- ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಆದೇಶ
- ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದ ಬಿಜೆಪಿ ನಾಯಕರು
ದೇಗುಲಗಳ ಅನುದಾನಕ್ಕೆ ತಡೆ ನೀಡಿದ್ದ ಆದೇಶ ವಾಪಸ್ ಪಡೆಯುವಂತೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಮುಜರಾಯಿ ಇಲಾಖೆ ಆಯುಕ್ತರು ಕನ್ಫ್ಯೂಸ್ ಆಗಿದ್ದಾರೆ ಅಷ್ಟೇ. ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂಬ ಯಾವ ಅನುಮಾನವೂ ಇಲ್ಲ ಎಂದು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಯಾವ ದೇವಸ್ಥಾನದ ಕೆಲಸವನ್ನೂ ನಿಲ್ಲಿಸುವುದಕ್ಕೆ ಹೋಗುವುದಿಲ್ಲ. ಸ್ಟೇಟಸ್ ರಿಪೋರ್ಟ್ ಕೇಳಿದ್ದನ್ನು ನಮ್ಮ ಇಲಾಖೆಯ ಆಯುಕ್ತರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ” ಎಂದು ಸಮಜಾಯಿಷಿ ನೀಡಿದರು.
ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ಇನ್ನೂ ಪ್ರಾರಂಭ ಆಗದಿದ್ದರೆ ಹಣ ಬಿಡುಗಡೆ ಮಾಡದಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶದಲ್ಲಿ ಸೂಚಿಸಿತ್ತು. ಇನ್ನು ಶೇ.50 ರಷ್ಟು ಹಣ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದರೆ ಅದನ್ನು ತಕ್ಷಣ ತಡೆ ಹಿಡಿದು, ಅನುದಾನ ಬಿಡುಗಡೆ ಮಾಡದಂತೆ ಉಲ್ಲೇಖಿಸಲಾಗಿತ್ತು. ಹಾಗೂ ಅನುದಾನದ ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದರೆ ಆಡಳಿತಾತ್ಮಕ ಮಂಜೂರಾತಿಯನ್ನು ತಡೆಹಿಡಿಯಲು ಸೂಚಿಸಲಾಗಿತ್ತು. ಹೀಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮೂರು ನಿರ್ದೇಶನಗಳನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶದಲ್ಲಿ ನೀಡಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಿನ ಯುದ್ಧದಲ್ಲಿ ಮಾನ ಕಳೆದುಕೊಳ್ಳುತ್ತಿರುವ ನಾಯಕರು
ಈ ಆದೇಶ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಪ್ರತಿಭಟನೆ ನಡೆಸಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ರಾಮಲಿಂಗಾರೆಡ್ಡಿ ಅವರು ಆದೇಶ ವಾಪಸ್ ಪಡೆದುಕೊಳ್ಳುವಂತೆ ದತ್ತಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ವಿವಾದ ಇಲ್ಲಿಗೆ ಕೊನೆಗೊಂಡಂತಾಗಿದೆ.