ಮಣಿಪುರದಲ್ಲಿ ಮೇ 3ರಿಂದ ಹೇರಲಾಗಿರುವ ಅನಿರ್ದಿಷ್ಟಾವಧಿ ಇಂಟರ್ನೆಟ್ ನಿಷೇಧ ಪ್ರಶ್ನಿಸಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.
ರಾಜ್ಯದಲ್ಲಿ ಪರಿಸ್ಥಿತಿ ತಿಳಿಯಾಗಿದ್ದರೂ ದ್ವೇಷಮಯ ವಾತಾವರಣ ನಿಯಂತ್ರಣಕ್ಕೆ ಬಂದಿದ್ದರೂ ರಾಜ್ಯಾದ್ಯಂತ ಇಂಟರ್ನೆಟ್ ನಿಷೇಧ ಆದೇಶವನ್ನು ಮಣಿಪುರ ಸರ್ಕಾರ ಪದೇ ಪದೇ ಹೊರಡಿಸುತ್ತಿದೆ ಎಂದು ಅರ್ಜಿದಾರರಾದ ವಕೀಲ ಚೋಂಗ್ಥಮ್ ವಿಕ್ಟರ್ ಸಿಂಗ್ ಮತ್ತು ಉದ್ಯಮಿ ಮಾಯೆಂಗ್ಬಾಮ್ ಜೇಮ್ಸ್ ಆರೋಪಿಸಿದ್ದಾರೆ.
ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿರುವ ಅರ್ಜಿದಾರರು, ಇಂಟರ್ನೆಟ್ ನಿಷೇಧಗೊಳಿಸಿರುವುದರಿಂದ ರಾಜ್ಯದ ನಿವಾಸಿಗಳು ಭಯ, ಆತಂಕ, ಅಸಹಾಯಕತೆ ಮತ್ತು ಹತಾಶೆಯ ಭಾವನೆಗಳನ್ನು ಅನುಭವಿಸಿದ್ದಾರೆ. ಸಾಮಾನ್ಯ ಜನರ ದೈನಂದಿನ ಚಟುವಟಿಕೆ ಸಾಧ್ಯವಾಗುತ್ತಿಲ್ಲ. ಕಚೇರಿ ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೈಲು ಅಪಘಾತದ ನಂತರ ಸಾವಿರಾರು ಟಿಕೆಟ್ ರದ್ದು; ಐಆರ್ಸಿಟಿಸಿ ನಿರಾಕರಣೆ
ಮಕ್ಕಳನ್ನು ಶಾಲೆಗೆ ಕಳುಹಿಸಲು, ಬ್ಯಾಂಕ್ ಖಾತೆ ಬಳಸಲು, ಹಣ ಪಾವತಿ ಅಥವಾ ಸಂದಾಯಕ್ಕೆ, ಅಗತ್ಯ ಸಾಮಗ್ರಿ ಮತ್ತು ಔಷಧ ಇತ್ಯಾದಿಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಿಷೇಧದಿಂದಾಗಿ ಜೀವನ ಮತ್ತು ಜೀವನೋಪಾಯ ಸ್ಥಗಿತಗೊಂಡಿದೆ. ವಾಕ್ ಸ್ವಾತಂತ್ರ್ಯ ಮತ್ತು ವ್ಯಾಪಾರ ಮತ್ತು ಉದ್ಯೋಗವನ್ನು ಮುಂದುವರಿಸುವ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಚಲಾಯಿಸಲು ಜನರಿಗೆ ಅವಕಾಶ ನೀಡದೆ ಇರುವುದರಿಂದ ಈ ರೀತಿಯ ಆದೇಶಗಳು ತಾರತಮ್ಯ ಎಸಗುತ್ತಿವೆ ಎಂದು ಆರೋಪಿಸಲಾಗಿದೆ.
ಅಂತರ್ಜಾಲ ನಿಷೇಧದಿಂದ ಕಾನೂನುಬದ್ಧ ಗುರಿ ಈಡೇರುವುದಿಲ್ಲ. ಈಗಿನ ಪರಿಸ್ಥಿತಿ ಗಮನಿಸಿದರೆ ಕಾನೂನು ಮತ್ತು ಸುವ್ಯವಸ್ಥೆಯ ಉದ್ದೇಶದೊಂದಿಗೆ ನಿಷೇಧ ನೇರ ಸಂಬಂಧ ಹೊಂದಿಲ್ಲ. ಅಂತರ್ಜಾಲ ನಿಷೇಧ ಕುರಿತಾದ ಅಧಿಸೂಚನೆಗಳನ್ನು ಯಾವುದೇ ವೆಬ್ಸೈಟ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿಲ್ಲ. ಹೀಗಾಗಿ, ನಿವಾಸಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಅಥವಾ ನಿಷೇಧ ಪ್ರಶ್ನಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ, ಎಲ್ಲ ಜಿಲ್ಲೆಗಳಲ್ಲಿ ಅಂತರ್ಜಾಲ ಸೇವೆ ಮತ್ತೆ ಆರಂಭಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.