“ಪಹಲ್ಗಾಮ್ ಭಯೋತ್ಪಾದಕ ಘಟನೆಗೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ. ಇದು ನಿಜವಾಗಲೂ ಚರ್ಚೆಯಾಗಬೇಕಿತ್ತು. ಆದರೆ, ಇದು ದೇಶದಲ್ಲಿ ಚರ್ಚೆಯಾಗದಂತೆ ನೋಡಿಕೊಳ್ಳಲು ಹಿಂದೂ-ಮುಸ್ಲಿಂ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ” ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ಘಟನೆಯ ಬಳಿಕ ಕಾಶ್ಮೀರದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ಮರಳಿ ರಾಜ್ಯಕ್ಕೆ ಕರೆ ತಂದ ಘಟನೆಯ ಬಳಿಕ ಬೆಂಗಳೂರಿನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದರು.
“ನಾನು ರಾಜಕೀಯ ಮಾತನಾಡುತ್ತಿಲ್ಲ. ಆದರೆ, ಭದ್ರತಾ ವೈಫಲ್ಯ ಆಗಿರುವುದನ್ನು ಮಾಧ್ಯಮಗಳು ಚರ್ಚೆ ಮಾಡುತ್ತಿಲ್ಲ. ಗೃಹ ಸಚಿವ, ಪ್ರಧಾನ ಮಂತ್ರಿಗಳ ರಾಜೀನಾಮೆ ಕೇಳುತ್ತಿಲ್ಲ. ಬದಲಿಗೆ ಹಿಂದೂ-ಮುಸ್ಲಿಂ ವಿಷಯ ಮುನ್ನೆಲೆಗೆ ತಂದು, ಸ್ಟುಡಿಯೋ ಮೂಲಕ ದೇಶಾದ್ಯಂತ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ಘಟನೆಯ ಬಳಿಕ ಅಲ್ಲಿ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದವರು ಮುಸ್ಲಿಮರಲ್ಲವೇ?” ಎಂದು ಲಾಡ್ ಪ್ರಶ್ನಿಸಿದರು.
“ಅಲ್ಲಿನ ಸ್ಥಳೀಯ ಜನರು ನಿಜಕ್ಕೂ ಶ್ಲಾಘನೆಗೆ ಅರ್ಹರು. ಉತ್ತಮ ಸ್ವಭಾವದವರು. ಅಲ್ಲಿನ ಜನ ಈ ಘಟನೆಯ ಬಳಿಕ ರಕ್ತ ಕಣ್ಣೀರು ಸುರಿಸುತ್ತಿದ್ದಾರೆ. ಭಯೋತ್ಪಾದಕರು ಹೇಗೆ ಘಟನಾ ಸ್ಥಳಕ್ಕೆ ನುಗ್ಗಿದ್ದು? ಅವರಿಗೆ ಬಂದೂಕು ಸಿಕ್ಕಿದ್ದು ಎಲ್ಲಿಂದ? ಭದ್ರತಾ ವೈಫಲ್ಯ ಹೇಗಾಯಿತು? ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಉತ್ತರಿಸಬೇಕಿತ್ತು. ಆದರೆ, ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ. ಘಟನೆ ನಡೆದು ಎರಡು ದಿನಗಳಾಗಿಲ್ಲ, ಆದರೆ ಪ್ರಧಾನಿ ಮೋದಿಯವರು ಬಿಹಾರದಲ್ಲಿ ಚುನಾವಣಾ ಭಾಷಣ ಮಾಡಲು ತೆರಳಿದ್ದಾರೆ. ಯಾಕೆ ಜಮ್ಮು ಕಾಶ್ಮೀರಕ್ಕೆ ಹೋಗಲಿಲ್ಲ. ಭಾರತೀಯರು ಈ ಬಗ್ಗೆ ಪ್ರಶ್ನಿಸಬೇಕು” ಎಂದು ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.
“ಸಂತ್ರಸ್ತ ಮಹಿಳೆಯೋರ್ವರು 2000 ಜನ ಇದ್ದ ಪಹಲ್ಗಾಮ್ ಸ್ಥಳದಲ್ಲಿ ಒಬ್ಬ ಸೈನಿಕನಾಗಲೀ, ವಾಚ್ ಮೆನ್ ಆಗಲಿ ಇರಲಿಲ್ಲ ಯಾಕೆ ಎಂದು ಖುದ್ದಾಗಿ ಅಮಿತ್ ಶಾ ಭೇಟಿ ನೀಡಿದ ಸಂದರ್ಭದಲ್ಲಿ ನೇರವಾಗಿ ಪ್ರಶ್ನಿಸಿದ್ದರು. ಶ್ರೀನಗರದಲ್ಲಿ ಸುಮಾರು 7 ಲಕ್ಷ ಜನಕ್ಕಿಂತಲೂ ಹೆಚ್ಚು ಭದ್ರತಾ ಸಿಬ್ಬಂದಿ ಇದ್ದರೂ, ಪಹಲ್ಗಾಮ್ ಸ್ಥಳದಲ್ಲಿ ಒಬ್ಬರೂ ಇರಲಿಲ್ಲ. ಶ್ರೀನಗರದಲ್ಲಿ ಒಂದು ಪ್ಯಾಕೆಟ್ ಬಿಸ್ಕೆಟ್ ತೆಗೆದುಕೊಂಡು ಹೋಗಬೇಕಾದರೂ ಪರಿಶೀಲನೆ ಮಾಡಲಾಗುತ್ತದೆ. ಈ ನಡುವೆ ಭಯೋತ್ಪಾದಕರು ಹೇಗೆ ನುಗ್ಗಿದರು. ಇದು ಭದ್ರತಾ ವೈಫಲ್ಯವಲ್ಲವೇ. ಈ ಬಗ್ಗೆ ದೇಶದ ಜನರು ಮೋದಿ ಸರ್ಕಾರವನ್ನು ಪ್ರಶ್ನಿಸಬೇಕು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹತ್ಯೆಗೆ ಮುನ್ನ ಹೆಸರು ಕೇಳಿದ್ದೇಕೆ? ಪ್ರವಾಸಿಗರನ್ನೇ ಕೊಂದ ಮರ್ಮವೇನು
“ಮೀಡಿಯಾ, ಸೋಷಿಯಲ್ ಮೀಡಿಯಾ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಹಿಂದೂ ಮುಸ್ಲಿಂ ಚರ್ಚೆ ಮಾಡಲಾಗುತ್ತಿದೆ. 24 ತಾಸುಗಳು ಮುಸ್ಲಿಮರ ವಿರುದ್ಧ ದ್ವೇಷ ಹರಡುವಂತೆ ಮಾಡಲಾಗುತ್ತಿದೆ. ಹಿಂದೂಗಳ ಬಗ್ಗೆ ಮಾತನಾಡುವ ಬಿಜೆಪಿಯವರು, ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರು ಹಿಂದೂಗಳಲ್ಲವೇ? ಈ ಬಗ್ಗೆ ತನಿಖೆ ಏನಾಯ್ತು ಎಂಬ ಬಗ್ಗೆ ಯಾಕೆ ಬಿಜೆಪಿಯವರು ಪ್ರಶ್ನೆ ಮಾಡುವುದಿಲ್ಲ” ಎಂದು ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
“ಕಳೆದ 11 ವರ್ಷಗಳಲ್ಲಿ ಆಗಿರುವ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ವಿವರಗಳು ಬಹಿರಂಗವಾಗಿ ಚರ್ಚೆಯಾಗಬೇಕು. ಮೋದಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇರೆ ಬಿಜೆಪಿ ನಾಯಕರಿಗೆ ಅವಕಾಶ ಮಾಡಿಕೊಡಬೇಕು. ಮೋದಿಯವರು ಈ ದೇಶಕ್ಕೆ ನೀಡಿದ ಕೊಡುಗೆ ಶೂನ್ಯ” ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.