ಒಡಿಶಾದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 275 ಮಂದಿ ಪ್ರಾಣ ಕಳೆದುಕೊಂಡಿದ್ದು, ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮತ್ತು ಉದ್ಯಮಿ ಗೌತಮ್ ಅದಾನಿ ಘೋಷಿಸಿದ್ದಾರೆ.
ದುರಂತದ ಚಿತ್ರಗಳು ಕಾಡುತ್ತಿದೆ; ಸೆಹ್ವಾಗ್
ʻಒಡಿಶಾ ರೈಲು ದುರಂತದ ಫೋಟೋ ಹಾಗೂ ಘಟನಾ ಸ್ಥಳದ ದೃಶ್ಯಗಳು ತೀವ್ರ ನೋವು ತರುತ್ತಿದೆ. ಅಪಘಾತವಾದ ದಿನದಿಂದ ಈ ಚಿತ್ರಗಳು ಕಾಡುತ್ತಿದೆ. ಈ ನೋವಿನ ಸಂದರ್ಭದಲ್ಲಿ ನನ್ನ ಕೈಲಾದ ಸಹಾಯ ಮಾಡಲು ಬಯಸುತ್ತೇನೆ. ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ವ್ಯವಸ್ಥೆ ಕಲ್ಪಿಸುತ್ತೇನೆ. ಈ ಮಕ್ಕಳಿಗೆ ಸೆಹ್ವಾಗ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಉಚಿತ ಶಿಕ್ಷಣ ಹಾಗೂ ವಸತಿ ನೀಡಲಾಗುವುದುʼ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ʻದುರಂತ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ, ಸಿಬ್ಬಂದಿ ವರ್ಗದವರಿಗೆ ನನ್ನ ಸಲ್ಯೂಟ್. ವೈದ್ಯಕೀಯ ತಂಡ, ಸ್ವಯಂ ಸೇವಕರ ಗುಂಪು, ರಕ್ತ ದಾನ ಮಾಡಿದ ಮಹನಿಯರಿಗೆ ನನ್ನ ನಮಗಳು ಎಂದುʼ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ʼಅನಾಥ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿ ನಮ್ಮದುʼ; ಅದಾನಿ
‘ಒಡಿಶಾ ರೈಲು ದುರಂತ ಘಟನೆಯು ನಮಗೆಲ್ಲಾ ಬಹಳ ನೋವು ತಂದಿದೆ. ಈ ಅಪಘಾತದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಮುಗ್ಧ ಮಕ್ಕಳ ಶಾಲಾ ಶಿಕ್ಷಣದ ಜವಾಬ್ದಾರಿಯನ್ನು ಅದಾನಿ ಸಮೂಹ ಸಂಸ್ಥೆಯು ವಹಿಸಿಕೊಳ್ಳುತ್ತದೆ. ಸಂತ್ರಸ್ತರು ಮತ್ತವರ ಕುಟುಂಬಗಳಿಗೆ ನೆರವು ಒದಗಿಸುವುದು ಮತ್ತು ಮಕ್ಕಳಿಗೆ ಒಳ್ಳೆಯ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ’ ಎಂದು ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.