- ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದೀರಾ?
- ಮೋದಿಗೆ ಕನ್ನಡಿಗರ ಮತ ಬೇಕು, ಆದರೆ, ಕನ್ನಡಿಗರಿಗೆ ಪ್ರಧಾನಿ ಕೊಡುಗೆ ಏನು?
ಮೀಸಲಾತಿ ಘೋಷಣೆ ಎಂಬುದು ಈ ಸರ್ಕಾರಕ್ಕೆ ಮಕ್ಕಳ ಆಟಿಕೆಯಂತಾಗಿದೆ. ರಾಜ್ಯ ಸರ್ಕಾರ ಯಾವ ಆಧಾರದಲ್ಲಿ ಮೀಸಲಾತಿ ಘೋಷಣೆ ಮಾಡಿದೆ. ಮೀಸಲಾತಿ ಘೋಷಣೆಗೆ ಮುನ್ನ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದೀರಾ? ಯಾರ ಸಲಹೆ ಪಡೆದು ಮೀಸಲಾತಿ ಘೋಷಣೆ ಮಾಡಿದ್ದೀರಾ? ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಜೆಡಿಎಸ್ ಪಂಚರತ್ನ ಯಾತ್ರೆ ಸಮಾರೋಪ ಯಶಸ್ವಿ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ಈ ಸರ್ಕಾರದ ಸಾಧನೆ ಬಣ್ಣ ಬಣ್ಣದ ಜಾಹೀರಾತಿಗೆ ಸೀಮಿತವಾಗಿದೆ. ಉತ್ತರ ಕರ್ನಾಟಕ ಸಿಎಂ ಕ್ಷೇತ್ರದ ಬಡತನದ ಬಗ್ಗೆ ಕೇಂದ್ರ ವರದಿ ಮಾಡಿದೆ. ಅಪೌಷ್ಟಿಕತೆಯ ಬಗ್ಗೆಯೂ ಕೇಂದ್ರ ಸರ್ಕಾರ ವರದಿ ನೀಡಿದೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಹೇಳುತ್ತಾರೆ. ಬಡತನ ಅಪೌಷ್ಟಿಕತೆ ನಿವಾರಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಮೋದಿ ಸಮಾಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಅವರನ್ನು ಸಮಾಧಿ ಮಾಡಲು ಯಾರಿಗೆ ಆಗುತ್ತದೆ. ಅಂಬೇಡ್ಕರ್ ಅವರ ಸಂವಿಧಾನ ಸಮಾಧಿ ಮಾಡಲು ಹೊರಟಿರುವುದೇ ಅವರು. ಒಬ್ಬ ಪ್ರಧಾನಿ ಬಾಯಿಂದ ಈ ರೀತಿಯ ಮಾತು ಎಷ್ಟರಮಟ್ಟಿಗೆ ಸರಿ? ಮೋದಿಗೆ ಕನ್ನಡಿಗರ ಮತ ಬೇಕು, ಕನ್ನಡಿಗರಿಗೆ ಅವರ ಕೊಡುಗೆ ಏನು” ಎಂದು ಪ್ರಶ್ನಿಸಿದರು.
“ಸಮಾವೇಶಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ. ಮುಂದಿನ ಏಪ್ರಿಲ್ 10ರವೆಗೂ ಪಂಚರತ್ನ ಯಾತ್ರೆ ಮುಂದುವರೆಯಲಿದೆ. ಬೆಂಗಳೂರ ನಗರದ ಕ್ಷೇತ್ರದಲ್ಲಿ ನಾಳೆಯಿಂದ ರಥಯಾತ್ರೆ ನಡೆಯಲಿದೆ. 6ರಂದು ಮೈಸೂರಿನ ಪಿರಿಯಾಪಟ್ಟಣ, 7 ರಂದು ಕೆಆರ್ ನಗರ ನಂತರ ಕೊಳ್ಳೇಗಾಲ ಹನೂರು ಗುಂಡ್ಲುಪೇಟೆ ಕ್ಷೇತ್ರದಲ್ಲಿ ರಥಯಾತ್ರೆ ನಡೆಸುತ್ತೇವೆ” ಎಂದರು.