ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಬಳಿ ನಡೆದಿದ್ದ ದಾಂಧಲೆ ಘಟನೆಯ ವಿಚಾರವಾಗಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರತಾಪ್ ಸಿಂಹ ವಿರುದ್ಧ ಮೈಸೂರಿನ ಉದಯಗಿರಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮೈಸೂರು ಯುವ ಕಾಂಗ್ರೆಸ್ ಮುಖಂಡ ಸೈಯದ್ ಅಬ್ರರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರತಾಪ್ ಸಿಂಹ ಬೆಂಬಲಿಗನೇ ಎಂದು ಹೇಳಲಾದ ಸುರೇಶ್ ಎಂಬಾತ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಾಕಾರಿ ಪೋಸ್ಟರ್ ಹಂಚಿಕೊಂಡಿದ್ದ. ಆತನ ವಿರುದ್ಧ ಫೆಬ್ರವರಿ 10ರಂದು ಮುಸ್ಲಿಂ ಸಮುದಾಯವು ಉದಯಗಿರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿತ್ತು. ಈ ವೇಳೆ ಕಲ್ಲುತೂರಾಟವೂ ನಡೆದಿತ್ತು.
ಘಟನೆಯನ್ನು ತಮ್ಮ ಕೋಮು ರಾಜಕೀಯಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದ ಬಿಜೆಪಿ ಮಾರನೆಯ ದಿನ (ಫೆ.11) ಘಟನಾ ಸ್ಥಳಕ್ಕೆ ಧಾವಿಸಿತ್ತು. ಪ್ರತಾಪ್ ಸಿಂಹ ಸೇರಿದಂತೆ ಹಲವರು ಉದಯಗಿರಿಗೆ ತೆರಳಿದ್ದರು. ಆದರೆ, ಅವರನ್ನು ತಡೆದ ಪೊಲೀಸರು ಅಲ್ಲಿಂದ ವಾಪಸ್ ಕಳಿಸಿದ್ದರು. ಆದಾಗ್ಯೂ, ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲೇ ಜನರನ್ನು ಗುಂಪುಗೂಡಿಸಿಕೊಂಡಿದ್ದ ಪ್ರತಾಪ್ ಸಿಂಹ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಮಾತುಗಳನ್ನಾಡಿದ್ದರು. ಇದೀಗ, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.