- ಸಾಮಾಜಿಕ ನ್ಯಾಯಕ್ಕೆ ಎಳ್ಳುನೀರು ಬಿಟ್ಟ ಕಾಂಗ್ರೆಸ್ ಸರ್ಕಾರ
- ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ 15% ನಾಚಿಕೆಯಿಲ್ಲದೆ ಬೇಡಿಕೆ
“ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ಇಲಾಖೆಯ ಅಧಿಕಾರಿಗಳ ಬಳಿ ಲಂಚ ತೆಗೆದುಕೊಂಡ ಪ್ರಕರಣದಲ್ಲಿ ತರಾತುರಿಯಲ್ಲಿ ನಡೆಸುತ್ತಿರುವ ಸಿಐಡಿ ತನಿಖೆ ಗಮನಿಸಿದರೆ ಪ್ರಕರಣದಲ್ಲಿ ಸಚಿವರಿಗೆ ಕ್ಲೀನ್ ಚಿಟ್ ನೀಡುವ ಇಂಗಿತ ಸರ್ಕಾರಕ್ಕಿದ್ದಂತಿದೆ” ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸಿಐಡಿ ಅಧಿಕಾರಿಗಳು ಕೃಷಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿರುವುದು ಹಾಗೂ ಮೈಸೂರಿನಲ್ಲಿ ಅಂಚೆ ಪೆಟ್ಟಿಗೆಯ ಬಳಿ ತನಿಖೆ ಮಾಡುತ್ತಿರುವುದನ್ನು ಗಮನಿಸಿದರೆ ಸಚಿವರನ್ನು ಪ್ರಕರಣದಿಂದ ಮುಕ್ತಗೊಳಿಸುವುದೇ ಸರ್ಕಾರದ ಉದ್ದೇಶವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ” ಎಂದರು.
“ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದಲ್ಲಿ ಮಾತ್ರ ಸಚಿವರ ಲಂಚಾವತಾರ ಬೆಳಕಿಗೆ ಬರುತ್ತದೆ. ಸರ್ಕಾರ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತವಾಗಲಿ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಜಲಸುರಕ್ಷಾ ಬೆಂಗಳೂರು | ಅಂತರ್ಜಲ ಮಟ್ಟ ಹೆಚ್ಚಿಸಿ ನೀರಿನ ಸಮಸ್ಯೆ ನಿವಾರಣೆ
ಗುತ್ತಿಗೆದಾರರ ಕುಟುಂಬಗಳು ವಿಷ ಕುಡಿಯುವ ಪರಿಸ್ಥಿತಿಗೆ ತಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ
“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 80 ದಿವಸಗಳಾಗಿದೆ. ಈ ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರದ 40% ಹಗರಣವನ್ನು ಮುಂದಿಟ್ಟುಕೊಂಡು, ಎಎಪಿ ಕಾರ್ಯಕ್ರಮಗಳನ್ನೆಲ್ಲ ಕದ್ದು, ತನ್ನ ಗ್ಯಾರಂಟಿಗಳಿಗಾಗಿ ಪರಿಶಿಷ್ಟರ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಾ, ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಟ್ಟಿದೆ” ಎಂದು ಆರೋಪಿಸಿದರು.
“ಈಗ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ 15% ನಾಚಿಕೆಯಿಲ್ಲದೆ ಬೇಡಿಕೆ ಇಡುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಕಂಡಿಶನ್ ಸರ್ಕಾರದಿಂದಾಗಿ ರಾಜ್ಯದ ಗುತ್ತಿಗೆದಾರರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ತಲುಪಿರುವುದು ಈ ರಾಜ್ಯದ ದುರಂತ. ಆಮ್ ಆದ್ಮಿ ಪಕ್ಷವು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ” ಎಂದು ಎಚ್ಚರಿಸಿದರು.