- ಅರ್ಜುನ್ ಮೇಘವಾಲ್ ಅವರಿಗೆ ರಾಜ್ಯ ಸಚಿವರ ಹೆಚ್ಚುವರಿ ಜವಾಬ್ದಾರಿ
- ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿರವ ಕಿರಣ್ ರಿಜಿಜು
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು ಅರ್ಜುನ್ ರಾಮ್ ಮೇಘವಾಲ್ ಅವರನ್ನು ನೂತನ ಕೇಂದ್ರ ಕಾನೂನು ಸಚಿವರಾಗಿ ಗುರುವಾರ (ಮೇ 18) ನೇಮಕ ಮಾಡಲಾಗಿದೆ.
ಈ ಮುನ್ನ ಕಾನೂನು ಸಚಿವರಾಗಿದ್ದ ಕಿರಣ್ ರಿಜಿಜು ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಅವರಿಗೆ ಭೂ ವಿಜ್ಞಾನ ಸಚಿವಾಲಯದ ಉಸ್ತುವಾರಿ ನೀಡಲಾಗಿದೆ. ಈ ಹಿಂದೆ ಜಿತೇಂದ್ರ ಸಿಂಗ್ ಅವರು ಈ ಖಾತೆ ನಿರ್ವಹಿಸುತ್ತಿದ್ದರು.
ಪ್ರಧಾನಿ ಮೋದಿ ಅವರ ಸಲಹೆಯ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಪುಟ ಪುನಾರಚನೆಗೆ ಅನುಮೋದನೆ ನೀಡಿದ್ದಾರೆ.
ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕಿರಣ್ ರಿಜಿಜು ಅವರ ಸ್ಥಾನಕ್ಕೆ ನೇಮಕ ಮಾಡಲಾಗಿದೆ. ಅರ್ಜುನ್ ಮೇಘವಾಲ್ ಅವರಿಗೆ ಅಸ್ತಿತ್ವದಲ್ಲಿರುವ ಖಾತೆಗೆ ಹೆಚ್ಚುವರಿಯಾಗಿ ಕಾನೂನು ಹಾಗೂ ನ್ಯಾಯ ಸಚಿವಾಲಯ ರಾಜ್ಯ ಸಚಿವರಾಗಿ ಸ್ವತಂತ್ರ ಉಸ್ತುವಾರಿ ನೀಡಲಾಗಿದೆ.
ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರ್ಜುನ್ ಮೇಘವಾಲ್ ಅವರನ್ನು ಆರಿಸಲಾಗಿದೆ ಎಂದು ಹೇಳಲಾಗಿದೆ. ಅರ್ಜುನ್ ರಾಮ್ ಮೇಘವಾಲ್ ಅವರು ಪ್ರಸ್ತುತ ಸಂಸ್ಕೃತಿ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಕಿರಣ್ ರಿಜಿಜು ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದಾರೆ.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಜಾರಿಯಲ್ಲಿ ಇರುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕಿರಣ್ ರಿಜಿಜು ಅಸಮಾಧಾನ ಹೊಂದಿದ್ದರು. ನ್ಯಾಯಮೂರ್ತಿಗಳ ನೇಮಕಕ್ಕೆ ಹೊಸ ವ್ಯವಸ್ಥೆ ರೂಪಿಸುವಂತೆ ಹೇಳಿದ್ದರು.
ರಿಜಿಜು ಅವರು 2009ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. 2014ರ ಚುನಾವಣೆಯಲ್ಲಿ ರಿಜಿಜು ಮತ್ತೊಮ್ಮೆ ಗೆದ್ದು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಭಯೋತ್ಪಾದಕರೊಂದಿಗೆ ನಂಟು: 6 ರಾಜ್ಯಗಳ 122 ಸ್ಥಳಗಳಲ್ಲಿ ಎನ್ಐಎ ದಾಳಿ
ನಂತರ ಅವರನ್ನು ಮೋದಿ ಸರ್ಕಾರದ ಎರಡನೇ ಅವಧಿ 2019ರಲ್ಲಿ ಕ್ರೀಡಾ ಸಚಿವರನ್ನಾಗಿ ನೇಮಿಸಲಾಯಿತು. 2021 ಜುಲೈನಲ್ಲಿ ಸಂಪುಟ ವಿಸ್ತರಣೆ ಸಮಯದಲ್ಲಿ ಅವರನ್ನು ಕಾನೂನು ಸಚಿವರನ್ನಾಗಿ ನೇಮಿಸಲಾಗಿತ್ತು.
ರವಿಶಂಕರ್ ಪ್ರಸಾದ್ ಬದಲಿಗೆ ಅವರಿಗೆ ಈ ಜವಾಬ್ದಾರಿ ನೀಡಲಾಗಿತ್ತು.