ಕೇಂದ್ರ ಸರ್ಕಾರವು ಈ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಗುರುವಾರ ರಾತ್ರಿ ಪ್ರಕಟಿಸಿದೆ.
ಉದ್ಯಮಿ ಸೀತಾರಾಮ್ ಜಿಂದಾಲ್ ಸೇರಿದಂತೆ ಕರ್ನಾಟಕದ ಒಂಬತ್ತು ಸಾಧಕರು ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.
ಅನನ್ಯ ಸಾಧನೆ ಮಾಡಿದ ಐವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಮತ್ತು 110 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಟೆನಿಸ್ ಆಟಗಾರ ರೋಹನ್ ಬೋಪಣ್ಣ ಸೇರಿದಂತೆ ರಾಜ್ಯದ ಎಂಟು ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.
200 ದೇಸಿ ಭತ್ತದ ತಳಿಗಳನ್ನು ಬೆಳೆಸಿ ಅವುಗಳ ಬೀಜಗಳನ್ನು ಸಂರಕ್ಷಿಸಿದ ಕಾಸರಗೋಡಿನ ಕೃಷಿಕ ಬೆಳೇರಿ ಸತ್ಯನಾರಾಯಣ ಅವರೂ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆಗಾಗಿ ಬೆಂಗಳೂರಿನ ಪ್ರೇಮಾ ಧನರಾಜ್ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ನಾಲ್ಕು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿರುವ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಮೊತ್ತ ಹಾಡಿಯ ಸೋಮಣ್ಣ ಅವರಿಗೆ ‘ಪದ್ಮಶ್ರೀ’ ಗೌರವ ದೊರೆತಿದೆ. ರಾಜ್ಯ ಸರ್ಕಾರ 2016ನೇ ಸಾಲಿನಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿತ್ತು. ಮರು ದಿನ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿತ್ತು. ಇದನ್ನು ಖಂಡಿಸಿ ನಾಡಿನ ಪ್ರಗತಿಪರರು–ಚಿಂತಕರು ಸೇರಿಕೊಂಡು ಸಾಹಿತಿ ದೇವನೂರ ಮಹಾದೇವ ಅವರ ಸಮ್ಮುಖದಲ್ಲಿ ಅವರಿಗೆ ₹1 ಲಕ್ಷ ನಗದು ಒಳಗೊಂಡ ‘ಜನ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಗಿತ್ತು. ಈಗ ಅವರಿಗೆ ‘ಪದ್ಮಶ್ರೀ’ ಗೌರವ ದೊರೆತಿದೆ.
ಕರ್ನಾಟಕದ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಸೋಮಣ್ಣ – ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ
- ಪ್ರೇಮಾ ಧನರಾಜ್ – ಪ್ಲಾಸ್ಟಿಕ್ ಸರ್ಜನ್ ಮತ್ತು ಸಾಮಾಜಿಕ ಕಾರ್ಯಕರ್ತೆ
- ರೋಹನ್ ಬೋಪಣ್ಣ- ಕ್ರೀಡೆ
- ಅನುಪಮಾ ಹೊಸಕೆರೆ- ಕಲೆ
- ಶ್ರೀಧರ್ ಮಾಕಂ ಕೃಷ್ಣಮೂರ್ತಿ- ಸಾಹಿತ್ಯ & ಶಿಕ್ಷಣ
- ಕೆಎಸ್ ರಾಜಣ್ಣ- ಸಮಾಜ ಸೇವೆ
- ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್- ಮೆಡಿಸಿನ್
- ಶಶಿ ಸೋನಿ- ಟ್ರೇಡ್ ಮತ್ತು ಇಂಡಸ್ಟ್ರಿ
ಪದ್ಮಭೂಷಣ ಪ್ರಶಸ್ತಿ ಪಡೆದವರು
ಸೀತಾರಾಮ್ ಜಿಂದಾಲ್- ಟ್ರೇಡ್ ಮತ್ತು ಇಂಡಸ್ಟ್ರಿ- ಕರ್ನಾಟಕ
ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ಪುರಸ್ಕೃತರಲ್ಲಿ ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ನಟ ಚಿರಂಜೀವಿ, ವಿಜಯಕಾಂತ್ ಮತ್ತಿತರರು ಸೇರಿದ್ದಾರೆ.
ಪ್ರಶಸ್ತಿ ಪುರಸ್ಕೃತರಲ್ಲಿ ಹಲವಾರು ಬುಡಕಟ್ಟು ಜನಾಂಗದವರು, ಸಾಂಪ್ರದಾಯಿಕ ಔಷಧಿ ನೀಡುವವರು, ಕಲಾ ಸಾಧಕರು ಸೇರಿದ್ದಾರೆ. ಪ್ರಶಸ್ತಿ ಪುರಸ್ಕೃತರಲ್ಲಿ ಮೂವತ್ತು ಮಹಿಳೆಯರು ಮತ್ತು ಎಂಟು ಮಂದಿ ವಿದೇಶಿಗರು, ಅನಿವಾಸಿ ಭಾರತೀಯರು ಕೂಡ ಸೇರಿದ್ದಾರೆ. ಬಿಂದೇಶ್ವರ ಪಾಠಕ್ ಸೇರಿದಂತೆ ಒಂಬತ್ತು ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.
ಹುತಾತ್ಮ ಯೋಧ ಪ್ರಾಂಜಲ್ಗೆ ಶೌರ್ಯಚಕ್ರ
ಕಳೆದ ನವೆಂಬರ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿಉಗ್ರರ ದಾಳಿ ವೇಳೆ ಹುತಾತ್ಮರಾದ 63 ರಾಷ್ಟ್ರೀಯ ರೈಫಲ್ಸ್ ಸೇನಾ ಪಡೆಯ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ಗೆ ಶೌರ್ಯ ಚಕ್ರ (ಮರಣೋತ್ತರ) ಪ್ರಶಸ್ತಿ ಘೋಷಿಸಲಾಗಿದೆ.