ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಆದೇಶ ಒಪ್ಪಲು ಸಾಧ್ಯವಿಲ್ಲ. ಕೂಡಲೇ ನೀರು ನಿಲ್ಲಿಸಲು ಸಂಕಷ್ಟ ಸೂತ್ರ ಜಾರಿ ಆಗೋತನಕ ಆದೇಶ ಪಾಲನೆ ಮಾಡಬಾರದು ಎಂದು ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ‘ಚಿಂತನ ಮಂಥನ’ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ನೀರು ನಿರ್ವಹಣಾ ಮಂಡಳಿ ಪ್ರಾಧಿಕಾರ ಸಮಿತಿ ರದ್ದು ಮಾಡಬೇಕು. ಸ್ವತಂತ್ರವಾಗಿ ಚುನಾವಣಾ ಆಯೋಗದ ರೀತಿ ರಚನೆಯಾಗಬೇಕು. ಕನ್ನಡಪರ, ರೈತಪರ, ಜನಪರ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಹಾಗೂ ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಸಭೆಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು.
ಕರ್ನಾಟಕ ಜಲಸಂರಕ್ಷಣಾ ಸಮಿತಿ ಬೆಂಗಳೂರು, ಆಮ್ ಆದ್ಮಿ ಪಕ್ಷ ಸೇರಿದಂತೆ ಹಲವು ಕನ್ನಡಪರ ಮತ್ತು ರೈತ ಸಂಘಟನೆಗಳು ಒಟ್ಟಾಗಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಸರ್ಕಾರದ ವಚನ ಭ್ರಷ್ಟತೆ ಖಂಡಿಸಲು ಮತ್ತು ‘ನಮ್ಮ ನೀರು ನಮ್ಮ ಹಕ್ಕು’ ಪ್ರತಿಪಾದಿಸಲು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಮುುಖ್ಯಮಂತ್ರಿ ಚಂದ್ರು, “ತುರ್ತಾಗಿ ವಿಧಾನಸಭೆ ಅಧಿವೇಶನ ಕರೆಯಿರಿ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಿ. ಪರಿಣಾಮ ಏನಾಗಿದ್ದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ. ಎಲ್ಲರನ್ನೂ ಜೈಲಿಗೆ ಹಾಕಲಿ ನೋಡೋಣ” ಎಂದರು.
“ಈ ಸಂದಿಗ್ದ ಪರಿಸ್ಥಿತಿಗೆ ಕಾರಣರಾದ ಎಲ್ಲರನ್ನೂ ಖಂಡಿಸುತ್ತೇನೆ. ಈವರೆಗೂ ಆಡಳಿತ ನಡೆಸಿರುವ ಕೇಂದ್ರ ಸರ್ಕಾರಗಳು, ರಾಜ್ಯ ಸರ್ಕಾರಗಳು, ನ್ಯಾಯಾಧೀಶರು ಎಲ್ಲರೂ ಈ ಸಮಸ್ಯೆಗೆ ಕಾರಣ” ಎಂದು ಹೇಳಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, “ಚುನಾವಣಾ ಆಯೋಗ ಹೇಗೆ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ಅದೇ ರೀತಿ ಸ್ವತಂತ್ರವಾದ ನೀರು ನಿರ್ವಹಣಾ ಸಮಿತಿ ರಚಿಸಬೇಕು” ಎಂದು ಒತ್ತಾಯಿಸಿದರು.
“ಕರ್ನಾಟಕ, ತಮಿಳುನಾಡು, ಪಾಂಡಿಚೆರಿ, ಕೇರಳ ರಾಜ್ಯಗಳ ಪರಿಣಿತರು, ರೈತ ಮುಖಂಡರು, ತಜ್ಞರು ಒಳಗೊಂಡ ಸಂವಿಧಾನ ಬದ್ಧ, ಸ್ವತಂತ್ರ ಸಮಿತಿ ರಚಿಸಿ ಅದಕ್ಕೆ ಅಧಿಕಾರ ಕೊಡಬೇಕು. ಮಳೆ ಕಡಿಮೆಯಾದಾಗ, ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ನೀರು ಬಿಡುವುದು, ಬೆಳೆ ಬೆಳೆಯುವ ಬಗ್ಗೆ ಸಮಿತಿ ನಿರ್ಧಾರ ಮಾಡಿದರೆ ಪರಿಹಾರ ಕಂಡುಕೊಳ್ಳಬಹುದು” ಎಂದು ಹೇಳಿದರು.
“ಪಕ್ಷಭೇದ ಮರೆತು ನಾಡಿನ ಹಿತಕ್ಕಾಗಿ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ಮಾಡಬೇಕು. ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಅನ್ಯಾಯ ಆದಾಗ, ನಾಡು, ಜಲ, ಗಡಿ ವಿಚಾರದಲ್ಲಿ ರಾಜ್ಯಕ್ಕೆ ಸಂಕಟ ಬಂದಾಗ ನಾವು ಒಗ್ಗಟ್ಟಾಗಿ ಹೋರಾಟ ಮಾಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಂಗೇರಿ ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ
ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರ ಸಂಘದ ಅದ್ಯಕ್ಷ ಕುರುಬೂರು ಶಾಂತಕುಮಾರ್, ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಕುಮಾರ ಸ್ವಾಮಿ, ರೈತ ಮಹಿಳಾ ನಾಯಕಿ ಸುನಂದ ಜಯರಾಮ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.