- ವಿವಾದಿತ ‘ದಿ ಕೇರಳ ಸ್ಟೋರಿ’ ಬಿಡುಗಡೆಗೆ ತಡೆ ಕೋರಿ ಅರ್ಜಿ
- ಅರ್ಜಿ ಸಲ್ಲಿಸಿದ್ದ ಜಮಿಯತ್ ಉಲಮಾ-ಐ-ಹಿಂದ್ ಸಂಘಟನೆ
ದೇಶಾದ್ಯಂತ ವಿವಾದದ ಬಿರುಗಾಳಿ ಎಬ್ಬಿಸಿರುವ ಬಾಲಿವುಡ್ ಸಿನಿಮಾ ”ದಿ ಕೇರಳ ಸ್ಟೋರಿ’ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಶುಕ್ರವಾರ, ಮೇ 5ರಂದು ತೆರೆಗೆ ಬರಲು ಸಿದ್ಧವಾಗಿರುವ ‘ದಿ ಕೇರಳ ಸ್ಟೋರಿ’ ಸಿನಿಮಾ ದ್ವೇಷಪೂರಿತ ಸಂಭಾಷಣೆಗಳನ್ನು ಒಳಗೊಂಡಿದೆ. ಇದೊಂದು ‘ಪ್ರಚಾರಾಭಿಯಾನಕ್ಕಾಗಿ ನಿರ್ಮಿಸಿದ ಸಿನಿಮಾ’ವಾಗಿರುವುದರಿಂದ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಜಮಿಯತ್ ಉಲಮಾ-ಇ-ಹಿಂದ್ ಸಂಘಟನೆ ಅರ್ಜಿ ಸಲ್ಲಿಸಿತ್ತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಹಾಗೂ ನಿಜಾಮ್ ಪಾಷಾ ಈ ಚಿತ್ರವು ದ್ವೇಷ ಭಾಷಣದ ದೃಶ್ಯ ರೂಪದ ಪ್ರಚಾರ. ಚಿತ್ರ ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಕಾರಣ ನಾವು ಸುಪ್ರೀಂ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದೇವೆ. ದ್ವೇಷ ಭಾಷಣದ ವಿಚಾರವಾಗಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗಾಗಿ ಅರ್ಜಿ ಸಲ್ಲಿಸಿರುವುದಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಎನ್ಸಿಪಿ ಅಧ್ಯಕ್ಷ ಸ್ಥಾನ ತೊರೆಯುವ ನಿರ್ಧಾರ ಪ್ರಕಟಿಸಿದ ಶರದ್ ಪವಾರ್
ಅರ್ಜಿದಾರರ ವಾದ ಆಲಿಸಿದ ಜಸ್ಟಿಸ್ ಕೆ ಎಂ ಜೋಸೆಫ್ ಹಾಗೂ ಬಿ ವಿ ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠವು, “ದ್ವೇಷ ಭಾಷಣಗಳಲ್ಲಿ ವೈವಿಧ್ಯತೆ ಇದೆ. ಒಬ್ಬ ವ್ಯಕ್ತಿ ವೇದಿಕೆಯನ್ನು ಏರಿ ಭಾಷಣ ಮಾಡಿದಂತಲ್ಲ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಸಿಕ್ಕಿದೆ. ಮೊದಲು ನೀವು ಮಂಡಳಿಯನ್ನು ಪ್ರಶ್ನಿಸಿ ಆ ನಂತರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು” ಎಂದು ಹೇಳಿತು.
ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೊದಲು ನೀವು ಹೈಕೋರ್ಟ್ಗೆ ಹೋಗಬೇಕಿತ್ತು, ಇದೇನು ಮೈದಾನವಲ್ಲ. ಇಲ್ಲಿದ್ದರೆ ಎಲ್ಲರೂ ಸುಪ್ರೀಂ ಕೋರ್ಟ್ಗೆ ಬರಲು ಪ್ರಾರಂಭಿಸುತ್ತಾರೆ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.