ಮಹಾರಾಷ್ಟ್ರದ ಪಾಲ್ಘರ್ ರೈಲ್ವೆ ನಿಲ್ದಾಣದ ಬಳಿ ರೈಲ್ವೇ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿ ಸೋಮವಾರ ಬೆಳಗ್ಗೆ ರೈಲಿನಲ್ಲಿದ್ದ ಸಹಾಯಕ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೈಪುರ – ಮುಂಬೈ ರೈಲಿನ (12956) ಬಿ5 ಎಸಿ ಕೋಚ್ನಲ್ಲಿ ಈ ಘಟನೆ ನಡೆದಿದೆ. ಗುಂಡು ಹಾರಿಸಿದ ಕಾನ್ಸ್ಟೆಬಲ್ ಭಾಯಂದರ್ನಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ, ಆರ್ಪಿಎಫ್ ಕಾನ್ಸ್ಟೆಬಲ್ ಚೇತನ್ ಸಿಂಗ್, ಬೆಳಗ್ಗೆ 5 ಗಂಟೆಯ ಸುಮಾರಿಗೆ ತನ್ನ ಸ್ವಯಂಚಾಲಿತ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಿದ್ದು, ಮತ್ತೊಬ್ಬ ಆರ್ಪಿಎಫ್ ಸಹೋದ್ಯೋಗಿ, ಅವರ ಎಸ್ಕಾರ್ಟ್ ಡ್ಯೂಟಿ ಇನ್ ಚಾರ್ಜ್ ಎಎಸ್ಐ ಟಿಕಾ ರಾಮ್ ಮೀನಾ ಹಾಗೂ ರೈಲಿನಲ್ಲಿ ಮುಂಬೈಗೆ ತೆರಳುತ್ತಿದ್ದ ಮೂವರು ಪ್ರಯಾಣಿಕರನ್ನು ಕೊಂದಿದ್ದಾನೆ. ಆರೋಪಿಯನ್ನು ಶಸ್ತಾಸ್ತ್ರ ಸಮೇತ ಬಂಧಿಸಲಾಗಿದೆ ಎಂದು ಜೈಪುರದಿಂದ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಹಿರಿಯ ಅಧಿಕಾರಿಯನ್ನು ಕೊಂದ ನಂತರ, ಕಾನ್ಸ್ಟೆಬಲ್ ಮತ್ತೊಂದು ಬೋಗಿಗೆ ಹೋಗಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದಾನೆ.
ಪಾಲ್ಘರ್ ನಿಲ್ದಾಣವನ್ನು ದಾಟಿದ ನಂತರ ಚಲಿಸುತ್ತಿರುವ ರೈಲಿನೊಳಗೆ ಆರ್ಪಿಎಫ್ ಕಾನ್ಸ್ಟೆಬಲ್ ಗುಂಡು ಹಾರಿಸಿ ನಾಲ್ವರನ್ನು ಗುಂಡಿಕ್ಕಿ ಕೊಂದ ನಂತರ ರೈಲಿನ ಚೈನ್ ಎಳೆದು ದಹಿಸರ್ ನಿಲ್ದಾಣದ ಬಳಿ ರೈಲಿನಿಂದ ಜಿಗಿದಿದ್ದಾನೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಣಿಪುರ ಹಿಂಸಾಚಾರ ನಿಲ್ಲಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಬೋರಿವಲಿ ನಿಲ್ದಾಣದಲ್ಲಿ ಎಲ್ಲ ನಾಲ್ಕು ಮೃತದೇಹಗಳನ್ನು ರೈಲಿನಿಂದ ಹೊರತೆಗೆಯಲಾಗಿದ್ದು, ಕಾಂದಿವಲಿಯ ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ.
ರೈಲ್ವೆ ಪೊಲೀಸರು ಮತ್ತು ಆರ್ ಪಿಎಫ್ ಅಧಿಕಾರಿಗಳ ಸಹಾಯದಿಂದ ಮೀರಾ ರೋಡ್ ನಲ್ಲಿ ಪೊಲೀಸರು ಚೇತನ್ ಸಿಂಗ್ ನ್ನು ಸೆರೆ ಹಿಡಿದಿದ್ದಾರೆ. ಆರೋಪಿ ಚೇತನ್ ಸಿಂಗ್ ಉತ್ತರಪ್ರದೇಶದ ಹತ್ರಾಸ್ ನಿವಾಸಿಯಾಗಿದ್ದಾನೆ.