ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಮನವಮಿ ಹಿಂಸಾಚಾರದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಳೆದ ತಿಂಗಳು ಹೌರಾ, ಹೂಗ್ಲಿ ಹಾಗೂ ದಕ್ಷಿಣ ದಿನೈಪುರ್ ಜಿಲ್ಲೆಗಳಲ್ಲಿ ರಾಮನವಮಿ ಸಂಭ್ರಮಾಚರಣೆ ಸಂದರ್ಭದಲ್ಲಿ ಜರುಗಿದ ಹಿಂಸಾಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಒಪ್ಪಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ.
ವಿಪಕ್ಷ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ (ಏಪ್ರಿಲ್ 27) ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್ನ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂಸಾಚಾರದ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ಆರೋಪಿಸಿದ್ದರು. “ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಕೋಮು ಘರ್ಷಣೆ ಉದ್ದೀಪನಕ್ಕೆ ಬಿಜೆಪಿ ಪ್ರಯತ್ನಿಸಿದೆ. ಇತರ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ಗೂಂಡಾಗಳನ್ನು ತರಿಸಿ ಕೋಮು ಗಲಭೆ ಸೃಷ್ಟಿಸಲಾಗಿದೆ” ಎಂದು ಮಮತಾ ಹೇಳಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿ ಟಿಎಸ್ ಸಿವಗ್ನನಂ ಅವರು ಹಿಂಸಾಚಾರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಒಳಗೆ ನೀಡುವಂತೆ ಆದೇಶಿಸಿದ್ದಾರೆ. ದಾಖಲೆಗಳು ದೊರೆತ ತಕ್ಷಣ ಅದನ್ನು ಎನ್ಐಎಗೆ ಒಪ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್ ಸಮೀಕ್ಷೆ 7: ಬಡವರ ಓಟು ಕಾಂಗ್ರೆಸ್ಗೆ, ಮೇಲ್ಜಾತಿಗಳ ಹೆಚ್ಚು ಓಟು ಬಿಜೆಪಿಗೆ
ಪೊಲೀಸ್ ಸಿಬ್ಬಂದಿ ಸೇರಿದಂತೆ ಅನೇಕ ಮಂದಿ ಗಾಯಗೊಂಡಿದ್ದ ರಾಮನವಮಿ ಹಿಂಸಾಚಾರದ ಎನ್ಐಎ ತನಿಖೆಗೆ ಸುವೇಂದು ಅಧಿಕಾರಿ ಒತ್ತಾಯಿಸಿದ್ದರು. ಹೂಗ್ಲಿ ಜಿಲ್ಲೆಯ ರಿಶ್ರಾ, ಹೌರಾದ ಶಿಬ್ಪುರ್ ಹಾಗೂ ದಿನಜ್ಪುರ್ ಜಿಲ್ಲೆಯ ದಾಲ್ಕೋಲಾದಲ್ಲಿ ಹಿಂಸಾಚಾರ ನಡೆದಿತ್ತು. ಏಪ್ರಿಲ್ 5ರಂದು ಹೌರಾದಲ್ಲಿ ರಾಮನವಮಿ ಮೆರವಣಿಗೆ ಸಂದರ್ಭ ನಡೆದ ಹಿಂಸಾಚಾರದಲ್ಲಿ ಅನೇಕ ವಾಹನಗಳಿಗೆ ಬೆಂಕಿ ಇಡಲಾಗಿತ್ತು. ಕಲ್ಲುಗಳನ್ನು ಎಸೆಯಲಾಗಿತ್ತು ಹಾಗೂ ಅಂಗಡಿಗಳನ್ನು ನಾಶಪಡಿಸಲಾಗಿತ್ತು.
ಕೋಲ್ಕತ್ತಾ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್, “ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಹಿಂಸಾಚಾರದ ತನಿಖೆಯನ್ನು ಎನ್ಐಎಗೆ ವರ್ಗಾಯಿಸಿದ ಕೋಲ್ಕತ್ತಾ ಹೈಕೋರ್ಟ್ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ಗಲಭೆಗಳು ಪೂರ್ವಯೋಜಿತ ಮತ್ತು ಟಿಎಂಸಿ ಸರ್ಕಾರದ ಬೆಂಬಲದಲ್ಲಿ ನಡೆದಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಚೋದನಾಕಾರಿ ಭಾಷಣದಿಂದಾಗಿ ಗಲಭೆ ನಡೆದಿದೆ” ಎಂದು ಹೇಳಿದ್ದಾರೆ.