ಸಾರಿಗೆ ದರ ಏರಿಕೆ ಖಂಡನೀಯ, ಜೀವ ಹಿಂಡುವ ಜಿಎಸ್‌ಟಿ ಬಗ್ಗೆ ಬಿಜೆಪಿ ಏಕೆ ಬಾಯಿ ಬಿಡುತ್ತಿಲ್ಲ?

Date:

Advertisements
ರಾಜ್ಯ ಸರ್ಕಾರ ಸಾರಿಗೆ ದರ ಏರಿಸಿರುವುದು ತಪ್ಪು. ಅದನ್ನು ಖಂಡಿಸೋಣ. ಆದರೆ ಅದಕ್ಕಿಂತ ದೊಡ್ಡ ಹೊರೆ ಕೇಂದ್ರ ಸರ್ಕಾರದ ಜಿಎಸ್‌ಟಿ, ದಿನನಿತ್ಯ ಜನರ ಜೀವ ಹಿಂಡುತ್ತಿಲ್ಲವೇ? ಒಂದು ರೂಪಾಯಿ ತೆರಿಗೆ ಪಡೆದು 15 ಪೈಸೆ ವಾಪಸ್ ಕೊಟ್ಟು ರಾಜ್ಯದ ಜನತೆಯನ್ನು ವಂಚಿಸುತ್ತಿಲ್ಲವೇ?

ಸಾರಿಗೆ ಬಸ್‌ ಪ್ರಯಾಣ ದರವನ್ನು ಆಳುವ ಕಾಂಗ್ರೆಸ್ ಸರ್ಕಾರ ಶೇ. 15 ಏರಿಕೆ ಮಾಡಿದೆ. ಪ್ರತಿದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಈ ದುರ್ದಿನಗಳಲ್ಲಿ; ನಿರುದ್ಯೋಗಗಳ ಸಂಖ್ಯೆ ಏರುತ್ತಿರುವ ಈ ಹೊತ್ತಿನಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ದರವನ್ನು ಏಕಾಏಕಿ ಶೇ. 15 ಏರಿಸುವುದು ನಿಜಕ್ಕೂ ಖಂಡನೀಯ.

ಒಂದು ಕಡೆ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಆ ಕಾರಣಕ್ಕಾಗಿಯೇ ರಾಜ್ಯದ ಮಹಿಳೆಯರ ಮೆಚ್ಚುಗೆಗೆ ಪಾತ್ರವಾಗಿದೆ. ಅವರಲ್ಲಿ ಕೊಳ್ಳುವ ಶಕ್ತಿ ಹೆಚ್ಚಿಸಿ, ರಾಜ್ಯದ ಆರ್ಥಿಕ ಚಲನಶೀಲತೆಗೆ ಒತ್ತುಕೊಟ್ಟಿದೆ. ಇದು ಸಹಜವಾಗಿಯೇ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ. ಟೀಕಿಸುತ್ತಿದ್ದ ಬಿಜೆಪಿ ಆಡಳಿತವಿರುವ ರಾಜ್ಯಗಳು ಕೂಡ ಶಕ್ತಿ ಯೋಜನೆ ಕುರಿತು ಅಧ್ಯಯನ ಮಾಡುವ, ಯೋಜನೆಯ ಸಾಧಕ-ಬಾಧಕಗಳ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸಕ್ಕೂ ಮುಂದಾಗಿವೆ.

ಆದರೆ ಅದೇ ಸರ್ಕಾರ ಏಕಾಏಕಿ ಶೇ. 15 ಸಾರಿಗೆ ದರ ಏರಿಸಿ, ಕಾರ್ಮಿಕರ, ಬಡವರ ಮತ್ತು ಮಧ್ಯಮವರ್ಗದವರ ಬದುಕನ್ನು ದುಸ್ತರ ಮಾಡಿದೆ. ಅವರ ಆಕ್ರೋಶಕ್ಕೂ ಗುರಿಯಾಗಿದೆ.

Advertisements

ಸಾರಿಗೆ ದರ ಏರಿಸಿರುವ ಕಾಂಗ್ರೆಸ್‌ ಸರ್ಕಾರದ ಕ್ರಮ ಖಂಡಿಸಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪ್ರತಿಭಟನೆ ನಡೆಸುತ್ತಿವೆ. ಶಕ್ತಿ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಮಾಡಿ, ಅದರ ಹೊರೆಯನ್ನು ಪುರುಷರ ಮೇಲೆ ಹೇರಲಾಗುತ್ತಿದೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಿಂದ ಕಿತ್ತುಕೊಳ್ಳುತ್ತಿದೆ ಎಂದು ರಾಜ್ಯ ಸರ್ಕಾರದ ನಡೆಯನ್ನು ಟೀಕಿಸುತ್ತಿವೆ. ಸುಖಾಸುಮ್ಮನೆ ಪುರುಷರನ್ನು ಮಹಿಳೆಯರ ಮೇಲೆ ಎತ್ತಿಕಟ್ಟುತ್ತಿವೆ.

ಆಳುವ ಸರ್ಕಾರ ಜನರನ್ನು ಕಷ್ಟಕ್ಕೆ ಸಿಲುಕಿಸಲು ನೋಡಿದಾಗ, ಅವರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಹವಣಿಸಿದಾಗ, ಜನರ ಪರವಾಗಿ ನಿಲ್ಲುವುದು ಎಲ್ಲರ ಕರ್ತವ್ಯ. ಹಾಗೆಯೇ ಸಾರಿಗೆ ದರ ಏರಿಕೆಯ ವಿರುದ್ಧ ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿಭಟಿಸುತ್ತಿರುವುದು ಸ್ವಾಗತಾರ್ಹ ಕ್ರಮ. ರಾಜ್ಯ ಸರ್ಕಾರವು ದರ ಏರಿಕೆ ಮಾಡಿ ಜನರಿಗೆ ಬರೆ ಹಾಕುತ್ತಿದೆ ಎಂದಿರುವ ವಿರೋಧ ಪಕ್ಷಗಳು, ಜನರು ಬೀದಿಗಿಳಿದು ಸರ್ಕಾರವನ್ನು ಪ್ರಶ್ನಿಸದಿದ್ದರೆ ಜನರ ಸುಲಿಗೆ ನಿರಂತರವಾಗಿ ನಡೆಯಲಿದೆ ಎಂದು ಜನರನ್ನು ಜಾಗೃತರನ್ನಾಗಿ ಮಾಡುತ್ತಿರುವ ಕ್ರಮ ಕೂಡ ಶ್ಲಾಘನೀಯ.

ಸಾಮಾನ್ಯ ಜನರಿಂದ, ವಿವಿಧ ಸಂಘಟನೆಗಳಿಂದ ಮತ್ತು ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ, ಸಾರಿಗೆ ಸಚಿವರು ಸಾರಿಗೆ ದರ ಏರಿಸಿದ್ದಕ್ಕೆ ಅಂಕಿ-ಅಂಶಗಳ ಮೂಲಕ ಸಮಜಾಯಿಷಿ ನೀಡಿದ್ದಾರೆ. ಪ್ರತಿವರ್ಷ ದರ ಏರಿಕೆಯಾಗುವುದು ಸಹಜ ಪ್ರಕ್ರಿಯೆ ಎಂದಿದ್ದಾರೆ. ಹಾಗೆಯೇ ನೌಕರರ ವೇತನ, ಡೀಸೆಲ್ ಬೆಲೆ ಏರಿಕೆ, ಬಸ್‌ಗಳ ಕೊಳ್ಳುವುದು ಹಾಗೂ ಹಣದುಬ್ಬರದ ಕಾರಣಗಳನ್ನು ನೀಡಿದ್ದಾರೆ.

ಸಾರಿಗೆ ಸಚಿವರ ಪ್ರಕಾರ ಇವೆಲ್ಲವೂ ಕ್ರಮಬದ್ಧವಾಗಿರಬಹುದು. ಎಲ್ಲ ಸರ್ಕಾರಗಳು ಮಾಡಿದಂತೆ ನಮ್ಮ ಸರ್ಕಾರವೂ ಮಾಡಿದೆ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ, ಬಡವರು, ಮಧ್ಯಮವರ್ಗದವರಿಗೆ ಹೊರೆಯಾಗದಂತೆ, ಸಾಮಾನ್ಯರು ಪ್ರಯಾಣಿಸುವ ಬಸ್ ದರಗಳನ್ನು ಏರಿಸದೆ, ಐಷಾರಾಮಿ ಬಸ್ ದರ ಏರಿಸಬೇಕು. ಸಾರಿಗೆ ನಿಗಮಗಳಲ್ಲಿ ಅತಿಯಾಗಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ, ಅವರಿಗೆ ಸಚಿವ ಸ್ಥಾನಮಾನ ನೀಡಿ, ಬಿಳಿಯಾನೆ ಸಾಕುವುದನ್ನು ಸರ್ಕಾರ ನಿಲ್ಲಿಸಬೇಕು. ಅಧಿಕಾರಿಗಳ ದುಂದುವೆಚ್ಚವನ್ನು ಕಡಿತಗೊಳಿಸಬೇಕು. ಮತ್ತು ಬೇರೆ ಬೇರೆ ಆದಾಯದ ಮೂಲಗಳಿಂದ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಲಭಸಾಧ್ಯವಾಗಿಸಬೇಕು.

ಆ ನಿಟ್ಟಿನಲ್ಲಿ ಸಾರಿಗೆ ಸಚಿವರು ಯೋಚಿಸುವುದನ್ನು ಬಿಟ್ಟು, ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಕೂಡ ಸಾರಿಗೆ ಸಚಿವರಾಗಿದ್ದರು. ಅವರ ಅವಧಿಯಲ್ಲಿ ಏಳು ಬಾರಿ ಸಾರಿಗೆ ದರ ಏರಿಸಲಾಗಿತ್ತು. ನಾವು ಈಗ 15% ಏರಿಸಿದ್ದಕ್ಕೆ ಪ್ರತಿಭಟಿಸುತ್ತಿರುವ ಬಿಜೆಪಿ, ಅವರ ಆಡಳಿತದಲ್ಲಿ 47.8% ಏರಿಕೆ ಮಾಡಿತ್ತು ಎಂದು ಸಮರ್ಥನೆಗಿಳಿದಿದ್ದಾರೆ.

ಆಳುವ ಸರ್ಕಾರ ಏರಿಕೆ ಮಾಡುವುದು, ವಿರೋಧ ಪಕ್ಷಗಳು ಪ್ರತಿಭಟಿಸುವುದು ಸಾಮಾನ್ಯ ಎನ್ನುವಂತಾಗಿದೆ. ಇವರ ನಂತರ ಅವರು, ಅವರ ನಂತರ ಇವರು. ಒಟ್ಟಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ನಂಬಿರುವ ಕಾರ್ಮಿಕರು, ಬಡವರು, ಮಧ್ಯಮವರ್ಗದವರು ಕಷ್ಟಕ್ಕೆ ನಷ್ಟಕ್ಕೆ ಈಡಾಗುವುದು ನಿರಂತರವಾಗಿದೆ. ಯಾವುದೇ ಸರ್ಕಾರ ಬಂದರೂ ರಾಗಿ ಬೀಸುವುದು ತಪ್ಪಲ್ಲ ಎನ್ನುವುದು ಸತ್ಯವಾಗುತ್ತಲೇ ಇದೆ.

ಸಾರಿಗೆ ದರ ಏರಿಕೆಯಾಗುತ್ತಿದ್ದಂತೆ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಮೆಟ್ರೋ ರೈಲು ದರ ಕೂಡ ಹೆಚ್ಚಳವಾಗುವ ಸುದ್ದಿ ಇದೆ. ದರ ನಿಗದಿ ಸಮಿತಿಯು ಶೇ. 40ರಷ್ಟು ಶಿಫಾರಸು ಮಾಡಿದೆ. ಆದರೆ, ಅದೇ ಅಂತಿಮವಲ್ಲ. ಮಂಡಳಿಯ ತೀರ್ಮಾನ ಅಂತಿಮವಾಗಿರುತ್ತದೆ. ಪ್ರಯಾಣಿಕರ ಹಿತಾಸಕ್ತಿಯನ್ನು ನೋಡಿಕೊಂಡು, ಬಿಎಂಆರ್‌ಸಿಎಲ್‌ಗೂ ನಷ್ಟವಾಗದಂತೆ ದರ ನಿಗದಿಯಾಗಲಿದೆ. ಶೇ. 15ರಿಂದ 20ರಷ್ಟು ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಮ್ಮ ಪ್ರಶ್ನೆ ಇರುವುದು, ಸಾರಿಗೆ ದರ ಏರಿಸಿದಾಗ ವಿರೋಧಿಸಿ ಪ್ರತಿಭಟಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ವಿರೋಧ ಪಕ್ಷಗಳ ಕೆಲಸ. ಅದನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡುತ್ತಿವೆ. ಶ್ಲಾಘನೀಯ ಕೆಲಸ. ಆದರೆ, ಕೇಂದ್ರ ಸರ್ಕಾರದ ಮೆಟ್ರೋ ದರ ಏರಿಕೆ ಮತ್ತು ಜನರ ಜೀವ ಹಿಂಡುತ್ತಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಬಗ್ಗೆಯೂ ಅವರು ಧ್ವನಿ ಎತ್ತಬೇಕಲ್ಲವೇ? ಇವುಗಳ ದರ ಏರಿಕೆಯೂ ಜನರಿಗೆ ಕಷ್ಟ-ನಷ್ಟವನ್ನುಂಟು ಮಾಡುತ್ತವಲ್ಲವೇ?

‘ಒಂದು ದೇಶ ಒಂದು ಚುನಾವಣೆ’ ಬಗ್ಗೆ ದೊಡ್ಡ ಗಂಟಲಿನಲ್ಲಿ ಸಮರ್ಥಿಸಿಕೊಳ್ಳುವ ಸಂಘಪರಿವಾರ ಮತ್ತು ಬಿಜೆಪಿ ನಾಯಕರು, ಪಾಪ್ ಕಾರ್ನ್ ಎಂಬ ಒಂದೇ ವಸ್ತುವಿಗೆ ಶೇ. 5, 12 ಮತ್ತು 18- ಮೂರು ರೀತಿಯ ಜಿಎಸ್‌ಟಿ ಜಡಿಯುವ ಕ್ರಮದ ಬಗ್ಗೆ ಮಾತನಾಡುವುದಿಲ್ಲ. ಇದು ಸಾರಿಗೆ ದರ ಏರಿಕೆಗಿಂತ ಅಮಾನುಷವಲ್ಲವೇ?

ಅದೇ ರೀತಿ ದೇಶದಲ್ಲಿ ಅತಿ ಹೆಚ್ಚು ಸರಕು ಮತ್ತು ಸೇವಾ ತೆರಿಗೆ ಪಾವತಿಸುವ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅದರ ನಂತರದ ಸ್ಥಾನ ನಮ್ಮ ಕರ್ನಾಟಕದ್ದು, ಎರಡನೆಯ ಸ್ಥಾನ. ನಮ್ಮ ರಾಜ್ಯದಿಂದ ಕೇಂದ್ರಕ್ಕೆ 2023-24ರಲ್ಲಿ ತೆರಿಗೆ ಉತ್ಪತ್ತಿಯಾಗಿರುವುದು 58,131.76 ಕೋಟಿ ರೂಪಾಯಿಗಳು. ಅನುದಾನದ ರೂಪದಲ್ಲಿ ರಾಜ್ಯಕ್ಕೆ ಬರಬೇಕಾದ ಶೇರು 37,252 ಕೋಟಿ ರೂಪಾಯಿಗಳು. ಆದರೆ ಕೇಂದ್ರದಿಂದ ಬಿಡುಗಡೆಯಾಗಿರುವ ಮೊತ್ತ 21,931 ಕೋಟಿ ರೂಪಾಯಿಗಳು ಮಾತ್ರ. ಅಂದರೆ, ಕರ್ನಾಟಕ ಒಂದು ರೂಪಾಯಿ ತೆರಿಗೆ ಕಟ್ಟಿದರೆ, ಕೇಂದ್ರ 15 ಪೈಸೆ ವಾಪಸ್ ಕೊಡುತ್ತಿದೆ. ಇದು ಕೇಂದ್ರ ಸರ್ಕಾರದ ದ್ರೋಹ-ವಂಚನೆಯಲ್ಲವೇ? ಮಲತಾಯಿ ಧೋರಣೆಯಲ್ಲವೇ?

ದುರದೃಷ್ಟಕರ ಸಂಗತಿ ಎಂದರೆ, ಮೋದಿಯ ಮಡಿಲು ಮಾಧ್ಯಮಗಳು, ಕೇಂದ್ರದಿಂದ ರಾಜ್ಯಕ್ಕಾಗುತ್ತಿರುವ ತೆರಿಗೆ ವಂಚನೆಯನ್ನು ಪ್ರಶ್ನಿಸುವುದಿಲ್ಲ. ಜನರ ಜೀವ ಹಿಂಡುತ್ತಿರುವ ಜಿಎಸ್‌ಟಿ ಬಗ್ಗೆ ಜನರಿಗೆ ತಿಳಿವಳಿಕೆ ತುಂಬುವುದಿಲ್ಲ. ನಾವೇಕೆ ಇಷ್ಟು ತೆರಿಗೆ ಕಟ್ಟುತ್ತಿದ್ದೇವೆ, ಕೇಂದ್ರವೇಕೆ ಕಿಲುಬು ಕಾಸು ಕೊಡುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲುವುದಿಲ್ಲ.  

ಬದಲಿಗೆ ಸಾರಿಗೆ ದರ ಏರಿಕೆಯಿಂದ ಜನರಿಗಾಗುತ್ತಿರುವ ಅನಾನುಕೂಲವನ್ನು ಹೇಳಲು ಆಳುವ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯನ್ನು ಎಳೆದು ತರುತ್ತಾರೆ. ಮಹಿಳೆಯರ ಮೇಲೆ ಪುರುಷರನ್ನು ಎತ್ತಿಕಟ್ಟುತ್ತಾರೆ. ಸಾರಿಗೆ ದರ ಏರಿಕೆಯ ಬಗ್ಗೆ ಪುರುಷರನ್ನಷ್ಟೇ ಮಾತನಾಡಿಸಿ, ಇದೊಂದು ಕೆಟ್ಟ ಯೋಜನೆ ಎನ್ನುವುದನ್ನು ವ್ಯವಸ್ಥಿತವಾಗಿ ಜನಮಾನಸದಲ್ಲಿ ಬಿತ್ತುತ್ತಾರೆ. ಗ್ಯಾರಂಟಿಯಿಂದ ಖಜಾನೆ ಖಾಲಿ ಎನ್ನುತ್ತಾರೆ. ರಾಜ್ಯ ದಿವಾಳಿಯತ್ತ ಸಾಗುತ್ತಿದೆ ಎಂದು ಸುದ್ದಿ ಹಬ್ಬಿಸುತ್ತಾರೆ.

ಅಷ್ಟೇ ಅಲ್ಲ, ಸಾರಿಗೆ ದರ ಏರಿಕೆಯನ್ನು ಖಂಡಿಸುವ ಸುದ್ದಿ ಮಾಧ್ಯಮಗಳು, ನಾವು ಜನಪರವಾಗಿದ್ದೇವೆಂದು ತೋರ್ಪಡಿಸಿಕೊಳ್ಳಲು, ವಿರೋಧ ಪಕ್ಷಗಳ ಪ್ರತಿಭಟನೆ, ನಾಯಕರ ಉಗ್ರ ಟೀಕೆ ಮತ್ತು ಪುರುಷರ ಆಕ್ರೋಶವನ್ನು ದಿನದ ಇಪ್ಪತ್ನಾಲ್ಕು ಗಂಟೆಯೂ ಪ್ರಸಾರ ಮಾಡುತ್ತವೆ. ಇದಕ್ಕೆ ಪೂರಕವಾಗಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ‘ದರ ಏರಿಕೆ ವಿರುದ್ಧ ಜನ ದಂಗೆ ಏಳುತ್ತಾರೆ’ ಎನ್ನುತ್ತಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ‘ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಲಂಚ ಶೇ. 60 ರಷ್ಟು ತಲುಪಿದೆ. ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ’ ಎನ್ನುತ್ತಾರೆ. ಇದು ದೊಡ್ಡ ಸುದ್ದಿಯಾಗುತ್ತದೆ. ಇವೆಲ್ಲವೂ ವ್ಯವಸ್ಥಿತವಾಗಿ ರಾಜ್ಯ ಸರ್ಕಾರವನ್ನು ಹಣಿಯುವ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ಸರಿಯಿಲ್ಲ ಎನ್ನುವ ವ್ಯವಸ್ಥಿತ ಪ್ರೊಪಗ್ಯಾಂಡ ಸುದ್ದಿಗಳಲ್ಲದೆ ಬೇರೇನೂ ಅಲ್ಲ.  

ರಾಜ್ಯ ಸರ್ಕಾರ ಸಾರಿಗೆ ದರ ಏರಿಸಿರುವುದು ತಪ್ಪು. ಅದನ್ನು ಖಂಡಿಸೋಣ. ಆದರೆ ಅದಕ್ಕಿಂತ ದೊಡ್ಡ ಹೊರೆ ಕೇಂದ್ರ ಸರ್ಕಾರದ ಜಿಎಸ್‌ಟಿ, ದಿನನಿತ್ಯ ಜನರ ಜೀವ ಹಿಂಡುತ್ತಿಲ್ಲವೇ? ಒಂದು ರೂಪಾಯಿ ತೆರಿಗೆ ಪಡೆದು 15 ಪೈಸೆ ವಾಪಸ್ ಕೊಟ್ಟು ರಾಜ್ಯದ ಜನತೆಯನ್ನು ವಂಚಿಸುತ್ತಿಲ್ಲವೇ?

ಬಿಜೆಪಿ, ಜೆಡಿಎಸ್ ಮತ್ತು ಮಡಿಲ ಮಾಧ್ಯಮಗಳು ಇದನ್ನು ಪ್ರಶ್ನಿಸದೆ, ಸಾರಿಗೆ ದರ ಏರಿಕೆಯನ್ನಷ್ಟೇ ಪ್ರಶ್ನಿಸುವುದು, ಅಲ್ಲೂ ಮಹಿಳೆಯರ ಮೇಲೆ ಪುರುಷರನ್ನು ಎತ್ತಿಕಟ್ಟುವುದು ಎಷ್ಟು ಸರಿ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X