ಒಡಿಶಾದ ಬಾಲೇಶ್ವರದ ತ್ರಿವಳಿ ರೈಲು ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೊಬ್ಬ ಟಿವಿ ನೇರ ಪ್ರಸಾರ ಕಾರ್ಯಕ್ರಮದಿಂದ ಪಾಲಕರ ಮಡಿಲು ಸೇರಿದ ಘಟನೆ ಭುವನೇಶ್ವರದ ಏಮ್ಸ್ನಲ್ಲಿ ನಡೆದಿದೆ.
ತ್ರಿವಳಿ ರೈಲು ದುರಂತದಲ್ಲಿ ಗಾಯಗೊಂಡಿದ್ದ ರಮಾನಂದ ಪಾಸ್ವಾನ್ (15) ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅಳವಡಿಸಿದ್ದ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ವೀಕ್ಷಿಸಿದ ರಮಾನಂದ, ಅಲ್ಲಿ ಪ್ರಸಾರವಾಗುತ್ತಿದ್ದ ದೂರದರ್ಶನ ಚಾನಲ್ನ ಸಂದರ್ಶನದಲ್ಲಿ ತನ್ನ ಪಾಲಕರನ್ನು ಗುರುತಿಸಿದ. ತಕ್ಷಣ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಹಾಗೂ ಆಸ್ಪತ್ರೆ ಸಿಬ್ಬಂದಿಯನ್ನು ಬಾಲಕ ಜಾಗೃತಗೊಳಿಸಿ ಪೋಷಕರ ಮಡಿಲು ಸೇರಿದ್ದಾನೆ.
“ದೂರದರ್ಶನ ವಾಹಿನಿ ವೀಕ್ಷಿಸಿದ್ದ ಬಾಲಕನು ತನ್ನ ಪೋಷಕರ ಗುರುತು ಹಿಡಿದಿದ್ದ. ನಂತರ ಈ ಕುರಿತು ಆಸ್ಪತ್ರೆಯ ಪ್ರಾಧಿಕಾರಗಳಿಗೆ ಮಾಹಿತಿ ನೀಡಿದ್ದ. ಇದಾದ ನಂತರ ಆಸ್ಪತ್ರೆಯ ಆಡಳಿತ ಮಂಡಳಿ ದೂರದರ್ಶನ ವಾಹಿನಿಯ ಕಚೇರಿಗೆ ಕರೆಮಾಡಿ, ಆ ಸಂದರ್ಶನದ ವಿಡಿಯೋಗಳನ್ನು ಪಡೆದಿತ್ತು. ಆ ವಿಡಿಯೋಗಳನ್ನು ಮತ್ತೆ ರಮಾನಂದನಿಗೆ ತೋರಿಸಿ ಆತನ ಪೋಷಕರು ಎಂಬ ಸಂಗತಿಯನ್ನು ದೃಢಪಡಿಸಿಕೊಂಡಿತ್ತು. ಅನಂತರ ಆಸ್ಪತ್ರೆ ಪ್ರಾಧಿಕಾರವು ರಮಾನಂದನನ್ನು ಆತನ ಪೋಷಕರೊಂದಿಗೆ ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು” ಎಂದು ವೈದ್ಯಕೀಯ ಕಾಲೇಜಿನ ತುರ್ತುಪರಿಸ್ಥಿತಿ ಅಧಿಕಾರಿ ಡಾ. ಬಿ.ಎನ್. ಮೋಹರನ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಹಜೀವನ ಸಂಗಾತಿಯನ್ನು ತುಂಡುತುಂಡಾಗಿ ಕತ್ತರಿಸಿ ಕುಕ್ಕರಲ್ಲಿ ಬೇಯಿಸಿದ!
ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ ಹರಿ ಪಾಸ್ವಾನ್, “ನನ್ನ ಪುತ್ರನನ್ನು ಪತ್ತೆ ಹಚ್ಚಿದ್ದಕ್ಕೆ ಸಂತಸವಾಗಿದೆ. ಆತ ನಮ್ಮ ಮೂವರು ಸಂಬಂಧಿಕರೊಂದಿಗೆ ಪ್ರಯಾಣಿಸುತ್ತಿದ್ದ. ಅವರೆಲ್ಲ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ, ನನ್ನ ಮಗ ಮಾತ್ರ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾನೆ” ಎಂದು ತಿಳಿಸಿದ್ದಾರೆ.
ಜೂನ್ 2ರ ರಾತ್ರಿ 7 ಗಂಟೆ ಸಮಯದಲ್ಲಿ ಲೂಪ್ ಹಳಿಯಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಕೋರಮಂಡಲ್ ಎಕ್ಸ್ಪ್ರೆಸ್ ರೈಲು ಗುದ್ದಿತ್ತು. ಇದರಿಂದ ಅದರ ಕೆಲವು ಬೋಗಿಗಳು ಅದೇ ಸಮಯದಲ್ಲಿ ಬೆಂಗಳೂರಿನಿಂದ ಹೌರಾಗೆ ಸಾಗುತ್ತಿದ್ದ ಬೆಂಗಳೂರು – ಹೌರಾ ಎಕ್ಸ್ಪ್ರೆಸ್ ರೈಲಿನ ಮೇಲೆ ಮಗುಚಿಕೊಂಡು ಬಿದ್ದಿದ್ದವು. ಈ ಅಪಘಾತದಲ್ಲಿ ಒಟ್ಟಾರೆ 288 ಮಂದಿ ಸಾವಿಗೀಡಾಗಿದ್ದು, 1200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.