ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ(ನ.27) ನಡೆಸಿದ ಜನಸ್ಪಂದನಕ್ಕೆ ಅಭೂತಪೂರ್ವವಾದ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸತತ ಏಳು ಗಂಟೆಗಳ ಕಾಲ ತಮ್ಮ ಮನೆ ಬಳಿ ಬಂದ ರಾಜ್ಯದ ಸಾವಿರಾರು ಜನರ ದೂರನ್ನು ಮುಖ್ಯಮಂತ್ರಿಗಳು ಖುದ್ದಾಗಿ ಆಲಿಸಿದ್ದರು.
ಈ ವೇಳೆ ನಾನಾ ವಿಧಗಳಲ್ಲಿ ಅಧಿಕಾರಿಗಳಿಂದ ನೊಂದವರು ಮುಖ್ಯಮಂತ್ರಿಗಳ ಬಳಿಗೆ ದೂರು ಹೊತ್ತು ತಂದಿದ್ದರು. ಆ ಮೂಲಕ ರಾಜ್ಯದ ಆಡಳಿತ ಯಾವ ರೀತಿಯಲ್ಲಿದೆ ಎಂಬುದರ ಬಗ್ಗೆ ಸಿಎಂಗೆ ಮನವರಿಕೆ ಮಾಡಿದ್ದರು.
ಸಿಎಂ ಜನತಾ ದರ್ಶನದ ಬೆನ್ನಲ್ಲೇ ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಪ್ರತಿನಿಧಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರಸಭೆಯ ಕಸದ ವಾಹನವೊಂದರ ಅಪಾಯಕಾರಿ ಪರಿಸ್ಥಿತಿಯ ವಿಡಿಯೋವೊಂದು ವೈರಲ್ ಆಗಿದ್ದು, ಸಿಎಂ ಸಿದ್ದರಾಮಯ್ಯನವರ ಕಚೇರಿಯ ಗಮನ ಸೆಳೆದಿದೆ.
ಮಂಗಳೂರು : ಉಳ್ಳಾಲ ನಗರ ಸಭೆಯ ವಾಹನ.
ನೋಡಿ ಸರ್ @utkhader @osd_cmkarnataka pic.twitter.com/PAOAzg00og— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) November 29, 2023
ಕಸ ಸಂಗ್ರಹಕ್ಕೆಂದು ಬಂದಿದ್ದ ವಾಹನವೊಂದರ ಚಾಲಕ, ವಾಹನ ಚಲಾಯಿಸಲು ವಾಹನದ ಒಳಗಡೆ ಹೋಗಬೇಕಾದರೆ ವಾಹನದ ಬಾಗಿಲನ್ನು ತೆರೆದು ಹೋಗುವ ಬದಲು, ಕಿಟಕಿಯ ಮೂಲಕ ಹೋಗುವಂತಹ ಪರಿಸ್ಥಿತಿ ಎದುರಾಗಿತ್ತು. ಆ ರೀತಿ ಹೋಗಲು ಪರದಾಡುತ್ತಿರುವ ದೃಶ್ಯವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ(WPI) ಕರ್ನಾಟಕ ಘಟಕದ ರಾಜ್ಯ ಕೋಶಾಧಿಕಾರಿ ಹಾಗೂ ಸ್ಥಳೀಯವಾಗಿ ಸಕ್ರಿಯವಾಗಿರುವ ಸಾಮಾಜಿಕ ಕಾರ್ಯಕರ್ತ ಅಬ್ದುಸ್ಸಲಾಂ ಸಿ ಎಚ್ ಎಂಬುವವರು ಸೆರೆ ಹಿಡಿದು, ಅಧಿಕಾರಿಗಳ ಬೇಜವಾಬ್ದಾರಿಯನ್ನು ಬಹಿರಂಗಗೊಳಿಸಿದ್ದಾರೆ.

ವಿಡಿಯೋ ಸೆರೆ ಹಿಡಿಯುವ ವೇಳೆ ಅಬ್ದುಸ್ಸಲಾಂ ಅವರು, “ಗಾಡಿಯ ಡ್ರೈವರ್ ಒಳಗಡೆ ಹೋಗಬೇಕಾದರೆ ಡೋರ್ ಓಪನ್ ಮಾಡಲಿಕ್ಕಾಗುವುದಿಲ್ಲ. ಆ ಡೋರ್ ಬಂದ್ ಮಾಡಿಯೇ ಒಳಗಡೆ ಹೋಗುವಂತಹ ಪರಿಸ್ಥಿತಿ. ಇದು ಉಳ್ಳಾಲ ನಗರಸಭೆಯ ಪರಿಸ್ಥಿತಿ” ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನು ನ.29ರಂದು ಕಸ ಸಂಗ್ರಹಕ್ಕೆ ಬಂದಾಗ ಸೆರೆ ಹಿಡಿದಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಅಲ್ಲದೇ, ಇದು ಸಿಎಂ ಸಿದ್ದರಾಮಯ್ಯನವರ ಕಚೇರಿಗೂ ತಲುಪಿದೆ. ಈ ಬಗ್ಗೆ ನೆಟ್ಟಿಗರೊಬ್ಬರು ಟ್ವೀಟ್ ಮಾಡಿ, ‘ಮಂಗಳೂರು : ಉಳ್ಳಾಲ ನಗರಸಭೆಯ ವಾಹನ. ನೋಡಿ ಸರ್’ ಎಂದು @osd_cmkarnataka ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡುವ ಮೂಲಕ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಕಚೇರಿಯ ಅಧಿಕಾರಿಗಳು, ‘Noted’ ಎನ್ನುವ ಮೂಲಕ ಸಂಬಂಧಪಟ್ಟವರ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.
Noted. https://t.co/GnSStouD34
— Office of the OSD to CM Karnataka (@osd_cmkarnataka) November 30, 2023
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ವಿಡಿಯೋ ಸೆರೆ ಹಿಡಿದ ಅಬ್ದುಸ್ಸಲಾಂ ಸಿ ಎಚ್ ಅವರು, “ನ.29ರಂದು ಉಳ್ಳಾಲ ನಗರಸಭೆಯ ವಾರ್ಡ್ ಸಂಖ್ಯೆ 15 ಹಿದಾಯತ್ ನಗರದ ಕಲ್ಲಾಪು ಪರಿಸರದಲ್ಲಿ ಈ ವಾಹನ ಕಸ ಸಂಗ್ರಹಕ್ಕೆ ಬಂದಾಗ ವಾಹನದ ಪರಿಸ್ಥಿತಿ ನೋಡಿ ನಿಜಕ್ಕೂ ನನಗೆ ಆಶ್ಚರ್ಯದ ಜೊತೆಗೆ ಆಘಾತವೂ ಆಯಿತು. ಈ ವಾರ್ಡಿನ ಕೌನ್ಸಿಲರ್ ಕಮರುನ್ನಿಸಾ ಎಂಬುವವರು. ಇದು ಅವರ ಗಮನಕ್ಕೆ ಬಂದಿದಿಯೋ ಅಥವಾ ನಗರಸಭೆಯ ಗಮನಕ್ಕೆ ಬಂದಿದೆಯೋ ಗೊತ್ತಿಲ್ಲ. ನಾನು ವಿಡಿಯೋ ಸೆರೆ ಹಿಡಿದಿರುವ ಉದ್ದೇಶ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಷ್ಟು ನಿರ್ಲಕ್ಷ್ಯದಿಂದ ಇದ್ದಾರೆ ಅನ್ನುವುದಷ್ಟೇ’ ಎಂದು ತಿಳಿಸಿದರು.
‘ಒಂದು ವೇಳೆ ಚಾಲಕ ವಾಹನ ಚಲಾಯಿಸುತ್ತಿರುವ ವೇಳೆ ಅಪಾಯಕಾರಿ ಸ್ಥಿತಿಯಲ್ಲಿರುವ ಬಾಗಿಲು ಏನಾದರೂ ತೆರೆದು ಅಪಘಾತ ಸಂಭವಿಸಿದರೆ ಯಾರು ಹೊಣೆ? ವಾಹನದಲ್ಲಿ ಚಾಲಕ ಮಾತ್ರವಲ್ಲದೇ ಕಸ ಸಂಗ್ರಹಿಸುವವರೂ ಕೂಡ ಇರುತ್ತಾರೆ. ಅವರ ಪ್ರಾಣಕ್ಕೆ ಬೆಲೆ ಇಲ್ಲವೇ? ಹಾಗಾಗಿ, ಉಳ್ಳಾಲ ನಗರಸಭೆಯ ಅಧಿಕಾರಿಗಳು ಮತ್ತು ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಶಾಸಕ ಹಾಗೂ ಸ್ಪೀಕರ್ ಯು ಟಿ ಖಾದರ್ ಅವರು ಕೂಡ ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಉಳ್ಳಾಲ ನಗರಸಭೆಯ ಆಯುಕ್ತೆ ವಾಣಿ ಆಳ್ವಾ, “ದುರಸ್ತಿಯಲ್ಲಿರುವ ಕಸದ ವಾಹನದ ವಿಡಿಯೋ ವೈರಲ್ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಉಳ್ಳಾಲ ನಗರಸಭೆಯ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು 2016-17ರಲ್ಲಿ ಸ್ವಚ್ಛ ಭಾರತ್ ಮಿಷನ್ನಡಿ ಖರೀದಿಸಲಾಗಿದ್ದು, ಈಗಾಗಲೇ 7 ವರ್ಷ ಹಳೆಯದಾಗಿದೆ. ಉಳ್ಳಾಲದ ಉಪ್ಪಿನ ವಾತಾವರಣಕ್ಕೆ ವಾಹನಗಳು ತುಕ್ಕು ಹಿಡಿಯಲು ಆರಂಭವಾಗಿದ್ದು, ರಿಪೇರಿ ಮಾಡಲು ಅಸಾಧ್ಯವಾಗಿರುತ್ತದೆ. ಆದರೂ ಸಹ ಪ್ರತಿ ನಿತ್ಯ ಗಾಡಿಗಳನ್ನು ತುರ್ತು ನೆಲೆಯಲ್ಲಿ ರಿಪೇರಿ ಮಾಡಿಕೊಂಡು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ 16,546 ಮನೆಗಳಿಂದ ಹಾಗೂ 3212 ವಾಣಿಜ್ಯ ಕಟ್ಟಡಗಳಿಂದ, ಪ್ರತಿ ನಿತ್ಯ ಘನತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ಒಂದು ವೇಳೆ ನಾವು ವಾಹನಗಳನ್ನು ಕಳುಹಿಸದೇ ಇದ್ದರೆ ಕಸವನ್ನೆಲ್ಲ ಜನರು ರಸ್ತೆಗೆ ಚೆಲ್ಲುತ್ತಾರೆ. ಇದು ಮತ್ತಷ್ಟು ಸಮಸ್ಯೆಗೆ ಕಾರಣವಾಗುತ್ತದೆ” ಎಂದು ತಿಳಿಸಿದ್ದಾರೆ.
“ನಗರಸಭೆಯಲ್ಲಿ ವಿವಿಧ ಯೋಜನೆಗಳಡಿ ಬಾಕಿ ಉಳಿದಿದ್ದ ಮೊತ್ತಕ್ಕೆ 5 ಹೊಸ ಅಟೋ ಟಿಪ್ಪರ್ ವಾಹನಗಳು ಹಾಗೂ 1 ಕಾಂಪ್ಯಾಕ್ಟರ್ ವಾಹನವನ್ನು ಖರೀದಿಸಲು ಹೊಸ ಕ್ರಿಯಾಯೋಜನೆಯನ್ನು ತಯಾರಿಸಿ ಆಡಳಿತಾಧಿಕಾರಿಯವರಿಂದ 2023ರ ಸೆ.30ರಂದು ಅನುಮೋದನೆ ಪಡೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಈಗಾಗಲೇ ಪ್ರಾರಂಭಿಸಲಾಗಿದೆ. ಹೊಸ ವಾಹನಗಳನ್ನು ಖರೀದಿಸಲು ಕ್ರಮವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಶಾಸಕ ಯು ಟಿ ಖಾದರ್ ಅವರ ಗಮನಕ್ಕೂ ತರಲಾಗಿದೆ” ಎಂದು ನಗರಸಭೆಯ ಆಯುಕ್ತೆ ವಾಣಿ ಆಳ್ವಾ ಈ ದಿನ.ಕಾಮ್ಗೆ ತಿಳಿಸಿದ್ದಾರೆ.
ದುರಸ್ತಿಯಲ್ಲಿರುವ ವಾಹನದಲ್ಲೇ ಕಸ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಅಧಿಕಾರ ವಹಿಸಿ ಐದಾರು ತಿಂಗಳಾಗಿದೆಯಷ್ಟೇ. ಬಂದ ಕೂಡಲೇ ಇದು ನನ್ನ ಗಮನಕ್ಕೆ ಬಂದಿತ್ತು. ಹಾಗಾಗಿ, ಕಸ ಸಂಗ್ರಹಕ್ಕೆಂದು ಸ್ಥಳೀಯವಾಗಿ ಯಾವುದೇ ಖಾಸಗಿ ಬಾಡಿಗೆ ವಾಹನಗಳಿದ್ದವರ ಬಳಿ ವಿನಂತಿಸಿದರೂ ಕೂಡ ಅವರು ಬರಲು ಒಪ್ಪುತ್ತಿಲ್ಲ. ಈ ಬಗ್ಗೆ ಕೂಡ ಪ್ರಯತ್ನಿಸಲಾಗಿದೆ. ಡಿಸೆಂಬರ್ ಒಳಗೆ ಹೊಸ ವಾಹನ ಬರಲಿದೆ’ ಎಂದು ಮಾಹಿತಿ ನೀಡಿದರು. ಜೊತೆಗೆ ಕ್ರಿಯಾಯೋಜನೆಯ ಪ್ರತಿ, ಈಗಾಗಲೇ ಟೆಂಡರ್ ಕರೆಯಲಾದ ಪ್ರತಿಯನ್ನು ನಗರಸಭೆಯ ಆಯುಕ್ತೆ ವಾಣಿ ಆಳ್ವಾ ಈ ದಿನ.ಕಾಮ್ಗೆ ಕಳುಹಿಸಿಕೊಟ್ಟಿದ್ದಾರೆ.
ಏನೇ ಆದರೂ, ಕಸದ ವಾಹನಗಳು ಈ ರೀತಿಯ ಅಪಾಯಕಾರಿ ಪರಿಸ್ಥಿತಿಗೆ ಬರುವ ಮುನ್ನವೇ ಅದನ್ನು ಗಮನಿಸಿ, ಹೊಸ ವಾಹನಗಳನ್ನು ಖರೀದಿಸುವ ಬಗ್ಗೆ ಉಳ್ಳಾಲ ಶಾಸಕ ಯು ಟಿ ಖಾದರ್ ಹಾಗೂ ಉಳ್ಳಾಲ ನಗರಸಭೆಯ ಅಧಿಕಾರಿಗಳು ಮುತುವರ್ಜಿ ವಹಿಸಬಹುದಿತ್ತಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.