ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆಯೇ ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮತದಾನ ನಡೆದಿದ್ದು, ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರು.
ಓರ್ವ ಅಭ್ಯರ್ಥಿ ಗೆಲುವು ಸಾಧಿಸಲು 45 ಶಾಸಕರ ಮತಗಳ ಅಗತ್ಯವಿದ್ದು, ಅದರಂತೆ ಶಾಸನಸಭೆಯಲ್ಲಿ 138 ಶಾಸಕರನ್ನು ಹೊಂದಿರುವ ಕಾಂಗ್ರೆಸ್, ನಾಲ್ವರು ಪಕ್ಷೇತರ ಶಾಸಕರ ನೆರವಿನೊಂದಿಗೆ ಮೂರು ಸ್ಥಾನ ಗಳಿಸಲು ಯಶಸ್ವಿಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಾಕೇನ್, ನಾಸೀರ್ ಹುಸೇನ್ ತಲಾ 47 ಮತ್ತು ಜಿ ಸಿ ಚಂದ್ರಶೇಖರ್ 45 ಮತಗಳನ್ನು ಪಡೆದು ಆಯ್ಕೆಯಾದರು. ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ಪುಟ್ಟಸ್ವಾಮಿ ಗೌಡ, ಜನಾರ್ದನ ರೆಡ್ಡಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದರು.
ಬಿಜೆಪಿಯ ನಾರಾಯಣಸಾ ಬಾಂಡಗೆ ಅವರು 47 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಪವಾಡದ ನಿರೀಕ್ಷೆಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ನಿರಾಸೆಯಾಗಿದೆ. ವಿಶೇಷವೆಂದರೆ ಜೆಡಿಎಸ್ನ ಎಲ್ಲ ಶಾಸಕರು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕುವ ಮೂಲಕ ಗಮನ ಸೆಳೆದರು.
ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ
ಮತಗಟ್ಟೆಗೆ ಎಲ್ಲ ಶಾಸಕರು ಅತ್ಯಂತ ಉತ್ಸಾಹದಿಂದ ಆಗಮಿಸಿ ಮತ ಚಲಾಯಿಸಿದರೆ ಬಿಜೆಪಿಯ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಮತ್ತೋರ್ವ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಮತದಾನ ಚಟುವಟಿಕೆಯಿಂದ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.
ಅಡ್ಡ ಮತದಾನದ ಭೀತಿ ಎದುರಿಸುತ್ತಿದ್ದ ಜೆಡಿಎಸ್ ನಲ್ಲಿ ಯಾವುದೇ ವಿದ್ಯಮಾನಗಳು ನಡೆಯಲಿಲ್ಲ. ಗುರುಮಠಕಲ್ ಶಾಸಕ ಶರಣ ಗೌಡ ಕುಂದಕೂರ ಸೇರಿದಂತೆ ಎಲ್ಲ ಶಾಸಕರು ನಿಗದಿತ ಸಮಯಕ್ಕೆ ಹಾಜರಾಗಿ ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರವಾಗಿ ಮತ ಚಲಾಯಿಸುವ ಮೂಲಕ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಪ್ರಸಾದ ಬೇಡ ಬಸ್ ಬೇಕು’ ಎಂದ ಬಾಲಕಿಯ ಮನವಿಯಲ್ಲಿದೆ ಮಹತ್ವದ ಸಂದೇಶ
ಬಿಜೆಪಿ ಶಾಸಕ ಸುರೇಶ್ಕುಮಾರ್ ಮೊದಲಿಗರಾಗಿ ಬಂದು ಮತ ಹಾಕಿದರು. ನಂತರ ಎಲ್ಲಾ ಶಾಸಕರು ಒಬ್ಬೊಬ್ಬರಾಗಿ ಬಂದು ಮತ ಹಾಕಿದರು. ನಂತರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್, ಸಚಿವ ಎಂ.ಬಿ. ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಹುತೇಕ ಶಾಸಕರು ಮಧ್ಯಾಹ್ನ 2 ರ ಹೊತ್ತಿಗೆ ಎಲ್ಲರೂ ಬಂದು ತಮ್ಮ ಮತ ಹಾಕಿದರು. ಹನೂರು ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಆರ್. ಮಂಜುನಾಥ್ ಕೊನೆಯವರಾಗಿ ಮತ ಚಲಾಯಿಸಿದರು.
ಶಿವರಾಮ್ ಹೆಬ್ಬಾರ್ ಗೈರು
ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಮತಗಟ್ಟೆಯ ಕಡೆ ಸುಳಿಯಲಿಲ್ಲ. ಇಂದು ಬೆಳಗಿನ ವರೆಗೆ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದ ಹೆಬ್ಬಾರ್ ಅವರು ಮತದಾನ ಆರಂಭಕ್ಕೆ ಕೆಲವೇ ಗಂಟೆಗಳು ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದರು.
ಹೆಬ್ಬಾರ್ ಅವರು ಎಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಅವರನ್ನು ಹುಡುಕಲು ಮಾಡಿದ ಎಲ್ಲ ಪ್ರಯತ್ನ ವಿಫಲವಾದವು. ಕೊನೆಗೆ ಪಕ್ಷದ ಶಾಸಕಾಂಗ ಕಾರ್ಯದರ್ಶಿ ಹೆಬ್ಬಾರ್ ಅವರ ಶಾಸಕರ ಭವನದ ಕಚೇರಿಗೆ ತೆರಳಿ ಕಚೇರಿಯ ಬಾಗಿಲಿಗೆ ಪಕ್ಷದ ವಿಪ್ ಅಂಟಿಸಿದರು. ಆನಂತರ ಪಕ್ಷದ ಇತರೆ ಮುಖಂಡರು ಅವರ ನಿವಾಸಕ್ಕೂ ತೆರಳಿದ ಮನೆಯ ಬಾಗಿಲಿಗೆ ವಿಪ್ ಅಂಟಿಸಿ ಬಂದರು.
ಮತ್ತೊಂದಡೆಯಲ್ಲಿ ಪಕ್ಷದ ಸುನಿಲ್ ಕುಮಾರ್ ಸೇರಿದಂತೆ ಅನೇಕ ನಾಯಕರು ಹೆಬ್ಬಾರ್ ಅವರನ್ನು ಸಂಪರ್ಕಿಸಲು ಸತತ ಪ್ರಯತ್ನ ನಡೆಸಿದರು. ಯಾರ ಸಂಪರ್ಕಕ್ಕೂ ಅವರು ಸಿಗಲಿಲ್ಲ. ಆ ವೇಳೆಗಾಗಲೇ ಮತದಾನದ ಅವಧಿ ಪೂರ್ಣಗೊಂಡ ಪರಿಣಾಮ ಅವರು ಸಂಪರ್ಕಿಸುವ ಯತ್ನವನ್ನು ಕೈಬಿಡಲಾಯಿತು.
