- ಬಜೆಟ್ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಉತ್ತರ
- ಬಿಜೆಪಿ ವಿರೋಧ ಪಕ್ಷವಾಗಿರಲು ಅರ್ಹವಿಲ್ಲ: ಟೀಕೆ
ಎಚ್ ಡಿ ಕುಮಾರಸ್ವಾಮಿ ಅವರು ಸದನದಲ್ಲಾದರೂ ಸತ್ಯ ಹೇಳುತ್ತಾರೆ ಎಂದುಕೊಡಿದ್ದೆ. ಆದರೆ, ಕುಮಾರಸ್ವಾಮಿ ಅವರು ಬುಧವಾರ ಸದನದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಅವರು ಗುರುವಾರದ ಅಧಿವೇಶನದಲ್ಲಿ ಬಜೆಟ್ ಭಾಷಣ ಮೇಲೆ ಉತ್ತರಿಸುತ್ತ, ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ ಗಣ್ಯರಿಗೆ ಐಎಎಸ್ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ಪ್ರಸ್ತಾಪಿಸಿ ಕುಮಾರಸ್ವಾಮಿ ನಡೆ ವಿರುದ್ಧ ಬೇಸರ ವ್ಯಕ್ತಪಡಿಸಿದರು.
“ರಾಜಕೀಯಕ್ಕಾಗಿ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸೇರಿಕೊಂಡು ಸುಮ್ಮನೇ ಆರೋಪ ಮಾಡುತ್ತಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ಐಎಎಸ್ ಅಧಿಕಾರಿಗಳನ್ನು ನೇಮಿಸಿ ಈಗ ಸುಳ್ಳು ಹೇಳುತ್ತಿದ್ದಾರೆ. ಬುಧವಾರ ಬಿಜೆಪಿ ಸದಸ್ಯರು ಸದನದಲ್ಲಿ ನಡೆದುಕೊಂಡ ರೀತಿ ಅಸಹ್ಯ. ಇವರ ಅನಾಗರಿಕ ವರ್ತನೆ ನೋಡಿದರೆ ನನಗನಿಸುತ್ತದೆ ಇವರು ವಿರೋಧ ಪಕ್ಷದ ಸ್ಥಾನದಲ್ಲೂ ಕುಳಿತುಕೊಳ್ಳಲು ಅರ್ಹರಿಲ್ಲ” ಎಂದರು.
ಬಿಜೆಪಿ ಇಷ್ಟು ದಿವಾಳಿ ಆಗುತ್ತದೆ ಅಂದುಕೊಂಡಿರಲಿಲ್ಲ. ನೋಡಿ, ಇಂದಿನ ಸದನದಲ್ಲಿ ಪ್ರತಿಪಕ್ಷಗಳ ಸ್ಥಾನಗಳು ಪೂರ್ತಿ ಖಾಲಿ ಇವೆ. ಇವರಿಗೆ ಸದನದ ಮೇಲೆ ಗೌರವ ಇದೆಯಾ? ಚರ್ಚೆ ಎನ್ನುವುದು ಇವರಿಗೆ ಗೊತ್ತಿಲ್ಲ. ಕೇವಲ ಗಲಾಟೆ ಮಾಡುತ್ತ ಕಾಲ ಕಳೆಯುವುದು ಇವರ ಅಭ್ಯಾಸ. ಸಮ ಬಲ ಇದ್ದವರ ಜೊತೆ ಕುಸ್ತಿ ಆಡಬೇಕು. ಪ್ರತಿಪಕ್ಷಗಳು ಅದಕ್ಕೂ ಯೋಗ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ- ಮಣಿಪುರದ ಪೈಶಾಚಿಕ ಕೃತ್ಯ- ಸುಪ್ರೀಮ್ ಉಸ್ತುವಾರಿಯಲಿ ನಡೆಯಲಿ ನ್ಯಾಯಾಂಗ ತನಿಖೆ
ಬಿಜೆಪಿ ಶಾಸಕರು ಅನಾಗರಿಕರು!
“ಬಿಜೆಪಿಯವರು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಗಳು. ಸ್ಪೀಕರ್ ಪೀಠಕ್ಕೂ ಮರ್ಯಾದೆ ಕೊಡಲ್ಲ. ಸದನದಲ್ಲಿ ಅವರ ವರ್ತನೆ ನೋಡಿದರೆ ಅನಾಗರಿಕರು ಎಂದು ಕರೆಯಬೇಕು. ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳಿಂದ ಬಿಜೆಪಿಗೆ ಹೊಟ್ಟೆ ಉರಿ ಶುರುವಾಗಿದೆ. ಅವರ ರಾಜಕೀಯಕ್ಕೆ ನಾವು ಹೆದರಲ್ಲ” ಎಂದು ಕಿಡಿಕಾರಿದರು.
“ಬಿಜೆಪಿ ಮುಕ್ತ ಭಾರತ ಆಗಲಿ ಅಂತಾ ನಾನು ಹೇಳುವುದಿಲ್ಲ. ಆದರೆ ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಅಧಿಕಾರಕ್ಕೆ ಬರಬಾರದು. ಬಿಜೆಪಿ ಯಾವಾಗಲೂ ವಿಪಕ್ಷವಾಗಿಯೇ ಇರಬೇಕು. ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಮೇಲೆ ಅವಲಂಬಿತರಾಗಿದ್ದಾರೆ” ಎಂದು ಕಿಡಿಕಾರಿದರು.
ಮಾರ್ಷಲ್ ಇಲ್ಲದಿದ್ದರೆ ಗತಿ ಏನು?
“ಒಬ್ಬ ದಲಿತ ಡೆಪ್ಯುಟಿ ಸ್ಪೀಕರ್ ಗೆ ಬಿಜೆಪಿ ನಡೆಸಿಕೊಂಡ ರೀತಿ ಅತ್ಯಂತ ಅನಾಗರಿಕತನದ್ದಾಗಿತ್ತು. ಮಾರ್ಷಲ್ಗಳು ಇಲ್ಲದೇ ಹೋಗಿದ್ದರೆ ಅವರ ಗತಿ ಏನಾಗುತ್ತಿತ್ತೋ ಗೊತ್ತಿಲ್ಲ. ಬಿಜೆಪಿಯವರು ಅವರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸುತ್ತಿದ್ದರೇನೋ ಗೊತ್ತಿಲ್ಲ ಎನ್ನುತ್ತಾ ಸದನದಲ್ಲಿ ಬಿಜೆಪಿಯವರ ವರ್ತನೆಯ ಭೀಕರತೆಯನ್ನು ಖಂಡಿಸುವೆ” ಎಂದು ಹೇಳಿದರು.
ವಿಶ್ವಗುರುವಿಗೆ ವಿರೋಧ ಪಕ್ಷದ ನಾಯಕ ಸಿಗುತ್ತಿಲ್ಲ
“ಬಿಜೆಪಿಯವರು ವಿಶ್ವಗುರುವಿನ ಬಗ್ಗೆ ಭರ್ಜರಿ ಭಾಷಣ ಮಾಡುತ್ತಾರೆ. ಆ ವಿಶ್ವಗುರುವಿಗೆ ತಮ್ಮ ಪಕ್ಷದಲ್ಲಿ ಒಬ್ಬ ವಿರೋಧ ಪಕ್ಷದ ನಯಕನನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರೀ ಭಾಷಣದಿಂದ ನಾಡಿನ, ದೇಶದ ಜನರ ಸಂಕಷ್ಟ ಪರಿಹಾರ ಆಗುವುದಿಲ್ಲ ಎನ್ನುವ ಪಾಠವನ್ನು ವಿಶ್ವಗುರುವಿಗೆ ಜನ ಕಲಿಸಿದ್ದಾರೆ” ಎಂದರು.
4-6 ಸಾವಿರ ರೂ. ಸಹಾಯಧನ ಪ್ರತಿ ಕುಟುಂಬಕ್ಕೆ
“ನಮ್ಮ ಸರ್ಕಾರ ಗ್ಯಾರಂಟಿ ಘೋಷಣೆಗಳಿಂದ ರಾಜ್ಯದ 1.40 ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 4ರಿಂದ 6 ಸಾವಿರ ಸಹಾಯಧನ ತಲುಪಲಿದೆ. ಅಂದರೆ ವರ್ಷಕ್ಕೆ 40 ಸಾವಿರ ರೂ.ದಿಂದ 60 ಸಾವಿರ ರೂ,ವರೆಗೆ ಸರ್ಕಾರದ ಸಹಾಯ ಸಿಗಲಿದೆ. ಇಂತಹ ಕಾರ್ಯಕ್ರಮ ಇಡೀ ದೇಶದಲ್ಲೇ ಮೊದಲು. ಇಷ್ಟು ದೊಡ್ಡ ಸಹಾಯ ಧನದ ಕಾರ್ಯಕ್ರಮಗಳು ಯಾವ ರಾಜ್ಯದಲ್ಲೂ ಇಲ್ಲ” ಎಂದು ಹೆಮ್ಮೆಪಟ್ಟು ಹೇಳಿದರು.
ಮೋದಿ ಕಂಡರೆ ಚಳಿಜ್ವರ ಬಂದಂಗೆ ನಡುಗುತ್ತಾರೆ
“15ನೇ ಹಣಕಾಸು ಆಯೋಗದಿಂದ ಕರ್ನಾಟಕ ನಾಡಿಗೆ ಅಪಾರ ಅನ್ಯಾಯ ಆಯಿತು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನಮ್ಮ ಪಾಲಿನ, ನಮ್ಮ ಹಕ್ಕಾಗಿದ್ದ 5495 ಕೋಟಿ ಬರಲಿಲ್ಲ. ಕರ್ನಾಟಕದಿಂದಲೇ ಆಯ್ಕೆ ಆಗಿರುವ ನಿರ್ಮಲಾ ಸೀತಾರಾಮನ್ ಅವರಿಂದ ಇಷ್ಟು ದೊಡ್ಡ ಅನ್ಯಾಯ ಆಯಿತು. ಇದನ್ನು ಕರ್ನಾಟಕದಿಂದ ಆಯ್ಕೆ ಆಗಿರುವ ಸಂಸದರು ಪ್ರಶ್ನಿಸಬೇಕಿತ್ತು. ರಾಜ್ಯ ಬಿಜೆಪಿ ನಾಯಕರು, ಮುಖ್ಯಮಂತ್ರಿಗಳು ಪ್ರಶ್ನಿಸಬೇಕಿತ್ತು. ಆದರೆ ಇವರೆಲ್ಲಾ ಮೋದಿ ಅವರ ಎದುರು ನಿಂತು ಕನ್ನಡಿಗರ ಪಾಲನ್ನು ಕೇಳಲು ಚಳಿ ಜ್ವರ ಬಂದವರಂತೆ ನಡುಗುತ್ತಾರೆ” ಎಂದು ವ್ಯಂಗ್ಯವಾಡಿದರು.