ಗುಜರಾತ್ನ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ನಿಂದ ಸೋನಾಲ್ ಪಟೇಲ್ ಕಣಕ್ಕಿಳಿದಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕನ ವಿರುದ್ಧ ಹೋರಾಡಲು ಯಾವುದೇ ಹಿಂಜರಿಕೆಯಿಲ್ಲ ಎಂದು ಅವರು ಹೇಳಿದ್ದಾರೆ.
ಎಐಸಿಸಿ ಕಾರ್ಯದರ್ಶಿಯಾಗಿರುವ 62 ವರ್ಷದ ಸೋನಾಲ್ ಅವರು ಗಾಂಧಿನಗರದಲ್ಲಿ ತಮ್ಮ ಪ್ರಚಾರ ಆರಂಭಿಸಿದ್ದಾರೆ. “ಬಿಜೆಪಿ ತಾನು ನೀಡಿದ್ದ ಭರವಸೆಗಳನ್ನು ಮತ್ತು ಜನರ ಆಕ್ಷಾಂಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ದೇಶದಲ್ಲಿ ಆಡಳಿತ ವಿರೋಧಿ ಅಲೆಯಿದೆ” ಎಂದು ಹೇಳಿದ್ದಾರೆ.
“ನಾನು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚಟುವಟಿಕೆಗಳನ್ನು ನಿಭಾಯಿಸುತ್ತಿದ್ದೆ. ನಾನು ಪಕ್ಷದಲ್ಲಿ ಟಿಕೆಟ್ಗೆ ಬೇಡಿಕೆ ಇಟ್ಟಿರಲಿಲ್ಲ. ಪಕ್ಷವು ನನ್ನ ಆಯ್ಕೆ ಮಾಡಿ, ಗಾಂಧಿನಗರದಲ್ಲಿ ಕಣಕ್ಕಿಳಿಸಿದೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧಳಾಗಿದ್ದೇನೆ” ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
“ನಮ್ಮ ಕಾರ್ಯಕರ್ತರನ್ನು ಬೆದರಿಸಲಾಗುತ್ತಿದೆ. ಚುನಾವಣೆ ಮುಗಿದ ನಂತರ ಟಾರ್ಗೆಟ್ ಮಾಡುತ್ತಾರೆಂಬ ಭಯದಿಂದ ಹಲವರು ನಮ್ಮ ಸಭೆಗಳಿಗೆ ಬಾಡಿಗೆಗೆ ಜಾಗ ನೀಡುತ್ತಿಲ್ಲ. ಕೆಲವು ಕ್ಷುಲ್ಲಕ ಪ್ರಕರಣಗಳಲ್ಲಿ ನಮ್ಮ ಕಾರ್ಯಕರ್ತರು ಮತ್ತು ಮುಖಂಡರನ್ನು ಪೊಲೀಸರು ಠಾಣೆಗೆ ಕರೆಸುತ್ತಿದ್ದಾರೆ. ಆಡಳಿತ ಯಂತ್ರವನ್ನು ಬಳಸಿಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ” ಎಂದು ಆರೋಪಿಸಿದರು.
“ಬಿಜೆಪಿಯ ಸ್ಥಳೀಯ ನಾಯಕರು ನಡೆಸುತ್ತಿರುವ ಈ ಕುತಂತ್ರಗಳ ಬಗ್ಗೆ ಅಮಿತ್ ಶಾ ಅವರಿಗೆ ತಿಳಿದಿದೆಯೇ ಎಂಬುದು ಗೊತ್ತಿಲ್ಲ. ಆದರೆ, ಬಿಜೆಪಿ ನಡೆದುಕೊಳ್ಳುತ್ತಿರುವುದು ಆ ಪಕ್ಷ ಭಯಗೊಂಡಿದೆ ಎಂಬುದನ್ನು ಸೂಚಿಸುತ್ತದೆ” ಎಂದು ಅವರು ಹೇಳಿದರು.
“ಅಮಿತ್ ಶಾ ದೇಶದ ಗೃಹ ಸಚಿವರಾಗಿರಬಹುದು. ಆದರೆ, ಅವರು ಸಾಮಾನ್ಯ ಬಿಜೆಪಿ ಕಾರ್ಯಕರ್ತರಾಗಿದ್ದ ದಿನಗಳಿಂದ ನಾವು ಅವರನ್ನು ನೋಡಿದ್ದೇವೆ. ನನ್ನ ತಂದೆ ನಾರಣಪುರದಿಂದ ಕಾಂಗ್ರೆಸ್ ಪುರಸಭೆ ಸದಸ್ಯರಾಗಿದ್ದರು. ನಾರಣಪುರದಲ್ಲಿ ಅಮಿತ್ ಶಾ ಬೆಳೆದದ್ದನ್ನು ನಾವು ನೋಡಿದ್ದೇವೆ. ನಾನು ಕೂಡ ಅವರಂತೆ ತಳಮಟ್ಟದಿಂದ ಕೆಲಸ ಮಾಡಿದ್ದೇನೆ” ಎಂದು ವಿವರಿಸಿದರು.
“ಜನರು ಮತ ಚಲಾಯಿಸುವಾಗ ಅವರು ಗೃಹ ಮಂತ್ರಿ ಅಥವಾ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತೆ ಎಂಬುದನ್ನು ನೋಡಿ, ಆಯ್ಕೆ ಮಾಡುವುದಿಲ್ಲ. ಜನರು ಅಭ್ಯರ್ಥಿಗಳಾ ನೋಡುತ್ತಾರೆ. ಅವರ ವಿರುದ್ಧ ಸ್ಪರ್ಧೆಗೆ ನನಗೆ ಯಾವ ಹಿಂಜರಿಕೆಯೂ ಇಲ್ಲ” ಎಂದು ಹೇಳಿದರು.
“ಅವರು ಅಭಿವೃದ್ಧಿ ಮಾಡಿದ್ದೇವೆಂದು ಹೇಳಿಕೊಳ್ಳುತ್ತಾರೆ. ಆದರೆ, ಬಡವರು ಇನ್ನೂ ಬಡವರಾಗುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಹಳ್ಳಿಗಳಲ್ಲಿ ಉದ್ಯೋಗಾವಕಾಶಗಳಿಲ್ಲ. ರೈತರ ಹಿಡುವಳಿಯೂ ಕಡಿಮೆಯಾಗುತ್ತಿದೆ. ಹಳ್ಳಿಗನೊಬ್ಬ ನಗರಕ್ಕೆ ಹೋದಾಗ, ಅವರು ತೀವ್ರ ಹಣದುಬ್ಬರವನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಬಿಜೆಪಿ ಬಳಿ ಉತ್ತರವಿಲ್ಲ” ಎಂದು ಆರೋಪಿಸಿದರು.
ಗುಜರಾತ್ನಲ್ಲಿ 26 ಲೋಕಸಭಾ ಕ್ಷೇತ್ರಗಳಿದ್ದು, ಮೇ 7 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.