ಛತ್ತೀಸ್ಗಢದ ಕೋಮುಗಲಭೆ ನಂತರ ಏಪ್ರಿಲ್ 10ರಂದು ಬಿಜೆಪಿ ಮತ್ತು ವಿಎಚ್ಪಿ ನೇತೃತ್ವದ ನಡೆದ ಅಲ್ಪಸಂಖ್ಯಾತ ವಿರೋಧಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡಲಾಗಿದೆ.
ಇತ್ತೀಚೆಗೆ ಛತ್ತೀಸ್ಗಢದಲ್ಲಿ ಕೋಮು ಗಲಭೆ ನಡೆದ ಬಳಿಕ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸದಸ್ಯರು ಸಭೆ ನಡೆಸಿ ಮುಸ್ಲಿಮರು, ಕ್ರಿಶ್ಚಿಯನ್ ಸೇರಿದ ಅಲ್ಪಸಂಖ್ಯಾತ ಸಮುದಾಯವನ್ನು ಆರ್ಥಿಕವಾಗಿ ಬಹಿಷ್ಕರಿಸಲು ಸೂಚಿಸಿರುವುದಾಗಿ ವರದಿಯಾಗಿದೆ.
ರಾಜ್ಯದ ಬಮೆತರ ಜಿಲ್ಲೆಯಲ್ಲಿ ಏಪ್ರಿಲ್ 8ರಂದು ನಡೆದ ಕೋಮು ಗಲಭೆಗೆ ಒಬ್ಬ ವ್ಯಕ್ತಿ ಮೃತಪಟ್ಟು ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ಈ ಗಲಭೆಯ ನಂತರ ಹಿಂದುತ್ವ ಸಂಘಟನೆಗಳಾದ ಬಿಜೆಪಿ ಮತ್ತು ವಿಎಚ್ಪಿ ಏಪ್ರಿಲ್ 10ರಂದು ಸಭೆ ನಡೆಸಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವರು ಆರ್ಥಿಕ ವ್ಯವಹಾರಗಳನ್ನು ಮಾಡದಂತೆ ಬಹಿಷ್ಕರಿಸುವ ತೀರ್ಮಾನ ಕೈಗೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏಪ್ರಿಲ್ 8ರಂದು ಭಿನ್ನ ಸಮುದಾಯದ ಇಬ್ಬರು ಶಾಲಾ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಮೇಲೆ ಎರಡು ಸಮುದಾಯಗಳ ನಡುವೆ ಕೋಮು ಗಲಭೆ ಸೃಷ್ಟಿಯಾಗಿತ್ತು. 23 ವರ್ಷದ ದಿನಗೂಲಿ ಕಾರ್ಮಿಕ ಭುವನೇಶ್ವರ ಸಾಹು ಕೋಮು ಹಿಂಸೆಗೆ ಬಲಿಯಾಗಿದ್ದರು. ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ?: ಪುಲ್ವಾಮ ದಾಳಿ ದೋಷ ಮುಚ್ಚಿಟ್ಟು ಮೋದಿ ಚುನಾವಣಾ ಲಾಭ ಪಡೆದಿದ್ದರು: ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್
ಏಪ್ರಿಲ್ 10ರಂದು ವಿಎಚ್ಪಿ ಮತ್ತು ಹಿಂದುತ್ವ ಸಂಘಟನೆ ಬಜರಂಗ ದಳ ಬೆಂಬಲಿತ ಬಿಜೆಪಿ ಸದಸ್ಯರು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹರಡಿರುವ ವೈರಲ್ ವಿಡಿಯೋ ಒಂದರಲ್ಲಿ, ವಿಎಚ್ಪಿ ಸದಸ್ಯರೊಬ್ಬರು “ಎಲ್ಲಾ ಹಿಂದುಗಳು ತಮ್ಮ ಅಂಗಡಿಗಳಲ್ಲಿ ಮತ್ತು ಉದ್ಯಮಗಳಲ್ಲಿ ತಾವು ಹಿಂದೂ ಸಮುದಾಯದವರು ಎನ್ನುವ ಸೂಚನೆ ಹಾಕಿಕೊಳ್ಳಿ” ಎಂದು ಆದೇಶಿಸಿರುವುದು ಕಂಡುಬಂದಿದೆ.
ಆ ಸಂದರ್ಭದಲ್ಲಿ ಮಾಜಿ ಬಿಜೆಪಿ ಸಂಸದ ಬಸ್ತಾರ್ ದಿನೇಶ್ ಕಶ್ಯಪ್ ಮತ್ತು ರಾಜಕಾರಣಿ ಕಮಲ್ ಚಂದ್ರ ಭಂಜ್ದೆವಿ ಅವರೂ ಸ್ಥಳದಲ್ಲಿ ಹಾಜರಿದ್ದರು.
ವಿಡಿಯೋ ಪರಿಶೀಲಿಸಿ ಸ್ಥಳದಲ್ಲಿದ್ದ ಕೆಲವರೊಂದಿಗೆ ಮಾತನಾಡಿದ್ದೇವೆ. ಧರ್ಮ ಆಧಾರಿತ ವಿಭಜನೆ ಪ್ರಯತ್ನದ ಪ್ರಾಥಮಿಕ ಪ್ರಕರಣ ದಾಖಲಾಗಿದೆ ಎಂದು ಬಸ್ತಾರ್ ವಲಯದ ಐಜಿಪಿ ಹೇಳಿದ್ದಾರೆ.
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ಕೋಮು ಗಲಭೆಯಾದ ವಾರದೊಳಗೆ ಬಂಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.