“ಬಿಜೆಪಿ ಹಾಗೂ ಮಾಜಿ ಪ್ರಧಾನಿಗಳ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮನೆಯಲ್ಲಿ ಮಹಿಳೆಯರನ್ನು ತೀಕ್ಷ್ಣವಾಗಿ ಕಂಡು, ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಸೋಲಿನ ಭೀತಿಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ” ಎಂದು ಸಂಸದ ಡಿ.ಕೆ. ಸುರೇಶ್ ಆಕ್ರೋಶ ಹೊರಹಾಕಿದರು.
ಆನೇಕಲ್ನಲ್ಲಿ ಪ್ರಚಾರದ ವೇಳೆ ಮಾಧ್ಯಮಗಳ ಪ್ರಶ್ನೆಗಳ ಜತೆ ಮಾತನಾಡಿದ ಅವರು, “ಚುನಾವಣೆ ಸೋಲಿನ ಭೀತಿಯಿಂದ ಐಟಿ, ಇಡಿ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಕೆಲವು ಅಧಿಕಾರಿಗಳು ಬಂದು ನಮ್ಮ ಕಾರ್ಯಕರ್ತರನ್ನು, ಅವರ ಕುಟುಂಬದ ಹೆಣ್ಣು ಮಕ್ಕಳನ್ನು ಬೆದರಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿದ್ದು, ಐಟಿ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ. ಅವರ ಕೆಲಸ ಕೇವಲ ಪರಿಶೀಲನೆ ಮಾಡುವುದು ಮಾತ್ರ. ಅದನ್ನು ಬಿಟ್ಟು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಆನೇಕಲ್ನ ಬಿದರಗುಪ್ಪೆ, ಮಾಯಸಂದ್ರ, ಮರಸೂರು ಸೇರಿದಂತೆ ವಿವಿಧ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ, ಹಸ್ತದ ಗುರುತಿಗೆ ಮತಯಾಚಿಸಿದೆ.
ಕಾಂಗ್ರೆಸ್ನ ಗ್ಯಾರಂಟಿಗಳು ಪ್ರತಿಯೊಬ್ಬರ ಬದುಕಿಗೆ ಆಸರೆಯಾಗಿದ್ದು, ಜನರು ತೋರಿಸುತ್ತಿರುವ ಪ್ರೀತಿ, ಉತ್ಸಾಹ, ಅಭಿಮಾನ ಕ್ಷೇತ್ರದ ಗೆಲುವಿಗೆ ಸಾಕ್ಷಿಯಾಗಲಿದೆ.#DKSuresh #BangaloreRural pic.twitter.com/LzkCV9fcyd
— DK Suresh (@DKSureshINC) April 18, 2024
“ನನ್ನ ಚಾಲಕರ ಮನೆಯಲ್ಲಿ ಅವರ ಕುಟುಂಬದವರನ್ನು ಎಳೆದಾಡಿದ್ದಾರೆ. ಮಹಿಳೆಯರನ್ನು ತೀಕ್ಷ್ಣವಾಗಿ ಕಂಡು, ಯುವಕರನ್ನು ಒಂಟಿ ಕಾಲಲ್ಲಿ ನಿಲ್ಲಿಸಿದ್ದಾರೆ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಬಿಜೆಪಿಯವರ ಕೈಗೊಂಬೆಯಾಗಿ ಐಟಿ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿದೆ. ಅವರು ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಅಧಿಕಾರಿಗಳ ದುರ್ಬಳಕೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದು ಡಿ ಕೆ ಸುರೇಶ್ ತಿಳಿಸಿದ್ದಾರೆ.
“ಚುನಾವಣೆ ನಿಷ್ಪಕ್ಷಪಾತವಾಗಿ ಚುನಾವಣೆ ಮಾಡಬೇಕು. ನಾನು ನನ್ನ ಕೆಲಸದ ಆಧಾರದ ಮೇಲೆ ಮತ ಕೇಳುತ್ತಿದ್ದೇನೆಯೇ ಹೊರತು, ನನಗೆ ಯಾರನ್ನು ಬೆದರಿಸುವ ಅಗತ್ಯವಿಲ್ಲ. ನಾನು ಆಸ್ತಿ, ಕುಟುಂಬ ಉಳಿಸಿಕೊಳ್ಳಲು ಬೇರೆಯವರ ಜತೆ ಸೇರಿ ರಾಜಕಾರಣ ಮಾಡುತ್ತಿಲ್ಲ” ಎಂದು ಪರೋಕ್ಷವಾಗಿ ಜೆಡಿಎಸ್ ಅನ್ನು ಕುಟುಕಿದರು.
“ಜೆಡಿಎಸ್ನವರು ಕ್ಷುಲ್ಲಕ ರಾಜಕಾರಣ ಮಾಡುವುದರಲ್ಲಿ ಹೆಸರುವಾಸಿ. ಅವರು ಹಿರಿಯರಿದ್ದಾರೆ. ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಮಾಡಿರುವ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ. ನಾನು ಹಾಗೂ ಶಿವಕುಮಾರ್ ಅವರಿಗೆ ಕಲ್ಲು ಹೊಡೆದಿದ್ದಾರೆ ಎಂದು ಹೇಳುತ್ತಾರಲ್ಲ, ಅವರ ಕುಟುಂಬದಲ್ಲಿ ಯಾರೆಲ್ಲಾ ಎಲ್ಲಿ ಕಲ್ಲು ಹೊಡೆದಿದ್ದಾರೆ ಎಂದು ನಾನು ತೋರಿಸುತ್ತೇನೆ. ಅವರು ಯಾರ ಜಮೀನುಗಳನ್ನು ಯಾರ ಹೆಸರಲ್ಲಿ ಹಾಕಿಕೊಂಡಿದ್ದಾರೆ ಎಂಬುದನ್ನು ತೋರಿಸಬಹುದು. ಆದರೆ ಅದರ ಅಗತ್ಯ ನಮಗಿಲ್ಲ” ಎಂದು ಡಿ.ಕೆ. ಸುರೇಶ್ ತಿಳಿಸಿದರು.
