ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಗುಜರಾತ್ ರಾಜ್ಯಕ್ಕೆ ಕೊಟ್ಟಿರುವ ಹಾಗೆ ಶೇ.50ರಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡುವುದಾದರೆ ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಶೇ.20ರಷ್ಟು ಸಬ್ಸಿಡಿ ಕೊಡಲು ಸಿದ್ಧ ಇದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ಗುಜರಾತಿನಲ್ಲಿ ನೆಲೆಯೂರಲಿರುವ ಅಮೆರಿಕಾದ ಮೈಕ್ರಾನ್ ಕಂಪನಿಗೆ ಕೇಂದ್ರ ಸರಕಾರವು ಶೇ.50ರಷ್ಟು ಸಬ್ಸಿಡಿ ಕೊಟ್ಟಿದೆ. ಇದರ ಜತೆಗೆ ಗುಜರಾತ್ ಸರ್ಕಾರ ಶೇ.20ರಷ್ಟು ಸಬ್ಸಿಡಿ ಕೊಟ್ಟಿದೆ. ಈ ರೀತಿ ಕರ್ನಾಟಕ ಸರ್ಕಾರ ಸಬ್ಸಿಡಿ ಕೊಡಲು ಸಿದ್ಧ ಇದಿಯಾ ಎಂದು ಕುಮಾರಸ್ವಾಮಿ ಮಂಗಳವಾರ ಕೇಳಿದ್ದರು.
ಇದಕ್ಕೆ ‘ಎಕ್ಸ್’ ಜಾಲತಾಣದಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿರುವ ಸಚಿವ ಪಾಟೀಲ ಅವರು ‘ಗುಜರಾತಿಗೆ ಕೊಟ್ಟ ಹಾಗೆ ಮೊದಲು ಸಬ್ಸಿಡಿ ಕೊಡಿ. ನಂತರ ರಾಜ್ಯದ ಪಾಲಿನ ಶೇ 20ರಷ್ಟು ಸಬ್ಸಿಡಿ ನೀಡುತ್ತೇವೆ. ಈ ಭರವಸೆಯಿಂದ ಕುಮಾರಸ್ವಾಮಿ ಹಿಂದೆ ಸರಿಯುವುದಿಲ್ಲ ಎನ್ನುವ ವಿಶ್ವಾಸ ಕೂಡ ಇದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಯಾವುದೇ ಉದ್ದಿಮೆ ಇರಲಿ, ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೂ ಸಮಾನ ನೀತಿ ಅನುಸರಿಸಬೇಕು ಎನ್ನುವುದು ಕರ್ನಾಟಕದ ಪ್ರತಿಪಾದನೆಯಾಗಿದೆ. ಇದು ಸಹಜನ್ಯಾಯದ ತತ್ವವಾಗಿದ್ದು, ಇದನ್ನು ಕುಮಾರಸ್ವಾಮಿ ಅವರು ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರವು ಉದ್ಯಮ ಸ್ನೇಹಿ ನೀತಿಗಳನ್ನು ಅನುಸರಿಸುತ್ತಿದೆ. ಆದರೆ ಕೇಂದ್ರ ಸರಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರಣದಿಂದಾಗಿ ಗುಜರಾತ್ ಪರ ಧೋರಣೆ ತೋರಿಸುತ್ತಿದೆ. ನಾವು ಇದನ್ನಷ್ಟೇ ಪ್ರಶ್ನೆ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದ್ದಾರೆ.
