ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಂತೂ ಮಾನ, ಮರ್ಯಾದೆ ಇಲ್ಲ. ಹಾಗಂತ ಬೇರೆಯವರಿಗೂ ಇಲ್ಲ ಎಂದೇ ಸಿದ್ದರಾಮಯ್ಯ ಭಾವಿಸಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದರು.
ನವಲಗುಂದ ಕಾಂಗ್ರೆಸ್ ಕಾರ್ಯಕ್ರಮದ ಭಾಷಣದಲ್ಲಿ ತಮ್ಮ ವಿರುದ್ಧ ಏಕ ವಚನದಲ್ಲಿ ಮಾತನಾಡಿದ್ದಕ್ಕೆ ಗರಂ ಆಗಿರುವ ಜೋಶಿ, ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
“ನೀವು ಹೇಗೆ ಪ್ರಮಾಣವಚನ ಸ್ವೀಕರಿಸಿದ್ದೀರಿ ಹಾಗೆಯೇ ನಾನು ಕೂಡ ಪ್ರಮಾಣವಚನ ಸ್ವೀಕರಿಸಿರುವೆ. ಸಿದ್ದರಾಮಯ್ಯ ಅವರಷ್ಟು ನೀಚತನಕ್ಕೆ ನಾವು ಇಳಿಯುವುದಿಲ್ಲ. ಆಡಳಿತ, ಅಧಿಕಾರ ಅವರಿಗೆ ಜಾಸ್ತಿ ಇರಬಹುದು. ಆದರೆ, ಸಂವಿಧಾನದಲ್ಲಿ ಕೇಂದ್ರ ಸರ್ಕಾರದ ಒಬ್ಬ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಮಾನರು, ಇದನ್ನು ಸಿದ್ದರಾಮಯ್ಯ ತಿಳಿಯಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಪಕ್ಷ ನಾಯಕ ಅಶೋಕ್ ಮತ್ತು ಸಾರ್ವಜನಿಕ ಸಭ್ಯತೆ
“ಯಾವುದೇ ಪೂರ್ವಾಪರ ತಿಳಿದುಕೊಳ್ಳದೆ ಉಡಾಫೆ ಹೊಡಿತಾರೆ. ಕಾಂಗ್ರೆಸ್ ಎಲ್ಲ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆಗೆ ತೊಡಕುಂಟು ಮಾಡಿದೆ. ಸೋನಿಯ ಗಾಂಧಿ ಅವರು ಗೋವಾಕ್ಕೆ ಹೋಗಿ ಹನಿ ನೀರು ಕೊಡಲ್ಲ ಎಂದಿದ್ದರು. ಇವರಿಗೆ ಎಷ್ಟು ನಾಲಿಗೆ ಇದೆ. ಕಾಂಗ್ರೆಸ್ ನವರು ವಿವೇಚನ ರಹಿತವಾಗಿ ಮಾತನಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ ಕ್ಷೇತ್ರಕ್ಕೆ ಸುಮಲತಾ ವಿಚಾರವಾಗಿ ಮಾತನಾಡಿ, “ಮಂಡ್ಯ ವಿಚಾರದಲ್ಲಿ ಎಲ್ಲರಿಗೂ ಸಮಾಧಾನವಾಗುವ ಪರಿಹಾರ ಕಂಡು ಹಿಡಿಯುತ್ತೇವೆ. ಅಧಿವೇಶನದಲ್ಲಿ ಸುಮಲತಾ ಜೊತೆಗೆ ಮಾತನಾಡಿದ್ದೇನೆ. ಒಂದು ಮನೆಯಿಂದ ಇನ್ನೊಂದು ಮನೆಗೆ ಮದುವೆ ಸಂಬಂಧ ಆದ ಕೂಡಲೇ ಎಲ್ಲಾ ಹೊಂದಾಣಿಕೆ ಆಗುವುದಿಲ್ಲ. ದೊಡ್ಡ ಪಕ್ಷಗಳು, ದೊಡ್ಡ ವ್ಯವಸ್ಥೆ, ಕೋಟ್ಯಂತರ ಜನ, ಲಕ್ಷಾಂತರ ಜನರ ಹೊಂದಾಣಿಕೆಗೆ ಸಮಯಬೇಕು” ಎಂದರು.
