಕಾರವನ್ನು ನೇರವಾಗಿ ಉಲ್ಲೇಖಿಸದೆ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಈ ಬಾರಿಯ ವೋಟ್ಬ್ಯಾಂಕ್ಗಾಗಿ ಮೋದಿ ಸರ್ಕಾರ ಏನೆಲ್ಲಾ ಮಾಡುತ್ತದೆ ಎಂಬುದನ್ನು ಪ್ರಶಾಂತ್ ಭೂಷಣ್ ಹೇಳಿದ್ದು, “ಬಿಜೆಪಿ ಸರ್ಕಾರ ಈಗ ಮತ್ತೆ ನಮ್ಮ ದೇಶದ ಮೇಲೆ ಭಯೋತ್ಪಾದನಾ ದಾಳಿ ಮಾಡಿಸಿ ಅದರ ಲಾಭವನ್ನು ಚುನಾವಣೆಯಲ್ಲಿ ಪಡೆಯಲು ತಯಾರಿ ನಡೆಸುತ್ತಿದೆ. ಪುಲ್ವಾಮಾ ಮತ್ತು ಬಾಲಕೋಟ್ ರೀತಿಯಲ್ಲೇ ದಾಳಿ ಮಾಡಿಸಲು ನಡೆಯುತ್ತಿರುವ ತಯಾರಿ ಬಗ್ಗೆ ತಿಳಿದಿರುವ ವ್ಯಕ್ತಿಯೊಬ್ಬರು ತನಗೆ ಮಾಹಿತಿ ನೀಡಿದ್ದಾರೆ. ಆದರೆ ನಾನು ಆ ವ್ಯಕ್ತಿ ಹೆಸರು ಹೇಳಲಾಗುವುದಿಲ್ಲ” ಎಂದಿದ್ದಾರೆ.
“ಪುಲ್ವಾಮಾ ರೀತಿಯ ಎರಡನೇ ದಾಳಿಯನ್ನು ಅಯೋಧ್ಯೆ ರಾಮ ಮಂದಿರದ ಮೇಲೆ ಮಾಡಿಸಲಾಗುತ್ತದೆ. ಇದನ್ನು ಜೈಶ್-ಎ-ಮೊಹಮ್ಮದ್ ಅಥವಾ ಅಲ್ಕೈದಾ ಮೂಲಕ ಮಾಡಿಸಲಾಗುತ್ತದೆ. ಇನ್ನು ಬಾಲಕೋಟ್ ರೀತಿಯ ದಾಳಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿಯಿದೆ” ಅಂತ ಹಿರಿಯ ವಕೀಲರು ಹೇಳಿರುವುದು ಈಗಾಗಲೇ ವರದಿಯಾಗಿದೆ.
52:5 “ಮೀಸಲಾತಿ ನೀತಿಗಳನ್ನು ದುರ್ಬಲಗೊಳಿಸುವ ಮತ್ತು ರಾಜಕೀಯ ಲಾಭಕ್ಕಾಗಿ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಅವರ ಉದ್ದೇಶಗಳನ್ನು ಹೊಂದಿರುವ ವಿಭಜಕ ರಾಜಕೀಯವನ್ನು ತಿರಸ್ಕರಿಸಿ, ಬುಡಕಟ್ಟು ಮತ್ತು ಅಂಚಿನಲ್ಲಿರುವ ಸಮುದಾಯಗಳ ಹಿತಾಸಕ್ತಿಗಳಿಗೆ ನಿರಂತರವಾಗಿ ಆದ್ಯತೆ ನೀಡುತ್ತಿರುವ ಬಿಜೆಪಿ-ಎನ್ಡಿಎ ಮೈತ್ರಿಕೂಟವನ್ನು ಬೆಂಬಲಿಸಿ” ಎಂದು ಸುಳ್ಳುಗಳನ್ನು ಹೇಳಿಕೊಂಡೇ ಮತಬೇಟೆ ಮಾಡುತ್ತಿದ್ದಾರೆ.
ಇದನ್ನೂ ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ವೋಟ್ ಬ್ಯಾಂಕ್ಗಾಗಿ ಮತುವಾ ಸಮುದಾಯ ಗುರಿಯಾಗಿಸಿದ್ದಾರಾ ಮೋದಿ?
370ನೇ ವಿಧಿಯ ಪರಿಣಾಮ ಚೀನಾ ಆಕ್ರಮಿಸಿಕೊಂಡಿರುವುದನ್ನು ಸಾಕ್ಷಿ ಸಹಿತ ಜಗತ್ತಿಗೆ ಸಾರಲು ಹೊರಟ ಲಡಾಖ್ನ ಅಲೆಮಾರಿ ಬುಡಕಟ್ಟು ಜನಾಂಗದವರು, ಸಂಘ ಸಂಸ್ಥೆಗಳು ಸಂಘಟಕರು, ಸಾಮಾಜಿಕ ಕಾರ್ಯಕರ್ತರ ಬಗ್ಗೆಯೇ ಕಾಳಜಿ ವಹಿಸದ ಮೋದಿ, ಅವರ ಮಾತನ್ನು ಕೇಳಿಸಿಕೊಳ್ಳದೆ ಅವರ ಒಡಲುರಿಯಲ್ಲಿಯೇ ಬೆಯುವಂತೆ ಮಾಡಿರುವ ಮೋದಿ ಬುಡಕಟ್ಟು ಮತ್ತು ಅಂಚಿನಲ್ಲಿರುವ ಸಮುದಾಯಗಳ ಹಿತಾಸಕ್ತಿಗಳಿಗೆ ನಿರಂತರವಾಗಿ ಶ್ರಮಿಸಲು ಸಾಧ್ಯವೇ?
ಧರ್ಮ, ಜಾತಿಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತ ದೇಶ ವಿಭಜಿಸುತ್ತಿರುವ ಮೋದಿ ಲಜ್ಜೆಯಿಲ್ಲದೆ, ವಿಪಕ್ಷಗಳನ್ನು ವಿಭಜಕ ರಾಜಕೀಯ ಎನ್ನುತ್ತಾರೆ. ನಿಜವಾಗಿಯೂ ಇವರಿಗೆ ನೈತಿಕತೆ ಇದೆಯಾ? ಇವರನ್ನು ಬೆಂಬಲಿಸಲು ಇವರ ಹತ್ತು ವರ್ಷದ ಸಾಧನೆಗಳಾದರೂ ಏನು? ಮಾತೆತ್ತಿದರೆ ಸುಳ್ಳುಗಳು, ಇವುಗಳೇ ಇವರ ಸಾಧನೆಯಾ?
ಮೋದಿ ಮೂಗಿನಡಿಯಲ್ಲಿಯೇ ಗುಜರಾತ್ ಹೊತ್ತಿ ಉರಿಯಿತು, ಮಣಿಪುರ ಉರಿದು ಬೂದಿಯಾಯಿತು. ಈಗ ಲಡಾಖ್ ಲಾವಾರಸದಂತೆ ಕುದಿಯುತ್ತಿದೆ. ಗುಜರಾತ್, ಮಣಿಪುರ, ಲಡಾಖ್ಗಳಿಗೆ ಆದದ್ದು, ನಮಗಾಗುವುದಿಲ್ಲವೇ? ಈ ರಾಜ್ಯಗಳಿಗೆ ಸ್ಪಂದಿಸದ ಮೋದಿ ದೇಶಕ್ಕಾಗಿ ಹೋರಾಡಲು ಸಾಧ್ಯವೇ?