- ಗ್ಲೋಬಲ್ ಇನೋವೇಷನ್ ಅಲಯನ್ಸ್ ಪಾಲುದಾರರ ಸಭೆಯಲ್ಲಿ ಅಭಿಮತ
- ‘ನಾವು ಗಡಿಗಳನ್ನು ಮೀರಿ ಸಮಗ್ರ ಪರಿಹಾರಗಳನ್ನು ರೂಪಿಸಬೇಕಾಗಿದೆ’
ಜಗತ್ತು ಇಂದು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಪರಿಹರಿಸುವಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಕ್ಷೇತ್ರ ನಿರತವಾಗಿದೆ. ಹವಾಮಾನ ಬದಲಾವಣೆಯ ಪರಿಹಾರ, ಆರೋಗ್ಯ ರಕ್ಷಣೆ ಹಾಗೂ ಸೈಬರ್ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ 2023ರ ನವೆಂಬರ್ 29ರಿಂದ ಮೂರು ದಿನಗಳ ಕಾಲ ನಡೆಯಲಿರುವ 26ನೆಯ ಬೆಂಗಳೂರು ಟೆಕ್ ಸಮಿಟ್ ಹಿನ್ನಲೆಯಲ್ಲಿ ಸೋಮವಾರ ನಡೆದ ಗ್ಲೋಬಲ್ ಇನೋವೇಷನ್ ಅಲಯನ್ಸ್ ಪಾಲುದಾರರ ಸಭೆಯಲ್ಲಿ ಸಚಿವರು ಮಾತನಾಡಿದರು.
“ನಾವು ಗಡಿಗಳನ್ನು ಮೀರಿ ಸಮಗ್ರ ಪರಿಹಾರಗಳನ್ನು ರೂಪಿಸಬೇಕಾಗಿದೆ. ಒಟ್ಟಾರೆಯಾಗಿ ಮಾನವ ಕುಲಕ್ಕೆ ಪ್ರಯೋಜನವಾಗುವಂತಹ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕಾಗಿದೆ. ಸಾಫ್ಟ್ವೇರ್ ರಫ್ತಿನ ವಿಷಯದಲ್ಲಿ ಕರ್ನಾಟಕ ದೇಶದಲ್ಲಿ ಮೊದಲನೆಯ ಸ್ಥಾನದಲ್ಲಿದೆ, ದೇಶದ ಒಟ್ಟಾರೆ ಸಾಫ್ಟ್ವೇರ್ ರಫ್ತು ಪ್ರಮಾಣದಲ್ಲಿ ಶೇ.40 ರಾಜ್ಯದ್ದಾಗಿದೆ” ಎಂದರು.
“ಬೆಂಗಳೂರು ವಿಶ್ವದ ನಾಲ್ಕನೆ ಅತಿದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿದ್ದು, ನಾವು ವಿಶ್ವದ ಅತ್ಯುತ್ತಮ ನುರಿತ ಉದ್ಯೋಗಿಗಳನ್ನು ಹೊಂದಿದ್ದೇವೆ. ನಾವು ಭವಿಷ್ಯಕ್ಕಾಗಿ ಹೆಚ್ಚು ಚೇತರಿಸಿಕೊಳ್ಳುವ ಅಗತ್ಯವಿದ್ದು, ಕರ್ನಾಟಕ ಸರ್ಕಾರ ನಾವೀನ್ಯತೆಗಳ ಸವಾಲುಗಳಿಗೆ ಸಿದ್ಧವಿದೆ. ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ ನಾವು ಕೌಶಲ್ಯ ಸಲಹಾ ಸಮಿತಿಯನ್ನು ಹೊಂದಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ನೂರು, ಸಮಸ್ಯೆ ನೂರಾರು
ಸೈಬರ್ ಸೆಕ್ಯುರಿಟಿ, ಅಗ್ರಿ ಇನೋವೇಶನ್, ಡೇಟಾ ಸೈನ್ಸ್ ಮತ್ತು ಎಐ, ಏರೋಸ್ಪೇಸ್, ಸೆಮಿಕಂಡಕ್ಟರ್ ಫೇಬಲ್ಸ್, ಮೆಷಿನ್ ಇಂಟೆಲಿಜೆನ್ಸ್ ಮತ್ತು ರೊಬೊಟಿಕ್ಸ್, ಅನಿಮೇಷನ್ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಪರಿಣತಿಯಿದೆ. ಆಟೋಮೊಬೈಲ್ ಟೆಕ್, ಗೇಮಿಂಗ್ ವೇಗವರ್ಧಕ ಮತ್ತು ವರ್ತುಲ ಆರ್ಥಿಕ ಪ್ರಯೋಗಾಲಯ ಮುಂತಾದ ಕ್ಷೇತ್ರಗಳಲ್ಲಿಯೂ ನಮ್ಮ ಪರಿಸರ ವ್ಯವಸ್ಥೆಗಳೊಂದಿಗೆ ಸಹಕರಿಸಲು ನಾವು ಬಯಸುತ್ತೇವೆ” ಎಂದೂ ಸಚಿವರು ತಿಳಿಸಿದರು.
ಆಸ್ಟ್ರೇಲಿಯ, ಕೆನಡ, ಫ್ರಾನ್ಸ್ ಇಸ್ರೇಲ್, ಜರ್ಮನಿ, ನೆದರ್ಲ್ಯಾಂಡ್ಸ್, ಜಪಾನ್, ಸ್ವಿಜರ್ಲ್ಯಾಂಡ್ ಹಾಗೂ ಬ್ರಿಟನ್ ದೇಶಗಳ ರಾಯಭಾರಿ ಕಚೇರಿಗಳ ಪ್ರತಿನಿಧಿಗಳು ಮಾತನಾಡಿ ಆಯಾ ರಾಷ್ಟ್ರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಾಧನೆಗಳ ಬಗ್ಗೆ ತಿಳಿಸಿದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಏಕ್ರೂಪ್ ಕೌರ್, ಮಾಹಿತಿ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ದರ್ಶನ್ ಸಭೆಯಲ್ಲಿ ಮಾತನಾಡಿದರು.