‘ಮೇಲಿನ ಯಾವುದೂ ಅಲ್ಲ’ ಎಂಬುದನ್ನು ಸಂಕ್ಷಿಪ್ತ ರೂಪದಲ್ಲಿ ನೋಟಾ (NOTA – None of the above) ಎನ್ನಲಾಗುತ್ತದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಕಂಡುಬರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ನೋಟಾ ಕೂಡ ಇರುತ್ತದೆ. ಇದು ಮತದಾರರು ತಮ್ಮ ಕ್ಷೇತ್ರದ ಯಾವುದೇ ಚುನಾವಣಾ ಅಭ್ಯರ್ಥಿಗೆ ಮತ ಚಲಾಯಿಸಲು ಬಯಸದಿದ್ದರೆ, ಅವರು ನೋಟಾಗೆ ಮತ ಚಲಾಯಿಸಬಹುದು. ಇದು ತಮ್ಮ ಮತವನ್ನು ಪರಿಗಣಿಸುತ್ತದೆ ಮತ್ತು ಅಭ್ಯರ್ಥಿಗಳ ವಿರುದ್ಧದ ತಮ್ಮ ವಿರೋಧವನ್ನೂ ಪ್ರತಿಬಿಂಬಿಸುತ್ತದೆ. ಆದರೂ, ನೋಟಾವನ್ನು ಭಾರತದಲ್ಲಿ ಪರಿಚಯಿಸಿದ ಸಮಯದಿಂದಲೂ ಚುನಾವಣಾ ಫಲಿತಾಂಶಗಳ ಮೇಲೆ ಅದರ ಪರಿಣಾಮವೇನು ಎಂಬುದರ ಬಗ್ಗೆ ರಾಜಕೀಯ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಈವರೆಗೆ ಚರ್ಚೆಗೆ ಉತ್ತರ ದೊರೆತಿಲ್ಲ.
ನೋಟಾ ಎಂದರೇನು?
ಚುನಾವಣೆಯ ಸಮಯದಲ್ಲಿ ತಮ್ಮ ಕ್ಷೇತ್ರದ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಚ್ಛಿಸದ ಮತದಾರರಿಗೆ ನೋಟಾ ಆಯ್ಕೆ ಲಭ್ಯವಿರುತ್ತದೆ. ಮತದಾರರು ಎಲ್ಲ ಅಭ್ಯರ್ಥಿಗಳನ್ನು ಅಧಿಕೃತವಾಗಿ ತಿರಸ್ಕರಿಸಿ, ತಮ್ಮ ಮತವನ್ನು ನೋಂದಾಯಿಸಲು ಅನುವು ಮಾಡಿಕೊಡುತ್ತದೆ.
ನೋಟಾ ಮೊದಲ ಬಾರಿಗೆ ಬಳಸಿದ್ದ ಯಾವಾಗ?
ನೋಟಾ ಆಯ್ಕೆಯನ್ನು ಮೊದಲ ಬಾರಿಗೆ 2013ರಲ್ಲಿ ನಡೆದ ಐದು ರಾಜ್ಯಗಳ – ಛತ್ತೀಸ್ಗಢ, ಮಿಜೋರಾಂ, ರಾಜಸ್ಥಾನ, ದೆಹಲಿ ಮತ್ತು ಮಧ್ಯಪ್ರದೇಶ – ವಿಧಾನಸಭಾ ಚುನಾವಣೆಯ ಸಮಯದಲ್ಲಿ ಇವಿಎಂಗಳಲ್ಲಿ ಅಳವಡಿಸಲಾಯಿತು. ಪಿಯುಸಿಎಲ್ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2013ರಲ್ಲಿ ನೀಡಿದ ತೀರ್ಪಿನ ಬಳಿಕ, ನೋಟಾವನ್ನು ಅಳವಡಿಸಲಾಗಿದೆ.
ನೋಟಾವನ್ನು ಯಾಕೆ ಪರಿಚಯಿಸಲಾಯಿತು?
ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರು ತಮ್ಮ ಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಅಸಮಾಧಾನವಿದ್ದರೆ, ಅವರು ಮತದಾನದಿಂದಲೇ ದೂರ ಉಳಿಯುತ್ತಿದ್ದರು. ಹೀಗಾಗಿ, ಮತದಾರರು ತಮ್ಮ ಮತ ಚಲಾಯಿಸುವ ಹಕ್ಕನ್ನು ಅಸಮಾಧಾನದ ಕಾರಣಕ್ಕಾಗಿ ಚಲಾಯಿಸುತ್ತಿರಲಿಲ್ಲ. ನೋಟಾ ಅಳವಡಿಸಿದ ಬಳಿಕ, ಅಭ್ಯರ್ಥಿಗಳ ವಿರುದ್ಧದ ಅತೃಪ್ತಿಯನ್ನು ಮತದಾರರು ಅಧಿಕೃತವಾಗಿ ನೋಟಾ ಮೂಲಕ ದಾಖಲಿಸಬಹುದು ಮತ್ತು ಮತದಾನ ಪ್ರಕ್ರಿಯೆಯನ್ನು ಭಾಗವಹಿಸಲು ನೋಟಾ ಪ್ರೇರೇಪಿಸುತ್ತಿದೆ.
ಚುನಾವಣಾ ಫಲಿತಾಂಶದಲ್ಲಿ ನೋಟಾ ಪರಿಣಾಮವೇನು?
ಅಂದಹಾಗೆ, 2013ರಲ್ಲಿ ನೋಟಾ ಆಯ್ಕೆಯ ಅಳವಡಿಕೆಗೆ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ‘ರಾಜಕೀಯ ಪಕ್ಷಗಳು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ಮಾಡಲು ನೋಟಾ ಪರಿಣಾಮ ಬೀರುತ್ತದೆ’ ಎಂದು ಹೇಳಿತ್ತು. ಆದರೆ, ಭಾರತದಲ್ಲಿ ನೋಟಾ ಮತವು ಶೂನ್ಯ ಪ್ರಾಮುಖ್ಯತೆಯನ್ನು ಹೊಂದಿದೆ. ಇದು, ಫಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.
ನೋಟಾ ಪರವಾಗಿ ಗರಿಷ್ಠ ಮತಗಳನ್ನು ನೀಡಿದ್ದರೂ ಸಹ, ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆಯುವ ಅಭ್ಯರ್ಥಿಯನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ನೋಟಾ – ಕೇವಲ ಅತೃಪ್ತಿಯನ್ನು ಮಾತ್ರವೇ ಪ್ರತಿಬಿಂಬಿಸುತ್ತದೆ.
ಅದಾಗ್ಯೂ, ನೋಟಾ – ರಾಜಕೀಯ ಪಕ್ಷಗಳ ಮತಗಳನ್ನು ಕಡಿತಗೊಳಿಸುತ್ತದೆ. ಆದ್ದರಿಂದ ಗೆಲುವಿನ ಅಂತರದ ಮೇಲೆ ಕೊಂಚ ಪರಿಣಾಮ ಬೀರುತ್ತದೆ ಎಂದು ಕೆಲವರು ಸಮರ್ಥಿಸಿಕೊಳ್ಳುತ್ತಾರೆ.
ಮುಖ್ಯವಿಚಾರ ಏನೆಂದರೆ, ಇಂಡೋನೇಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತ ನೋಟಾಗೆ ಬಂದಲ್ಲಿ, ಆ ಕ್ಷೇತ್ರದ ಅಭ್ಯರ್ಥಿಗಳನ್ನು ಬದಲಿಸಲಾಗುತ್ತದೆ. ಮತ್ತೊಮ್ಮೆ ಚುನಾವಣೆಯನ್ನು ನಡೆಸಲಾಗುತ್ತದೆ. ಆದರೆ, ಭಾರತದಲ್ಲಿ ಅಂತಹ ವ್ಯವಸ್ಥೆ ಇಲ್ಲ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com