- ಕಾನೂನು ಸುವ್ಯವಸ್ಥೆ ಎಲ್ಜಿ ಅವರ ಜವಾಬ್ದಾರಿ ಎಂದ ಕೇಜ್ರಿವಾಲ್
- ಆರೋಪಿ ಲವ್ ಜಿಹಾದ್ ಸದಸ್ಯ ಎಂದು ಟೀಕಿಸಿದ ದೆಹಲಿ ಬಿಜೆಪಿ ಅಧ್ಯಕ್ಷ
ನವದೆಹಲಿಯಲ್ಲಿ 16 ವರ್ಷದ ಅಪ್ರಾಪ್ತೆಯನ್ನು 20 ವರ್ಷದ ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದ ನಂತರ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಬಿಜೆಪಿ ನಡುವೆ ಕೆಸರೆರಚಾಟ ಪ್ರಾರಂಭವಾಗಿದೆ.
ಅಪ್ರಾಪ್ತೆಯೊಂದಿಗೆ ವಿವಾಹೇತರ ಸಹಜೀವನ ಹೊಂದಿದ್ದ 20 ವರ್ಷ ಸಾಹಿಲ್ ಭಾನುವಾರ (ಮೇ 28) ಭೀಕರವಾಗಿ ಹತ್ಯೆ ಮಾಡಿರುವುದನ್ನು ಒಂದೆಡೆ, ಕಾನೂನು ಮತ್ತು ಸುವ್ಯವಸ್ಥೆ ಬಿಕ್ಕಟ್ಟು ಎಂದು ಆಪ್ ನಾಯಕರು ಲೆಫ್ಟಿನಂಟ್ ಗವರ್ನರ್ ಆಡಳಿತವನ್ನು ಟೀಕಿಸಿದರೆ, ಮತ್ತೊಂದೆಡೆ ಬಿಜೆಪಿ ಕೊಲೆಯನ್ನು ಲವ್ ಜಿಹಾದ್ ಎಂದು ಆರೋಪಿಸಿದೆ.
ಬಾಲಕಿ ಹಾಗೂ ಆರೋಪಿಯ ನಡುವೆ ಜಗಳ ಉಂಟಾದ ನಂತರ ಆರೋಪಿಯು ಬಾಲಕಿಯನ್ನು ಹತ್ಯೆ ಮಾಡಿದ್ದಾನೆ. ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ಖಂಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ದೆಹಲಿಯಲ್ಲಿ ಹಾಡಹಗಲೇ ಬಹಿರಂಗವಾಗಿ ಅಪ್ರಾಪ್ತೆಯ ಹತ್ಯೆಯಾಗಿದೆ. ಇದು ತುಂಬಾ ದುಃಖಕರ ಮತ್ತು ದುರದೃಷ್ಟಕರ. ಅಪರಾಧಿಗಳು ನಿರ್ಭೀತರಾಗಿದ್ದಾರೆ, ಅವರಿಗೆ ಪೊಲೀಸರ ಭಯವಿಲ್ಲ. ಎಲ್ಜಿ ಸರ್, ಕಾನೂನು ಸುವ್ಯವಸ್ಥೆ ನಿಮ್ಮ ಜವಾಬ್ದಾರಿ, ಏನಾದರೂ ಮಾಡಿ. ದೆಹಲಿಯ ಜನರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ” ಎಂದು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ | 40 ಶಂಕಿತ ಉಗ್ರರ ಹತ್ಯೆ
ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಸಚಿವೆ ಆತಿಶಿ ಮರ್ಲೆನಾ, “ಈ ಭೀಕರ ಹತ್ಯೆಯನ್ನು ನೋಡಿದ ನಂತರ ನನ್ನ ಎದೆ ಝಲ್ ಎಂದು ನಡುಗಿತು. ದೆಹಲಿಯ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ಸಂವಿಧಾನವು ಅವರಿಗೆ ನೀಡಿದೆ ಎಂಬುದನ್ನು ನಾನು ದೆಹಲಿ ಎಲ್ಜಿ ಅವರಿಗೆ ನೆನಪಿಸಲು ಬಯಸುತ್ತೇನೆ. ಎಲ್ಜಿ ಅವರು ಸರ್ಕಾರದ ಕೆಲಸವನ್ನು ನಿಲ್ಲಿಸುವುದರಲ್ಲಿ ತಮ್ಮ ಸಮಯವನ್ನು ಕಳೆಯುತ್ತಾರೆ. ದೆಹಲಿಯ ಮಹಿಳೆಯರ ಸುರಕ್ಷತೆಯ ಬಗ್ಗೆ ಗಮನ ಹರಿಸಲು ನಾನು ಎಲ್ಜಿ ಅವರನ್ನು ಕೈಮುಗಿದು ವಿನಂತಿಸಿಕೊಳ್ಳುತ್ತೇನೆ. ಇಂದು ದೆಹಲಿಯಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ” ಎಂದಿದ್ದಾರೆ.
ಪೊಲೀಸರು ಬಿಡುಗಡೆ ಮಾಡಿರುವ ಆರೋಪಿಯ ಛಾಯಾಚಿತ್ರವನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವಾ, “ಆರೋಪಿಯ ವಸ್ತ್ರವಿನ್ಯಾಸ ಗಮನಿಸಿದರೆ ಆತ ಲವ್ ಜಿಹಾದ್ ಗುಂಪಿನ ಸದಸ್ಯ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಇದೊಂದು ಯೋಜಿತ ಹತ್ಯೆ. ಸ್ಥಳೀಯರ ಮಾಹಿತಿಯ ಪ್ರಕಾರ, ಸಾಹಿಲ್ ಸರ್ಫರಾಜ್ ಕೊಲೆಯಾದ ಹುಡುಗಿಗೆ ದೀರ್ಘಕಾಲದಿಂದ ಕಿರುಕುಳ ನೀಡುತ್ತಿದ್ದ. ಆತ ಆಕೆಯ ಸುತ್ತಮುತ್ತಲಿನ ಇತರ ಹುಡುಗಿಯರನ್ನು ಎಚ್ಚರಿಸುವ ಸಲುವಾಗಿ ಕೊಲೆ ಮಾಡಿದ್ದಾನೆ. ದೆಹಲಿಯ ಮುಖ್ಯಮಂತ್ರಿಗಳು ಕ್ರೂರ ಹತ್ಯೆಯನ್ನು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವುದು ವಿಷಾದನೀಯ” ಎಂದು ತಿಳಿಸಿದ್ದಾರೆ.