ಹೊಸಪೇಟೆಯ ರೈಲು ನಿಲ್ದಾಣದಲ್ಲಿ ಅಯೋಧ್ಯೆ ಧಾಮ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಭಕ್ತರನ್ನು ಅವಹೇಳನ ಮಾಡಿದ ಪ್ರಕರಣ ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಪ್ರತಿಧ್ವನಿಸಿ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಗದ್ದಲಕ್ಕೆ ಕಾರಣವಾಯಿತು.
ವಿಧಾನ ಪರಿಷತ್ತಿನ ಕಲಾಪ ಆರಂಭವಾದ ಕೂಡಲೇ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ವಿಷಯ ಪ್ರಸ್ತಾಪಿಸಿ, “ಅಯೋಧ್ಯೆಗೆ ಹೋಗಿ ಬರುತ್ತಿದ್ದ ರಾಮ ಭಕ್ತರಿಗೆ ದುಷ್ಕರ್ಮಿಗಳು ಧಮಕಿ ಹಾಕಿದ್ದಾರೆ. ಬೆಂಕಿ ಹಚ್ಚುತ್ತೇವೆ ಎನ್ನುತ್ತಾರೆ. ಅಂತಹ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಇದನ್ನು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಾಣುತ್ತದೆ” ಎಂದರು.
“ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್, ರಾಮಮಂದಿರ ಪ್ರತಿಷ್ಠಾಪನೆ ಬಳಿಕ ಗೋಧ್ರಾ ಹತ್ಯಾಕಾಂಡದಂತಹ ದುರಂತ ನಡೆಯಬಹುದು ಎಂದು ಹೇಳಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀರಾಮಭಕ್ತರನ್ನು ಹೀಯಾಳಿಸಿರುವುದನ್ನು ಅಂತಹ ಆತಂಕ ನಡೆಯಬಹುದು ಸರ್ಕಾರ ಈ ಬಗ್ಗೆ ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.
ಬಿಜೆಪಿಯ ಸಚೇತಕ ರವಿಕುಮಾರ್ ಮಾತನಾಡಿ, “ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀರಾಮಭಕ್ತರನ್ನು ಹೀಯಾಳಿಸಿ ಧಮ್ಕಿ ಹಾಕಿರುವುದನ್ನು ನೋಡಿದರೆ ಇದು ನಿಯೋಜಿತ ಕೃತ್ಯವಾಗಿದೆ ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು ಸರ್ಕಾರ ಈ ಸಂಬಂಧ ಉತ್ತರ ನೀಡಬೇಕು” ಎಂದು ಪಟ್ಟು ಹಿಡಿದರು. ಇದಕ್ಕೆ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವೇ ಎಂದು ಆಡಳಿತ ಪಕ್ಷದ ಸದಸ್ಯರು ಪ್ರಶ್ನಿಸಿದಾಗ ಆಡಳಿತ ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ಉಂಟಾಗಿ ಸದನದಲ್ಲಿ ಗದ್ದಲ ಗಲಾಟೆ ಉಂಟಾಯಿತು.
“ಗೃಹ ಸಚಿವ ಪ್ರಕರಣದ ಸಂಬಂಧಿಸಿದಂತೆ ಸರ್ಕಾರ ಉತ್ತರ ನೀಡಲಿದೆ ಸೂಕ್ತ ನಿಯಮಾವಳಿ ಪ್ರಕಾರ ವಿಷಯ ತನ್ನಿ” ಎಂದಾಗ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನಿನ್ನೆ ರಾತ್ರಿ ನಡೆದಿರುವ ಘಟನೆ ಇದಾಗಿದ್ದು ಸದನದಲ್ಲಿ ಚರ್ಚೆ ನಡೆಸಬೇಡವೇ ಎಂದರು.
ಯಾವುದೇ ನೋಟಿಸ್ ನೀಡದೆ ಹೀಗೆ ವಿಷಯ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಗಲಾಟೆ ನಡೆಸಿದಾಗ ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರ ಅವಧಿ ಬಳಿಕ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ತಿಳಿಸಿ ವಿಷಯಕ್ಕೆ ತೆರೆ ಎಳೆದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?
ಏನಿದು ಅವಹೇಳನ?
ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಗಲಾಟೆ ನಡೆದಿತ್ತು. ಅಯೋಧ್ಯೆಯಿಂದ ಮೈಸೂರಿನತ್ತ ಬರುತ್ತಿದ್ದ ಅಯೋಧ್ಯೆ ಧಾಮ ರೈಲಿನಲ್ಲಿ ಸಾವಿರಾರು ಶ್ರೀರಾಮ ಭಕ್ತರು ಪ್ರಯಾಣಿಸುತ್ತಿದ್ದು, ಅನ್ಯಕೋಮಿನ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಮಾತು ಆಡಿದ್ದಾನೆ. ಇದರಿಂದ ಕೆರಳಿದ ಶ್ರೀರಾಮಭಕ್ತರು ರೈಲು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದರು.
2 ಗಂಟೆಗಳು ರೈಲು ತಡೆ
ಪ್ರಚೋದನಕಾರಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಬೇಕೆಂದು ಪಟ್ಟು ಹಿಡಿದು ಶ್ರೀರಾಮಭಕ್ತರು ಪ್ರತಿಭಟನೆ ಮಾಡಿದರಿಂದಾಗಿ 8.15ಕ್ಕೆ ಹೊಸಪೇಟೆಗೆ ಬಂದಿದ್ದ ರೈಲು, 10 ಗಂಟೆಯವರೆಗೂ ಬಳ್ಳಾರಿಯಲ್ಲಿ ನಿಲ್ಲಬೇಕಾಯಿತು. ಎರಡು ತಾಸುಗಳ ಕಾಲ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಅಯೋಧ್ಯೆ ಧಾಮ ರೈಲನ್ನು ತಡೆಯಲಾಯಿತು.
ಘಟನೆ ನಡೆದ ಕ್ಷಣಾರ್ಧದಲ್ಲೇ ಹೊಸಪೇಟೆ ರೈಲು ನಿಲ್ದಾಣ ರಣರಂಗ ಆಗಿಬಿಟ್ಟಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ, ಶ್ರೀರಾಮ ಭಕ್ತರ ಮನವೊಲಿಸಲು ಪ್ರಯತ್ನಪಟ್ಟರು.
ರೈಲಿಗೆ ಬಿಗಿ ಭದ್ರತೆ
ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಪೊಲೀಸರಿಂದಲೂ ಮನವೊಲಿಕೆಗೆ ಪ್ರಯತ್ನ ನಡೆಯಿತು. ಹಿಂದೂಪರ, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಪ್ರಯತ್ನದಿಂದ ಕೊನೆಗೂ ಎರಡು ಗಂಟೆಗಳ ಬಳಿಕ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು. ಮುಂಜಾಗ್ರತಾ ಕ್ರಮವಾಗಿ ರೈಲಿನೊಳಗೆ ರೈಲ್ವೇ ಪೊಲೀಸರು, ಸ್ಥಳೀಯ ಪೊಲೀಸರು ಬಳ್ಳಾರಿಯವರೆಗೆ ಸಂಚಾರ ಮಾಡಿದರು.

ನಾಟಕ ಶುರು ಮಾಡಿದರು,,, ಇಲೆಕ್ಸೆನ್ ಬಂತು ನೋಡಿ ಇವರ ಉಪಟಳ ಜನರ ನೆಮ್ಮದಿ ಮೂರಾಬಟ್ಟೆ ಮಾಡಿಬಿಡುವರು,,, ವರ್ಷದಲ್ಲಿ ಒಮ್ಮೆಯಾದರೂ ಬೇಕಾಬಿಟ್ಟಿ ಬೆಲೆ ಏರಿಕೆಯಿಂದ ಜನರ ಬದುಕು ಮೂರಾಬಟ್ಟೆ ಆಗುತ್ತಿದೆ,, ಇವು ಇನ್ನೂ ಮಂದಿರದಲ್ಲಿ ಮುಳುಗಿವೆ,,,